ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಜಿಲ್ಲಾ ಪಂಚಾಯತ್ ನ ಸರ್. ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ 2024ನೇ ವರ್ಷದ ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ ಪ್ರಯುಕ್ತ ಆಯೋಜಿಸಿದ್ದ ‘ಗ್ರಾಮಮಟ್ಟದ ಪಿಡಿಒಗಳಿಗೆ ಮತ್ತು ತಾಲೂಕು ಮಟ್ಟದ ಇಒಗಳಿಗೆ ಮಕ್ಕಳ ದತ್ತು ಪ್ರಕ್ರಿಯೆ ಕುರಿತು ಜಿಲ್ಲಾಮಟ್ಟದ ತರಬೇತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳಿಲ್ಲದವರು ಶಾಶ್ವತವಾಗಿ ಮಗುವಿನ ಹಕ್ಕು ಬಾಧ್ಯತೆಗಳೊಂದಿಗೆ ಮತ್ತು ಜವಾಬ್ದಾರಿಗಳನ್ನು ಕಾನೂನು ಬದ್ಧವಾಗಿ ಪಡೆದುಕೊಳ್ಳುವುದೇ ದತ್ತು. ದತ್ತು ಪ್ರಕ್ರಿಯೆಗೆ ಪರಿತ್ಯಕ್ತ, ಅನಾಥ, ಒಪ್ಪಿಸಲ್ಪಟ್ಟ ಮಕ್ಕಳು ಒಳಪಡುತ್ತಾರೆ. ಮಕ್ಕಳ ಮಾರಾಟ ಶಿಕ್ಷಾರ್ಹ ಅಪರಾಧ. ಮಕ್ಕಳನ್ನು ಮಾರುವುದು ಅಥವಾ ಕೊಳ್ಳುವುದು ಅಥವಾ ಕಾನೂನು ಬಾಹಿರ ದತ್ತು ಪ್ರಕಿಯೆಯಲ್ಲಿ ತೊಡಗಿಸುವುದು ಶಿಕ್ಷಾರ್ಹ ಅಪರಾಧ. ಮಕ್ಕಳನ್ನು ಮಾರುವವರಿಗೂ ಹಾಗೂ ಹಾಗೂ ಕೊಳ್ಳುವವರಿಗೂ ಬಾಲ ನ್ಯಾಯಕಾಯ್ದೆ 2015, ಸೆಕ್ಷನ್ 81ರ ಅನ್ವಯ 5 ವರ್ಷಗಳವರೆಗೂ ಸೆರೆಮನೆ ವಾಸದೊಂದಿಗೆ 1 ಲಕ್ಷದವರೆಗೆ ದಂಡ ವಿಧಿಸಲಾಗುವುದು. ಈ ಅಪರಾಧದಲ್ಲಿ ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿ ಶಾಮೀಲಾದರೆ 3 ವರ್ಷಗಳಿಗೆ ಕಡಿಮೆ ಇಲ್ಲದಂತೆ 7 ವರ್ಷಗಳವರೆಗೆ ವಿಸ್ತರಣೆಯಾಗುವುದು. ದತ್ತು ಪಡೆಯಲು ಇಚ್ಚಿಸುವ ದಂಪತಿಗಳು ನೋಂದಣಿ ಮಾಡಿಕೊಳ್ಳಲು ಕೇಂದ್ರ ಸರ್ಕಾರದ https://cara.wcd.gov.in ಅಥವಾ https://carings.wcd.gov.in ವೆಬ್ಸೈಟ್ ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಎಲ್ಲಾ ಅಧಿಕಾರಿಗಳಿಗೆ ವಿಡಿಯೋ ಮತ್ತು ಆಡಿಯೋ ಮುಖಾಂತರ ದತ್ತು ಪ್ರಕ್ರಿಯೆ ಬಗ್ಗೆ ಮತ್ತು ಮಕ್ಕಳ ಹಕ್ಕುಗಳ ಕುರಿತು ಅರಿವು ಮೂಡಿಸಲಾಯಿತು.ಜಿಪಂ ಉಪಕಾರ್ಯದರ್ಶಿ ಅತಿಕ್ ಪಾಷಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವೆಂಕಟೇಶ್ ರೆಡ್ಡಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ನೌತಾಜ್ ಬಿ. ಮತ್ತಿತರರು ಭಾಗವಹಿಸಿದ್ದರು.