ಹರಪನಹಳ್ಳಿ: ತಾಲೂಕಿನಲ್ಲಿ ಬೇಸಿಗೆ ರಜೆ ಮುಗಿಸಿ ಶುಕ್ರವಾರ ಶಾಲೆಗೆ ಬಂದ ಮಕ್ಕಳನ್ನು ಶಿಕ್ಷಕರು ಸಂಭ್ರಮದಿಂದ ಬರಮಾಡಿಕೊಂಡರು.
ಅಲಗಿಲವಾಡದಲ್ಲಿ ಹೂವು ನೀಡಿ ಬರಮಾಡಿಕೊಂಡರೆ, ಬೆಂಡಿಗೇರಿಯಲ್ಲಿ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಮೇಗಳಪೇಟೆಯಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕ ನೀಡುವ ಮೂಲಕ ಸ್ವಾಗತಿಸಲಾಯಿತು. ಬಾಣಗೇರಿಯ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೂ ಗುಚ್ಚ ನೀಡುವುದರ ಮೂಲಕ ಸ್ವಾಗತಿಸಿದರು. ಕೆ.ಕಲ್ಲಹಳ್ಳಿ ಸ.ಹಿ.ಪ್ರಾ. ಶಾಲೆಯಲ್ಲಿ ಮೆರವಣಿಗೆ ಮೂಲಕ ಮಕ್ಕಳನ್ನು ಸ್ವಾಗತಿಸಲಾಯಿತು. ದೇವರತಿಮಲಾಪುರ ಗ್ರಾಮದಲ್ಲಿ ಪ್ರಸಿದ್ಧ ವೆಂಕಟೇಶ್ವರ ದೇವಸ್ಥಾನದಲ್ಲಿ ಅಕ್ಷರಾಭ್ಯಾಸ ಮಾಡಿಸಿ ನೋಟ ಪುಸ್ತಕ ಪೆನ್ಸಿಲ್ ವಿತರಿಸಿ ಸ್ವಾಗತಿಸಲಾಯಿತು. ಹೀಗೆ ಮಕ್ಕಳನ್ನು ಆಕರ್ಷಕವಾಗಿ ಶಾಲೆಗಳಿಗೆ ತಾಲೂಕಿನಾದ್ಯಂತ ಬರ ಮಾಡಿಕೊಂಡರು.
ಮೇಗಳಪೇಟೆ ಶಾಲೆಯಲ್ಲಿ ಬಿಇಒ ಯು.ಬಸವರಾಜಪ್ಪ ಮಾತನಾಡಿ, ಈ ಬಾರಿ ಬಡ ಮಕ್ಕಳಿಗೆ ಅನುಕೂಲವಾಗಲೆಂದು ಎಲ್ಕೆಜಿ, ಯುಕೆಜಿಗಳನ್ನು ಸರ್ಕಾರಿ ಶಾಲೆಗಳಲ್ಲಿ ಆರಂಭ ಮಾಡಲಾಗಿದೆ. ಶಿಕ್ಷಕರು ಸೇತುಬಂಧ ಕಾರ್ಯಕ್ರಮ ಮಾಡಲು ತಯಾರು ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.ವಿವಿಧೆಡೆ ಶಿಕ್ಷಣ ಸಂಯೋಜಕರಾದ ಗಿರಜ್ಜಿ ಮಂಜುನಾಥ, ಕಬೀರ ನಾಯ್ಕ, ಲಕ್ಷ್ಮವ್ವ ರಂಗಣ್ಣನವರ್, ಬಿಆರ್ಪಿ, ಸಿಆರ್ಪಿಗಳು ಪಾಲ್ಗೊಂಡು ಶಾಲಾ ಪ್ರಾಂಭೋತ್ಸವವನ್ನು ಯಶಸ್ವಿಯಾಗಿ ನಡೆಸಿದರು.