ಚಿಕ್ಕಮಗಳೂರು ನಗರಸಭೆ: ₹5.12 ಕೋಟಿ ಉಳಿತಾಯ ಬಜೆಟ್‌

KannadaprabhaNewsNetwork | Published : Mar 16, 2025 1:49 AM

ಸಾರಾಂಶ

ಚಿಕ್ಕಮಗಳೂರು, ನಗರಸಭೆಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ₹5.12 ಕೋಟಿ ಗಳ ಉಳಿತಾಯ ಬಜೆಟ್‌ ಮಂಡಿಸಿದರು.

112.14 ಕೋಟಿ ರು. ಆದಾಯ ನಿರೀಕ್ಷೆ, ಆದಾಯದಲ್ಲಿ ಶೇ. 40 ರಷ್ಟು ಹೆಚ್ಚಳ, ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್‌ ಅವರಿಂದ ಬಜೆಟ್‌ ಮಂಡನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ನಗರಸಭೆಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ₹5.12 ಕೋಟಿ ಗಳ ಉಳಿತಾಯ ಬಜೆಟ್‌ ಮಂಡಿಸಿದರು.

ಪ್ರಾರಂಭ ಶಿಲ್ಕು ₹16.90 ಕೋಟಿ 2025-26ನೇ ಸಾಲಿನಲ್ಲಿ ₹112.14 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಅಂದರೆ, ಒಟ್ಟು ₹129.04 ಕೋಟಿ ಆದಾಯದಲ್ಲಿ ₹123.92 ಕೋಟಿ ವೆಚ್ಚ ಮಾಡಲಾಗುವುದು. ₹5.12 ಕೋಟಿ ಉಳಿಕೆಯಾಗಲಿದೆ.

ಚಿಕ್ಕಮಗಳೂರು ನಗರಸಭೆ ವ್ಯಾಪ್ತಿಯಲ್ಲಿನ ಸಾರ್ವಜನಿಕ ಆಸ್ತಿಗಳು, ಡಿಜಿಲೀಕರಣ ಮಾಡಲಾದ ಸರ್ಕಾರಿ ಹಾಗೂ ಅರೆ ಸರ್ಕಾರಿ ಆಸ್ತಿಗಳಿಂದಾಗಿ ನಗರಸಭೆಯ ಆದಾಯ ಹಿಂದಿನ ಸಾಲುಗಳಿಗೆ ಹೋಲಿಸಿದರೆ ಶೇ. 40 ರಷ್ಟು ಹೆಚ್ಚಾಗಿದೆ ಎಂದು ಅಧ್ಯಕ್ಷರು ಹೇಳಿದರು.

ಸಾರ್ವಜನಿಕರ ಮನೆ ಬಾಗಿಲಿಗೆ ಚಲನ್‌ಗಳನ್ನು ಮುದ್ರಿಸಿ ನೀಡಲು 15 ಪೋರ್ಟೆಬಲ್‌ ಹ್ಯಾಂಡ್‌ ಪ್ರಿಂಟರ್‌ ಯಂತ್ರಗಳನ್ನು ಖರೀದಿಸಲಾಗಿದೆ. 2024ರ ಏಪ್ರಿಲ್‌ನಿಂದಲೇ ಜಾರಿಗೊಳಿಸಲಾಗಿದೆ. ಇದರಿಂದ ಸಾರ್ವಜನಿಕರು ಮನೆ ಬಾಗಿಲಿನಲ್ಲಿಯೇ ಕಂದಾಯ ಪಾವತಿಸಿ, ಚಲನ್‌ ಪಡೆದು ಫೋನ್‌ ಪೇ, ಗೂಗಲ್‌ ಪೇ, ಭಾರತ್‌ ಪೇ ಮತ್ತಿತರ ಆನ್ ಲೈನ್‌ ಮೂಲಕ ಪಾವತಿಸಬಹುದಾಗಿದೆ.

ಪೌರಾಡಳಿತ ನಿರ್ದೇಶನಾಲಯದಿಂದ ಕೇಂದ್ರ ಸರ್ಕಾರದ ಯೋಜನೆ ರಾಷ್ಟ್ರೀಯ ಜಿಯೋ ಸ್ಪೇಷಿಯಲ್‌ ಜ್ಞಾನ ಆಧಾರಿತ ನಗರ ವಸತಿಗಳ ಭೂ ಸಮೀಕ್ಷೆ (ನಕ್ಷಾ ಯೋಜನೆ) ಯನ್ನು ಪ್ರಾಯೋಗಿಕವಾಗಿ ಕರ್ನಾಟಕ ರಾಜ್ಯದ 10 ನಗರ, ಪಟ್ಟಣ ಗಳನ್ನು ಆಯ್ಕೆ ಮಾಡಿಕೊಂಡಿದ್ದು, ಈ ಪೈಕಿ ಚಿಕ್ಕಮಗಳೂರು ನಗರಸಭೆ ಆಯ್ಕೆಗೊಂಡಿದೆ. ನಗರಸಭೆ ಹಾಗೂ ಸಾರ್ವಜನಿಕ ಆಸ್ತಿ ಸೇರಿದಂತೆ ಎಲ್ಲಾ ನಿಖರವಾದ ಸರ್ವೆ ಕಾರ್ಯವನ್ನು ಭೂ ಮಾಪನ ಇಲಾಖೆ ಹಾಗೂ ನಗರಸಭೆ ಜಂಟಿ ಸಹಯೋಗದೊಂದಿಗೆ ಕೈಗೊಳ್ಳಲಾಗುತ್ತಿದೆ.

ನಗರಕ್ಕೆ ನೀರು ಸರಬರಾಜು ಮಾಡುವ ಯಗಚಿ ಡ್ಯಾಂ ಬಳಿ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆಯಿಂದ ಮುಂದಿನ 25 ವರ್ಷಗಳ ಗುರಿಯನ್ನಾಧಾರಿಸಿ ₹128 ಕೋಟಿ ಮೊತ್ತದಲ್ಲಿ ಹೊಸದಾಗಿ ಜಾಕ್ವೆಲ್‌ ಮತ್ತು ಪೂರಕ ಪೈಪ್‌ ಲೈನ್‌ ನಿರ್ಮಾಣ ಮಾಡುವ ಕಾಮಗಾರಿ ಕೈಗೆತ್ತಿಗೊಳ್ಳಲಾಗಿದೆ. ಸದ್ಯದಲ್ಲೇ ಕಾಮಗಾರಿ ಪ್ರಾರಂಭ ವಾಗಲಿದೆ. ಉಂಡೇ ದಾಸರಹಳ್ಳಿ ಮತ್ತು ಶ್ರೀನಿವಾಸನಗರದಲ್ಲಿ 2 ಜಲ ಸಂಗ್ರಹಾರ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ.ವಿದ್ಯುತ್‌ ಚಿತಾಗಾರ: ಯುಐಡಿಎಫ್‌ ಯೋಜನೆಯಡಿ ರಾಮನಹಳ್ಳಿ ಸ್ಮಶಾನದಲ್ಲಿ ಆಧುನಿಕ ವಿದ್ಯುತ್‌ ಚಿತಾಗಾರ ನಿರ್ಮಿಸಲು ₹4 ಕೋಟಿ ಮಂಜೂರಾಗಿದ್ದು, ಪೌರಾಡಳಿತ ನಿರ್ದೇಶನಾಲಯದಿಂದ ಟೆಂಡರ್‌ ಕರೆಯಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ. ಬಸವನಹಳ್ಳಿ ತಾಲೂಕು ಕಚೇರಿ ಪಕ್ಕದ ರಸ್ತೆ, ರಾಮನಹಳ್ಳಿ ಫಿಲ್ಟರ್‌ ಬೆಡ್‌ ರಸ್ತೆ ಮತ್ತು ಬೈಪಾಸ್‌ ರಸ್ತೆ ಐಡಿಎಸ್‌ಜಿ ಕಾಲೇಜು ಪಕ್ಕದಲ್ಲಿ ಸುಸಜ್ಜಿತ ಫುಡ್‌ ಕೋರ್ಟ್‌ ನಿರ್ಮಿಸಲು ಉದ್ದೇಶಿಸಲಾಗಿದೆ.

ಮಯೂರಾ ಹೋಟೆಲ್‌ ಪಕ್ಕದಲ್ಲಿ ಇರುವ ಹಿಂದೂ ಮುಸಾಫಿರ್‌ ಜಾಗದಲ್ಲಿ ಸುಮಾರು ₹34 ಕೋಟಿ ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ ಮಲ್ಟಿಪಲ್‌ ಪಾರ್ಕಿಂಗ್ ವ್ಯವಸ್ಥೆ ಮಾಡಿ ವಾಣಿಜ್ಯ ಮಳಿಗೆ ನಿರ್ಮಿಸಲು ಡಿಪಿಆರ್‌ ತಯಾರಿಸಲಾಗಿದ್ದು, ಸದ್ಯದಲ್ಲೇ ಟೆಂಡರ್‌ ಕರೆದು ಕಾಮಗಾರಿ ನಿರ್ವಹಿಸಲು ಕ್ರಮ ವಹಿಸಲಾಗುವುದು. ಹೆಸರಿ ಆಸ್ಪತ್ರೆ ಮುಂಭಾಗದಲ್ಲಿರುವ ನಗರಸಭೆ ಜಾಗದಲ್ಲಿರುವ ವಸತಿ ಗೃಹಗಳನ್ನು ತೆರವುಗೊಳಿಸಿ ₹1.30 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಹೂವು ಮತ್ತು ಹಣ್ಣಿನ ಮಾರುಕಟ್ಟೆ ಮತ್ತು ಮಳಿಗೆಗಳನ್ನು ನಿರ್ಮಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಅನು ಮಧುಕರ್‌, ಪೌರಾಯುಕ್ತ ಬಿ.ಸಿ. ಬಸವರಾಜ್‌ ಹಾಗೂ ನಗರಸಭೆ ಸದಸ್ಯರು ಹಾಜರಿದ್ದರು. 15 ಕೆಸಿಕೆಎಂ 1ಚಿಕ್ಕಮಗಳೂರು ನಗರಸಭೆಯಲ್ಲಿ ಅಧ್ಯಕ್ಷೆ ಸುಜಾತಾ ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ಶನಿವಾರ ಸಾಮಾನ್ಯಸಭೆ ನಡೆಯಿತು. ಉಪಾಧ್ಯಕ್ಷೆ ಅನು ಮಧುಕರ್‌, ಪೌರಾಯುಕ್ತ ಬಿ.ಸಿ. ಬಸವರಾಜ್‌ ಇದ್ದರು.

15 ಕೆಸಿಕೆಎಂ 2ಚಿಕ್ಕಮಗಳೂರು ನಗರಸಭೆಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯೆ ಕವಿತಾ ಶೇಖರ್‌ ಮಾತನಾಡಿದರು. ಸದಸ್ಯರಾದ ಟಿ. ರಾಜಶೇಖರ್‌, ಮಧುಕುಮಾರ್‌ ರಾಜ್‌ ಅರಸ್‌ ಇದ್ದರು.

Share this article