ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಕೊಡಗು ಜಿಲ್ಲೆಗೆ ಕ್ರೀಡೆ ಎಂಬುದು ಪರ್ಯಾಯ ಹೆಸರಾಗಿದ್ದು ಕೊಡಗಿನ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸೋಮವಾರಪೇಟೆ ತಾಲೂಕು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕರೆ ನೀಡಿದರು.ಸುಂಟಿಕೊಪ್ಪ ಸಂತ ಮೇರಿ ಆಂಗ್ಲ ಸಂಯುಕ್ತ ಕಾಲೇಜಿನಲ್ಲಿ ಶನಿವಾರ ಸಂಜೆ ಆಯೋಜಿಸಲಾಗಿದ್ದ ಕ್ರೀಡಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸೋಮವಾರಪೇಟೆ ಕುಶಾಲನಗರ ತಾಲೂಕುಗಳಲ್ಲಿ ಮಡಿಕೇರಿ ಜನಪ್ರಿಯ ಶಾಸಕ ಡಾ.ಮಂತರ್ಗೌಡ ಅವರ ನಿರ್ದೇಶನ ಮತ್ತು ಉತ್ತೇಜನದ ಮೇರೆಗೆ ಆರು ಶ್ರೇಷ್ಠಗುಣ ಮಟ್ಟದ ವಾಲಿಬಾಲ್ ಮೈದಾನಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.ಸೋಮವಾರಪೇಟೆ ಜಯವೀರ ಮಾತೆ ದೇವಾಲಯದ ಧರ್ಮಗುರುಗಳಾದ ರೆ.ಪಾ.ಅವಿನಾಶ್ ಮಾತನಾಡಿ, ಸಂತೋಷವನ್ನು ಅಂಗಡಿಯಲ್ಲಿ ಖರೀದಿಸಲು ಆಗುವುದಿಲ್ಲ. ಸಂತೋಷವನ್ನು ನಮ್ಮೊಳಗೆ ಉಳಿಸಿಕೊಳ್ಳಬೇಕಾದರೆ ನಾವು ದೈಹಿಕವಾಗಿ ಸದೃಢರಾಗಿರಬೇಕು. ದೈಹಿಕವಾಗಿ ಸದೃಢರಾಗಿಬೇಕಾದರೆ ಕ್ರೀಡೆ ಅತ್ಯವಶ್ಯಕ ಪಠ್ಯ ವಿಷಯಗಳಲ್ಲಿ ಸಾಧಿಸಿದ ಸಾಧನೆಯನ್ನು ಕ್ರೀಡಾಕ್ಷೇತ್ರದಲ್ಲಿ ಸಾಧಿಸಬಹುದು ಎಂಬುದನ್ನು 18 ವರ್ಷದ ಬಾಲಕ ಜಿ.ಬುಟ್ಟೇಶ್ ಸಾಧಿಸಿ ತೋರಿಸಿದ್ದಾನೆ. ಆತನ ತಂದೆ ತನ್ನ ವೃತ್ತಿಯನ್ನೇ ಮರೆತು ಮಗನ ಭವಿಷ್ಯಕ್ಕಾಗಿ ತ್ಯಾಗ ಮಾಡಿದ್ದಾರೆಂದು ಅವರು ಬಣ್ಣಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂತ ಆಂಗ್ಲ ಮಾಧ್ಯಮ ಶಾಲೆಯ ವ್ಯವಸ್ಥಾಪಕರಾದ ರೆ. ಫಾ.ವಿಜಯಕುಮಾರ್ ವಹಿಸಿ ಮಾತನಾಡಿ, ಪೋಷಕರು ತಮ್ಮಿಂದ ಸಾಧಿಸಲಾಗದನ್ನು ಮಕ್ಕಳ ಮೇಲೆ ಹೇರಬೇಡಿ. ಮಕ್ಕಳು ಅವರ ಇಷ್ಟದ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರೋತ್ಸಾಹಿಸಿ ಎಂದು ಕರೆ ನೀಡಿದರು. ಜಗತ್ತಿನಲ್ಲಿ ಅತೀ ಹೆಚ್ಚು ಕನಸುಗಳು ಮತ್ತು ಜ್ಞಾನ ಹುದುಗಿರುವ ಮನುಷ್ಯನ ಸಮಾಧಿಯಾಗಿದ್ದು, ಇದನ್ನು ಮನಗಾಣಬೇಕು ಎಂದು ಅವರು ಕಿವಿಮಾತು ಹೇಳಿದರು.ಮಕ್ಕಳ ಮೇಲೆ ತಮ್ಮ ಕನಸುಗಳನ್ನು ಏರುವ ಮೂಲಕ ಪೋಷಕರು ತಮ್ಮ ಸ್ವಾರ್ಥ ಮತ್ತು ತಪ್ಪನ್ನು ಪ್ರದರ್ಶಿಸುತ್ತಿದ್ದಾರೆಂದು ಫಾ.ವಿಜಯಕುಮಾರ್ ವಿಷಾದಿಸಿದರು.
ಸಮಾರಂಭದ ವೇದಿಕೆಯಲ್ಲಿ ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಜೋವಿಟಾ ವಾಸ್ , ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಸೇಲ್ವರಾಜ್ ಹಾಗೂ ಸಹ ಶಿಕ್ಷಕರು ಇದ್ದರು.ಕ್ರೀಡಾ ಸಮಾರಂಭದ ಮೊದಲಿಗೆ ಧ್ವಜಾರೋಹಣ ನಡೆಸಿ ಪಾರಿವಾಳವನ್ನು ಹಾರಿ ಬಿಡುವ ಮೂಲಕ ಸಮಾರಂಭಕ್ಕೆ ಅತಿಥಿಗಳು ಚಾಲನೆ ನೀಡಿದರು.
ಶಾಲಾ ಮಕ್ಕಳಿಂದ ನಡೆಸಿದ ವ್ಯಾಯಾಮ, ನೃತ್ಯ ಹಾಗೂ ಸಾಹಸ ಪ್ರದರ್ಶನಗಳು ನೆರೆದಿದ್ದ ಪೋಷಕರ ಹಾಗೂ ಸಾರ್ವಜನಿಕರು ಮನಸೂರೆಗೊಳಿಸಿತ್ತು.