ಖಾಲಿ ನಿವೇಶನಗಳಲ್ಲಿ ನಗರಸಭೆಯ ಸ್ವಚ್ಛತಾ ಅಭಿಯಾನ

KannadaprabhaNewsNetwork | Published : Jan 30, 2025 12:30 AM

ಸಾರಾಂಶ

ರಾಮನಗರ: ಸ್ವಚ್ಛ ರಾಮನಗರಕ್ಕೆ ಮುಂದಾಗಿರುವ ನಗರಸಭೆ ಇದೀಗ ನಗರದಲ್ಲಿರುವ ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸುವ ಕಾರ್ಯಕ್ಕೂ ಚಾಲನೆ ನೀಡಿದೆ.

ರಾಮನಗರ: ಸ್ವಚ್ಛ ರಾಮನಗರಕ್ಕೆ ಮುಂದಾಗಿರುವ ನಗರಸಭೆ ಇದೀಗ ನಗರದಲ್ಲಿರುವ ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸುವ ಕಾರ್ಯಕ್ಕೂ ಚಾಲನೆ ನೀಡಿದೆ.

ಕಳೆದ ಎರಡು ದಿನಗಳಿಂದ ನಗರದ ವಿವಿಧ ಬಡಾವಣೆಗಳಲ್ಲಿರುವ ಖಾಲಿ ನಿವೇಶನಗಳನ್ನು ಗುರುತಿಸಿ ಅದರಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ತೊಡಗಿದ್ದಾರೆ.

ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಉಪಾಧ್ಯಕ್ಷೆ ಆಯಿಷಾ ಬಾನು, ಆಯುಕ್ತ ಜಯಣ್ಣ ಹಾಗೂ ಸದಸ್ಯರೊಂದಿಗೆ ಬೆಳ್ಳಂಬೆಳಗ್ಗೆ ವಿವಿಧ ಬಡಾವಣೆಗಳಲ್ಲಿನ ಖಾಲಿ ನಿವೇಶನಗಳ ಸ್ವಚ್ಛತಾ ಕಾರ್ಯವನ್ನು ವೀಕ್ಷಿಸಿದರು.

ಮಾರುತಿ ನಗರ, ಎಂ.ಜಿ.ರಸ್ತೆ ಆಲದ ಮರ ವೃತ್ತ, ಕಾಯಿಸೊಪ್ಪಿನ ಬೀದಿ ಹೊಳೆ ರಸ್ತೆ, ವಿವೇಕಾನಂದ ನಗರ ಮುಖ್ಯ ರಸ್ತೆ, ಪಟೇಲ್ ಶಾಲೆ ಬಳಿ, ಮೆಹಬೂಬ ನಗರ, ಟಿಪ್ಪುನಗರ, ರೆಹಮಾನಿಯ ನಗರ ಮುಂತಾದ ವಾರ್ಡುಗಳಲ್ಲಿ ಅಧ್ಯಕ್ಷ ಶೇಷಾದ್ರಿ ಅಧಿಕಾರಿಗಳು ಮತ್ತು ಸದಸ್ಯರೊಂದಿಗೆ ಸಂಚರಿಸಿ ಸ್ವಚ್ಛವಾಗಿರುವ ಖಾಲಿ ನಿವೇಶನಗಳ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಕೆ.ಶೇಷಾದ್ರಿ, ರಾಮನಗರದ ಸ್ವಚ್ಛ ಮತ್ತು ಶುದ್ಧ ಪರಿಸರಕ್ಕೆ ಸಂಕಲ್ಪ ಮಾಡಿದ್ದೇವೆ. ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯಾಗಿ ನಗರಸಭೆ ವ್ಯಾಪ್ತಿಯಲ್ಲಿರುವ ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳುಸುವ ಪ್ರಕ್ರಿಯೆ ಆರಂಭವಾಗಿದೆ ಎಂದರು.

ನಗರಸಭಾ ವ್ಯಾಪ್ತಿಯಲ್ಲಿ ಸುಮಾರು 1500 ಖಾಲಿ ನಿವೇಶನಗಳಿವೆ. ಬಹುತೇಕ ಎಲ್ಲ ಖಾಲಿ ನಿವೇಶನಗಳಲ್ಲಿಯೂ ಗಿಡ, ಗಂಟೆಗಳು ಬೆಳೆದಿವೆ. ತ್ಯಾಜ್ಯವೂ ಸೇರಿದೆ. ಇದು ಪರಿಸರಕ್ಕೂ ತೊಂದರೆಯಾಗುತ್ತದೆ. ಹೀಗಾಗಿ ಖಾಲಿ ನಿವೇಶನಗಳ ಸ್ವಚ್ಛತೆಯನ್ನು ಆರಂಭಿಸಿದ್ದೇವೆ. ಈಗಾಗಲೆ ಸುಮಾರು 100ಕ್ಕೂ ಹೆಚ್ಚು ನಿವೇಶನಗಳಲ್ಲಿ ಸ್ವಚ್ಛಗೊಳಿಸಲಾಗಿದೆ ಎಂದು ಹೇಳಿದರು.

ನಗರಸಭೆಯಿಂದ ಸ್ವಚ್ಛಗೊಳಿಸುತ್ತಿರುವ ನಿವೇಶನಕ್ಕೆ ಪ್ರತಿ ಚದರಡಿಗೆ ತಲಾ 1 ರು.ನಂತೆ ಸ್ವಚ್ಛತಾ ಶುಲ್ಕ ವಿಧಿಸಲಾಗುವುದು. ಅಂದರೆ 30-40 ಅಡಿ ಅಳತೆ ನಿವೇಶನಕ್ಕೆ 1200 ರು. ಶುಲ್ಕ ನಿಗದಿ ಪಡಿಸಲಾಗಿದೆ. ಈ ಶುಲ್ಕವನ್ನು ಆಸ್ತಿ ಕಂದಾಯಕ್ಕೆ ಸೇರಿಸಿ ಮಾಲೀಕರಿಂದ ಪಾವತಿ ಮಾಡಿಕೊಳ್ಳಲಾಗುತ್ತದೆ ಎಂದರು.

ಖಾಲಿ ನಿವೇಶನಗಳಲ್ಲಿ ಗಿಡಗಂಟಿಗಳು, ತ್ಯಾಜ್ಯ ತುಂಬಿರುವುದರಿಂದ ಬೀದಿ ನಾಯಿ, ಹಾವು ಮುಂತಾದ ವಿಷಜಂತುಗಳು ಸೇರಿವೆ. ಇದರಿಂದ ಅಕ್ಕಪಕ್ಕದ ಮನೆಗಳಿಗೆ ತೊಂದರೆಯಾಗುತ್ತಿದೆ ಎಂದು ಮನೆ ಮಾಲೀಕರು ದೂರುತ್ತಿದ್ದರು. ನಗರಸಭೆ ವತಿಯಿಂದ ಕೈಗೊಂಡಿರುವ ಈ ಅಭಿಯಾನ ಕಠಿಣ ಕಾರ್ಯ. ಆದರೂ ನಗರಸಭೆಯ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಪೌರಕಾರ್ಮಿಕರು ನಗರದ ವಿಚಾರದಲ್ಲಿ ಶ್ರಮಿಸಲು ಉತ್ಸುಕರಾಗಿದ್ದಾರೆ ಎಂದು ತಿಳಿಸಿದರು.

ಸ್ವಚ್ಛ ರಾಮನಗರ ಸಂಕಲ್ಪಕ್ಕೆ ಅನುಗುಣವಾಗಿ ಮೊದಲ ಹೆಜ್ಜೆಯಾಗಿ ದಿನನಿತ್ಯ ಬೆಳಗ್ಗೆ ಜನ ಸಂಚಾರ ಆರಂಭವಾಗುವ ಮುನ್ನ ಪ್ರಮುಖ ರಸ್ತೆಗಳಲ್ಲಿ ತ್ಯಾಜ್ಯವನ್ನು ತೆರವುಗೊಳಿಸಲಾಗುತ್ತಿದೆ. ಚಳಿ, ಗಾಳಿಯನ್ನು ಲೆಕ್ಕಿಸದೆ ಪೌರಕಾರ್ಮಿಕರು ನಗರದ ಸೌಂದರ್ಯ ಮತ್ತು ನಾಗರಿಕರ ಆರೋಗ್ಯದ ದೃಷ್ಠಿಯಿಂದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿದ್ದಾರೆ. ಮತ್ತೊಂದು ಹೆಜ್ಜೆಯಾಗಿ ಖಾಲಿ ನಿವೇಶನಗಳ ಸ್ವಚ್ಛತೆ ಆರಂಭವಾಗಿದೆ. ನಿವೇಶನಗಳ ಸ್ವಚ್ಛತೆ ಒಂದು ಬಾರಿಗೆ ಮಾತ್ರ ಮಾಡುತ್ತಿದ್ದೇವೆ. ಬಳಿಕ ನಿವೇಶನಗಳ ಮಾಲೀಕರೆ ಜಾಗೃತಿ ವಹಿಸಿ ತಮ್ಮ ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಸ್ವಚ್ಛ ರಾಮನಗರದ ಪರಿಕಲ್ಪನೆ ಸಾಧಿಸಬೇಕಾದರೆ ನಾಗರಿಕರು ಸ್ವಯಂ ಇಚ್ಚೆಯಿಂದ ನಗರಸಭೆಯ ಈ ಅಭಿಯಾನದಲ್ಲಿ ಭಾಗಿಯಾಗಬೇಕು. ತಮ್ಮ ಮನೆಯ ಸುತ್ತಮುತ್ತಲ ಪರಿಸರವನ್ನು ತಾವೇ ಕಾಪಾಡಿಕೊಳ್ಳಬೇಕು ಎಂದು ಶೇಷಾದ್ರಿ ಮನವಿ ಮಾಡಿದರು.

ನಗರಸಭೆಯ ಸದಸ್ಯರಾದ ಅಜ್ಮತ್, ಫೈರೋಜ್ ಪಾಷ, ಸೋಮಶೇಖರ್ (ಮಣಿ), ಮುತ್ತುರಾಜ್, ಪರಿಸರ ವಿಭಾಗದ ಎಇಇ ಸುಬ್ರಹ್ಮಣ್ಯ, ಆರೋಗ್ಯ ನಿರೀಕ್ಷಕ ವಿಜಯ್ ಕುಮಾರ್, ಮುಖಂಡರಾದ ಲಕ್ಷ್ಮೀಪತಿ, ಶಫಿ ಅಹಮದ್‌ ಇತರರು ಹಾಜರಿದ್ದರು.

29ಕೆಆರ್ ಎಂಎನ್ 1.ಜೆಪಿಜಿ

ರಾಮನಗರ ನಗರಸಭೆ ಅಧ್ಯಕ್ಷ ಶೇಷಾದ್ರಿ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಖಾಲಿ ನಿವೇಶನದಲ್ಲಿ ಬೆಳೆದಿದ್ದ ಗಿಡಗಂಟಿ ತೆರವುಗೊಳಿಸಿರುವುದನ್ನು ವೀಕ್ಷಿಸಿದರು.

Share this article