ಮಕ್ಕಳಿಗೆ ನೈತಿಕ ಶಿಕ್ಷಣವೂ ಅಗತ್ಯ

KannadaprabhaNewsNetwork | Published : Feb 24, 2025 12:32 AM

ಸಾರಾಂಶ

ಗ್ರಾಮೀಣ ಮತ್ತು ನಗರಪ್ರದೇಶದ ಶಿಕ್ಷಣ ವ್ಯವಸ್ಥೆ ನಡುವೆ ಇನ್ನೂ ವ್ಯತ್ಯಾಸವಿದ್ದು, ಅದು ಸರಿಹೋಗಬೇಕಾಗಿದೆ, ಹಳ್ಳಿಯಲ್ಲೂ ಸಮಗ್ರವಾದ ಸುಸಜ್ಜಿತ ಸೌಲಭ್ಯಗಳುಳ್ಳ ಶಿಕ್ಷಣ ಸಿಗಬೇಕಿದೆ. ಸ್ಪರ್ಧಾತ್ಮಕ ಯುಗದಲ್ಲಿ ಯಾರಲ್ಲಿ ಶ್ರಮ,ಕನಸು, ಪ್ರಯತ್ನ ಇರುತ್ತದೆಯೋ ಅವರು ಮಾತ್ರ ಬೆಳೆಯುತ್ತಾರೆ, ಎಸ್ಸೆಸ್ಸೆಲ್ಸಿ ಟರ್ನಿಂಗ್ ಪಾಯಿಂಟ್ ಆಗಿದ್ದು, ಇಲ್ಲೇ ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಹಾದಿ ನಿರ್ಧಾರವಾಗುತ್ತದೆ.

ಕನ್ನಡಪ್ರಭ ವಾರ್ತೆ ಕೋಲಾರಸತತ ೫೪ ವರ್ಷಗಳ ಕಾಲ ಮಕ್ಕಳಿಗೆ ನೀಡಿದ ನೈತಿಕ ಶಿಕ್ಷಣದಿಂದಲೇ ಇಂದು ಹಳೆ ವಿದ್ಯಾರ್ಥಿಗಳು ಮತ್ತೆ ಶಾಲೆಯತ್ತ ಬಂದು ಓದಿದ ಶಾಲೆಯ ಸುವರ್ಣ ಮಹೋತ್ಸವ ನಡೆಸುವ ಮೂಲಕ ಅಕ್ಷರ ಕಲಿಸಿದ ಗುರುಗಳ ಋಣ ತೀರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ಎಂ.ಮಲ್ಲೇಶಬಾಬು ಅಭಿಪ್ರಾಯಪಟ್ಟರು.ತಾಲೂಕಿನ ಸುಗಟೂರಿನ ಸಬರಮತಿ ಪ್ರೌಢಶಾಲೆಯ ಆವರಣದಲ್ಲಿ ಹಳೆಯ ವಿದ್ಯಾರ್ಥಿಗಳೇ ಒಗ್ಗೂಡಿ ನಡೆಸಿದ ಸುವರ್ಣ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಶಾಲೆಗಳನ್ನು ಮುನ್ನಡೆಸುವುದ ಕಷ್ಟದ ಕೆಲಸ. ಇಂತಹ ಸಂದರ್ಭದಲ್ಲೂ ೫೪ ವರ್ಷ ಶಾಲೆಯನ್ನು ಮುನ್ನಡೆಸಿದ್ದು, ಇಂದು ೧೮೦೦ ಮಕ್ಕಳು ಓದುತ್ತಿದ್ದಾರೆ ಎಂಬುದು ಶ್ಲಾಘನೀಯ ಸಂಗತಿ. ಈ ಅನುದಾನಿತ ಶಾಲೆಯ ಅಭಿವೃದ್ದಿಗೆ ತಮ್ಮ ಕೈಲಾದಷ್ಟು ನೆರವು ಒದಗಿಸುವ ಭರವಸೆ ನೀಡಿದರು.

ಹಳೆ ವಿದ್ಯಾರ್ಥಿಗಳ ನೆರವು

ಶಾಸಕ ವೆಂಕಟಶಿವಾರೆಡ್ಡಿ ಅಧ್ಯಕ್ಷತೆ ವಹಿಸಿ ‘ಸುವರ್ಣತೆನೆ’ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿ, ಈ ಶಾಲೆಯ ಹಳೆ ವಿದ್ಯಾರ್ಥಿಗಳು ಇಡೀ ದೇಶದಾದ್ಯಂತ ಉನ್ನತ ಸ್ಥಾನಗಳಲ್ಲಿದ್ದಾರೆ. ಅವರ ನೆರವು ಹರಿದು ಬಂದರೆ ಈ ಶಾಲೆಗೆ ಸಂಪನ್ಮೂಲಗಳ ಕೊರತೆ ಎದುರಾಗದು ಎಂದರು.ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, ಗ್ರಾಮೀಣ ಮತ್ತು ನಗರಪ್ರದೇಶದ ಶಿಕ್ಷಣ ವ್ಯವಸ್ಥೆ ನಡುವೆ ಇನ್ನೂ ವ್ಯತ್ಯಾಸವಿದ್ದು, ಅದು ಸರಿಹೋಗಬೇಕಾಗಿದೆ, ಹಳ್ಳಿಯಲ್ಲೂ ಸಮಗ್ರವಾದ ಸುಸಜ್ಜಿತ ಸೌಲಭ್ಯಗಳುಳ್ಳ ಶಿಕ್ಷಣ ಸಿಗಬೇಕಿದೆ. ಸ್ಪರ್ಧಾತ್ಮಕ ಯುಗದಲ್ಲಿ ಯಾರಲ್ಲಿ ಶ್ರಮ,ಕನಸು, ಪ್ರಯತ್ನ ಇರುತ್ತದೆಯೋ ಅವರು ಮಾತ್ರ ಬೆಳೆಯುತ್ತಾರೆ, ಎಸ್ಸೆಸ್ಸೆಲ್ಸಿ ಟರ್ನಿಂಗ್ ಪಾಯಿಂಟ್ ಆಗಿದ್ದು, ಇಲ್ಲೇ ನಿಮ್ಮ ಮುಂದಿನ ಭವಿಷ್ಯದ ಹಾದಿ ನಿರ್ಧಾರವಾಗುತ್ತದೆ ಎಂದರು.

ಸಮಾರಂಭದಲ್ಲಿ ಶಾಲೆಯ ಕಾರ್ಯದರ್ಶಿ ಬಿ.ವೆಂಕಟೇಶ್, ಸಬರಮತಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣಗೌಡ, ಉಪಾಧ್ಯಕ್ಷ ಸತೀಶ್ ಮೂರ್ತಿ, ಖಜಾಂಚಿ ಟಿ.ಎನ್.ಶಿವಕುಮಾರ್, ಸುಗಟೂರು ಗ್ರಾ.ಪಂ ಅಧ್ಯಕ್ಷ ಭೂಪತಿಗೌಡ, ಉಪಾಧ್ಯಕ್ಷೆ ನರಸಮ್ಮ, ಶಾಲಾ ಅಧ್ಯಕ್ಷ ಜಿ.ನಾರಾಯಣಗೌಡ ಮತ್ತಿತರರು ಇದ್ದರು.

Share this article