ಮಕ್ಕಳಿಗೆ ಉತ್ತಮ ಶಿಕ್ಷಣ, ಆದರ್ಶ ಮೌಲ್ಯ, ಸಂಸ್ಕಾರ, ಸಂಸ್ಕೃತಿ ನೀಡಿ ಅವರನ್ನು ಆದರ್ಶ ವ್ಯಕ್ತಿಗಳನ್ನಾಗಿ ಮಾಡಬೇಕು
ಗದಗ: ಪಾಲಕರು ಮಕ್ಕಳಿಗೆ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಿ ಮುನ್ನಡೆಯಲು ಪ್ರೇರಣೆ ನೀಡಬೇಕು. ಇನ್ನೊಂದು ಮಗುವಿನೊಂದಿಗೆ ನಿಮ್ಮ ಮಗು ಹೊಲಿಕೆ ಮಾಡಬೇಡಿ, ಪ್ರೋತ್ಸಾಹಿಸಿ ಎಂದು ವಿಪ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ನಗರದ ಕೆ.ಸಿ.ರಾಣಿ ರೋಡದಲ್ಲಿರುವ ಜ್ಞಾನಶ್ರೀ ಎಜ್ಯುಕೇಶನಲ್ ಟ್ರಸ್ಟ್ನ ಯುರೋ ಕಿಡ್ಸ್ ಶಾಲೆಯ ಪ್ರಥಮ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕೆಲವು ಮಕ್ಕಳಿಗೆ ಜ್ಞಾಪಕಶಕ್ತಿ, ವಿಷಯ ಗ್ರಹಿಸುವಿಕೆಯಲ್ಲಿ ಒಂದಿಷ್ಟು ವ್ಯತ್ಯಾಸ ಇರಬಹುದು ಆದರೆ ಅದನ್ನು ಆ ಮಗುವಿಗೆ ಗೊತ್ತಾಗದ ರೀತಿಯಲ್ಲಿ ಪ್ರೋತ್ಸಾಹಿಸಿ ಅಭ್ಯಾಸಕ್ಕೆ ಅಣಿಗೊಳಿಸಿ. ಮಕ್ಕಳಲ್ಲಿ ಅನುಕರಣೆಯ ಸ್ವಭಾವವು ಪಾಲಕ ಪೋಷಕರ ಚಲನವಲನ ಗ್ರಹಿಸುತ್ತವೆ. ಆದ್ದರಿಂದ ಪಾಲಕರು ಆದರ್ಶ ಮೌಲ್ಯ ರೂಢಿಸಿಕೊಳ್ಳಬೇಕು ಎಂದರು.
ಮಕ್ಕಳಿಗೆ ಆಸ್ತಿ ಮಾಡದೇ ಅವರನ್ನೇ ಆಸ್ತಿಯನ್ನಾಗಿ ಮಾಡಬೇಕು ಅಂದರೆ ಮಕ್ಕಳಿಗೆ ಉತ್ತಮ ಶಿಕ್ಷಣ, ಆದರ್ಶ ಮೌಲ್ಯ, ಸಂಸ್ಕಾರ, ಸಂಸ್ಕೃತಿ ನೀಡಿ ಅವರನ್ನು ಆದರ್ಶ ವ್ಯಕ್ತಿಗಳನ್ನಾಗಿ ಮಾಡಬೇಕು. ಒಳ್ಳೆ ನೈತಿಕ ಶಿಕ್ಷಣ, ಸದ್ಗುಣಗಳಿಂದ ಮಕ್ಕಳನ್ನು ಬೆಳೆಸಬೇಕು ಅದಕ್ಕೆ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಹಂತದ ಶಿಕ್ಷಣ ಪೂರಕವಾಗುವದು ಎಂದರು.
ಪ್ರೊ.ಶಿವಾನಂದ ಕವಲೂರ ಮಾತನಾಡಿ, ಯುರೋ ಕಿಡ್ಸ್ ಒಂದೇ ವರ್ಷದಲ್ಲಿ ಪಾಲಕ ಪೋಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಶಾಲೆಯಿಂದ ಮಕ್ಕಳ ಭವಿಷ್ಯ ಉಜ್ವಲವಾಗಲು ಅಡಿಪಾಯದ ಶಿಕ್ಷಣ ಸಿಗುವಂತಾಗಲಿ ಎಂದರು.
ಈ ವೇಳೆ ಮಾರುತಿ ಮಾಳಿ, ಪಿ.ಬಿ. ಭಾವನೂರ, ಡಾ. ಜಗದೀಶ ಶಿರೋಳ, ಸ್ನೇಹಾ ಗೋಡಖಿಂಡಿ, ಊರ್ಮಿಳಾ ಗುರುಪ್ರಸಾದ ಸೇರಿದಂತೆ ಮಕ್ಕಳು, ಪಾಲಕರು ಇದ್ದರು.
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪ್ರತಿಭಾನ್ವಿತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಜ್ಞಾನಶ್ರೀ ಎಜ್ಯುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ. ಎಚ್.ಐ.ಮಾಳಿ ಸ್ವಾಗತಿಸಿದರು. ನಯನಾ ಮಲ್ಲಾಡದ ಪ್ರಾರ್ಥಿಸಿದರು. ವಿನ್ಸಂಟ್ ಪಾಟೀಲ ನಿರೂಪಿಸಿದರು. ಕಾರ್ಯದರ್ಶಿ ಡಾ. ಅರುಣಾ ಮಾಳಿ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.