- ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ಬಣ್ಣನೆ । ಪುರಸಭೆ ಸಭಾಭವನದಲ್ಲಿ ಪೌರಕಾರ್ಮಿಕರ ದಿನಾಚರಣೆ
ಕನ್ನಡಪ್ರಭ ವಾರ್ತೆ ಚನ್ನಗಿರಿ
ಜನರು ಬೆಳಗ್ಗೆ ಎದ್ದೇಳುವ ಮೊದಲೇ ನಗರ, ಪಟ್ಟಣಗಳ ಸ್ವಚ್ಚತಾ ಕೆಲಸಗಳನ್ನು ಮಾಡುತ್ತಾ ಸಾಂಕ್ರಾಮಿಕ ರೋಗಗಳು ಹರಡದಂತೆ ನೋಡಿಕೊಳ್ಳುತ್ತಾರೆ. ಜನತೆ ಆರೋಗ್ಯ ಕಾಪಾಡುವಲ್ಲಿ ರಕ್ಷಕರಂತೆ ಕೆಲಸ ನಿರ್ವಹಿಸುವ ಅವರು ನಿಜವಾದ ವೈದ್ಯರಂತೆ ಎಂದು ಶಾಸಕ ಬಸವರಾಜು ವಿ.ಶಿವಗಂಗಾ ಬಣ್ಣಿಸಿದರು.ಮಂಗಳವಾರ ಪುರಸಭೆ ಸಭಾ ಭವನದಲ್ಲಿ ಏರ್ಪಡಿಸಿದ್ದ ಪೌರಕಾರ್ಮಿಕರ ದಿನ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಪೌರಕಾರ್ಮಿಕರಾದ ನೀವುಗಳು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವಲ್ಲಿ ಆದ್ಯತೆ ನೀಡಿ, ಉನ್ನತಮಟ್ಟದ ಶಿಕ್ಷಣ ಕೊಡಿಸಬೇಕು. ಪೌರಕಾರ್ಮಿಕರ ಶ್ರೇಯೋಭಿವೃದ್ಧಿಗೆ ಸರ್ಕಾರ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ. ಅವುಗಳ ಸದ್ಬಳಕೆಗೆ ಗಮನ ನೀಡಬೇಕು ಎಂದ ಶಾಸಕರು, ಕರ್ತವ್ಯ ನಿರ್ವಹಿಸುವಾಗ ತಪ್ಪದೇ ರಕ್ಷಣಾ ಕವಚಗಳನ್ನು, ಸುರಕ್ಷತಾ ವಸ್ತುಗಳನ್ನು ಧರಿಸಿರಬೇಕು ಎಂದು ಮನವಿ ಮಾಡಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ ಮಾತನಾಡಿ, ಇಲಾಖೆ ವತಿಯಿಂದ ಪೌರಕಾರ್ಮಿಕರ ಅಭಿವೃದ್ಧಿ ನಿಗಮ ಮತ್ತು ವಿವಿಧ ಸೌಲಭ್ಯಗಳು, ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಸಹಾಯಧನವಾಗಿ ₹7 ಸಾವಿರ ಮೊತ್ತದ ಚೆಕ್ಗಳನ್ನು ಶಾಸಕ ಶಿವಗಂಗಾ ವಿತರಣೆ ಮಾಡಿದರು.
ಮುಖ್ಯ ಅತಿಥಿಗಳಾಗಿ ತಹಸೀಲ್ದಾರ್ ಎನ್.ಜೆ.ನಾಗರಾಜ್, ತಾಪಂ ಇಒ ಪ್ರಕಾಶ್, ಸಮಾಜ ಕಲ್ಯಾಣಾ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರವೀಂದ್ರಕುಮಾರ್ ಅಥರ್ಗಾ, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಇಮ್ರಾನ್, ಪೌರ ನೌಕರರ ಸಂಘದ ಅಧ್ಯಕ್ಷ ಎಚ್.ಬಸವರಾಜ್, ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ಕಂದಾಯ ಅಧಿಕಾರಿ ಮಂಜುನಾಥ್, ಲೆಕ್ಕಾಧಿಕಾರಿ ಪ್ರೇಮಲೀಲಾ, ಪುರಸಭೆ ಸದಸ್ಯರು ಉಪಸ್ಥಿತರಿದ್ದರು. ಸೌಮ್ಯ ಪ್ರಾರ್ಥಿಸಿದರು.
(ಬಾಕ್ಸ್) * ಡಾ.ಅಂಬೇಡ್ಕರ್ಗೆ ಜೈಕಾರಪೌರ ಕಾರ್ಮಿಕರ ದಿನಾಚರಣೆ ನಿಮಿತ್ತವಾಗಿ ಮಂಗಳವಾರ ಬೆಳಗ್ಗೆ 11 ಗಂಟೆಯಿಂದ ಪುರಸಭೆ ಆವರಣದಿಂದ ಶ್ವೇತವಸ್ತ್ರಧಾರಿಗಳಾದ ಪುರುಷ ಪೌರಕಾರ್ಮಿಕರು, ಹಸಿರು ಉಡುಗೆ ತೊಟ್ಟ ಮಹಿಳಾ ಪೌರಕಾರ್ಮಿಕರು ಸಂವಿಧಾನಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರ ಹಿಡಿದು ಜೈಕಾರಗಳನ್ನು ಹಾಕುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ನಡೆಸಿದರು. ಪೌರಕಾರ್ಮಿಕರು ಮೆರವಣಿಗೆಯಲ್ಲಿ ಉಲ್ಲಾಸದಿಂದ ನರ್ತನ ಮಾಡುತ್ತಾ ಪ್ರಮುಖ ವೃತ್ತಗಳಲ್ಲಿ ಮಾನವ ಸರಪಳಿ ನಿರ್ಮಿಸಿ, ಜೈಕಾರಗಳ ಮೊಳಗಿಸಿ ಸಂಭ್ರಮಿಸಿದರು.
-30ಕೆಸಿಎನ್ಜಿ2.ಜೆಪಿಜಿ: ಚನ್ನಗಿರಿಯಲ್ಲಿ ಪೌರಕಾರ್ಮಿಕರ ದಿನ ಸಮಾರಂಭವನ್ನು ಶಾಸಕ ಬಸವರಾಜು ವಿ.ಶಿವಗಂಗಾ ಉದ್ಘಾಟಿಸಿದರು.
-30ಕೆಸಿಎನ್ಜಿ3.ಜೆಪಿಜಿ: ಚನ್ನಗಿರಿಯಲ್ಲಿ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪೌರಕಾರ್ಮಿಕರು ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ಭಾವಚಿತ್ರವನ್ನು ಹಿಡಿದು, ಜೈಕಾರ ಮೊಳಗಿಸುತ್ತ ಮೆರವಣಿಗೆ ನಡೆಸಿದರು. ಜನಪ್ರತಿನಿಧಿಗಳು, ಅಧಿಕಾರಿಗಳು, ನೌಕರರು ಕಾರ್ಯಕ್ರಮಕ್ಕೆ ಸಾಥ್ ನೀಡಿದರು.