ಜಮಖಂಡಿ: ತಾಲೂಕಿನ ಚಿಕ್ಕಲಕಿ ಗ್ರಾಮದ ಪ್ರಗತಿಪರರೈತ ಪಾಂಡು ಕೆರಬಾ ಜಮೀನಿನಲ್ಲಿ ಬೆಳೆದ ತೊಗರಿ ಬೆಳೆಗೆ ಡ್ರೋಣ್ ಮೂಲಕ ಇಫ್ಕೋ ಸಂಸ್ಥೆ ನ್ಯಾನೋ ಯೂರಿಯಾ ಸಿಂಪರಣೆ ಪ್ರಾತ್ಯಕ್ಷಿಕೆಗೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಶಶಿಧರ ಕುರೇರ ಚಾಲನೆ ನೀಡಿದರು.
ರೈತ ಪಾಂಡು ಮಾಡಿಕ ಅವರ ಸುಧಾರಿತ ಜಿ.ಆರ್.ಜಿ ತಳಿಯ ತೊಗರಿ ಬೆಳೆಯಲ್ಲಿ ಅಳವಡಿಸಿರುವ ಅಗಲಸಾಲು ಪದ್ಧತಿ ಮತ್ತು ಹನಿ ನೀರಾವರಿ ಪದ್ಧತಿ, ಮೆಕ್ಕೆಜೋಳ ವಿವಿಧ ತಳಿಗಳ ದ್ರಾಕ್ಷಿ ಬೆಳೆ, ೩ ಎಕರೆ ಪ್ರದೇಶದಲ್ಲಿರುವ ಬೃಹತ್ ಕೃಷಿಹೊಂಡ, ೨೫ ಲಕ್ಷ ವೆಚ್ಚದ ಸ್ವಯಂಚಾಲಿತ ಪ್ರಚೋದಕ ಯಂತ್ರ, ದ್ರಾಕ್ಷಿ ಸಾರ್ಟಿಂಗ್ ಹಾಗೂ ಗ್ರೇಡಿಂಗ್ ಯಂತ್ರ, ವಿವಿಧ ಆಧುನಿಕ ಕೃಷಿ ಯಂತ್ರೋಪಕರಣಗಳ ಕಾರ್ಯವೈಖರಿ ವಿಧಾನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ತೊದಲಬಾಗಿಯ ಮಲ್ಲನಗೌಡ ರುದ್ರಗೌಡರ ಒಣದ್ರಾಕ್ಷಿ ಸಂಸ್ಕರಣ ಘಟಕ, ಶೀತಲ ಘಟಕ ಹಾಗೂ ವೈನ್ ಘಟಕದ ವೀಕ್ಷಿಸಿದ ನಂತರ ದ್ರಾಕ್ಷಿ ಶೇಖರಣೆ, ಸಂಸ್ಕರಣೆ, ಆನ್ಲೈನ್ ಮಾರುಕಟ್ಟೆ ಕುರಿತು ಮಾಹಿತಿ ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೆನ್ನವರ, ಉಪಕೃಷಿ ನಿರ್ದೇಶಕ ಕೆ.ಎಸ್.ಅಗಸನಾಳ, ಸಹಾಯಕ ಕೃಷಿ ನಿರ್ದೇಶಕ ಎಂ.ಆರ್.ನಾಗೂರ, ಸಿದ್ದಪ್ಪ ಪಟ್ಟಿಹಾಳ, ಸಹಾಯಕ ತೋಟಗಾರಿಕಾ ನಿರ್ದೇಶಕ ಪ್ರವೀಣ ಗಾಣಿಗೇರ, ಕೃಷಿ ಅಧಿಕಾರಿ ರವೀಂದ್ರ ತುಳಸಿಗೇರಿ, ಆತ್ಮಯೋಜನಾಧಿಕಾರಿ ಕೆ.ಎ.ಜಮಖಂಡಿ, ಪ್ರಗತಿಪರ ರೈತರಾದ ಸಿದ್ದುಬಾ ಮಾಡಿಕ, ಮಹೇಶ ಕುಲಕರ್ಣಿ, ಜ್ಯೋತಿಬಾ ಮಾಡಿಕ ಸಹಿತ ಹಲವರು ಇದ್ದರು.