ಪೊನ್ನಂಪೇಟೆ: ಬಡತನ ಮತ್ತು ಹಸಿವಿನ ಮಹತ್ವ ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ತಿಳಿಯುವಂತಾಗಬೇಕು. ಜೊತೆಗೆ ಅನ್ನದ ಬೆಲೆಯನ್ನು (ಮೌಲ್ಯವನ್ನು) ಅರಿತಿರಬೇಕು. ಮಕ್ಕಳಿಗೆ ಬಡತನ ಮತ್ತು ಹಸಿವಿನ ಅರಿವು ಮೂಡಿಸುವುದು ಅವರಲ್ಲಿ ಕೃತಜ್ಞತೆ, ಸಹಾನುಭೂತಿ ಮತ್ತು ಜವಾಬ್ದಾರಿಯುತ ನಡವಳಿಕೆಯನ್ನು ಬೆಳೆಸಲು ಪೂರಕವಾಗುತ್ತದೆ ಎಂದು ವಿರಾಜಪೇಟೆಯ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥರಾದ ಪೂಜಾ ಸಜೇಶ್ ಹೇಳಿದ್ದಾರೆ.
ಹಸಿವಿಗೆ ಯಾವುದೇ ಜಾತಿ- ಮತಗಳ ಭೇದವಿಲ್ಲ. ಹೊಟ್ಟೆ ಹಸಿದಾಗ ಹಸಿವಿನ ನೋವು ಎಲ್ಲರಿಗೂ ಒಂದೇ ಆಗಿರುತ್ತದೆ. ಆದ್ದರಿಂದ ಬಡತನವನ್ನು ಯಾವುದೇ ಮಾನದಂಡಗಳಿಂದ ಅಳೆಯಬಾರದು ಮಾತ್ರವಲ್ಲದೆ, ಬಡತನವನ್ನು ಕೀಳರಿಮೆಯಿಂದ ಕಾಣಬಾರದು ಎಂದು ಹೇಳಿದರು.ವಿದ್ಯಾರ್ಥಿಗಳೆಲ್ಲರೂ ಬುದ್ಧಿವಂತರು. ಯಾರೂ ದಡ್ಡರಲ್ಲ. ಆಲಸ್ಯ ದಡ್ಡತನಕ್ಕೆ ದಾರಿ ಮಾಡಿ ಕೊಡುತ್ತದೆ. ಆಲಸ್ಯವೇ ವಿದ್ಯಾರ್ಥಿಗಳ ಬಹುದೊಡ್ಡ ಶತ್ರು ಎಂದು ಅಭಿಪ್ರಾಯಪಟ್ಟರು
ಅನ್ವಾರುಲ್ ಹುದಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಪ್ರಮುಖರಾದ ಅಬೂಬಕ್ಕರ್ ಹಾಜಿ, ಪ್ರಾಂಶುಪಾಲರಾದ ಇಲ್ಯಾಸ್, ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಆಡಳಿತಾಧಿಕಾರಿ ರಕ್ಷಿತಾ, ಶಿಕ್ಷಕಿಯಾದ ಕೃತಾ, ಲೀನಾ, ಸಿಬ್ಬಂದಿಗಳಾದ ಎಂ. ಎ. ಮುನ್ನಾ, ರಫೀಕ್ ಮತ್ತಿತರರಿದ್ದರು.