ಚನ್ನಪಟ್ಟಣ: ನಗರದ ಎಲೇಕೇರಿಯ ಬಳಿಯ ಕುಂಬಾರಗುಂಡಿ ಪ್ರದೇಶದಲ್ಲಿ ನಗರದ ಕಸ ತಂದು ಸುರಿಯುತ್ತಿದ್ದು, ಇದರಿಂದ ಆ ಪ್ರದೇಶದ ವಾತಾವರಣ ಕಲುಷಿತಗೊಂಡಿದ್ದು, ಕೂಡಲೇ ಇದನ್ನು ತೆರೆವುಗೊಳಿಸುವಂತೆ ಆಗ್ರಹಿಸಿ ಬಡಾವಣೆಯ ನಿವಾಸಿಗಳು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಗಾಳಿ ಬಂದಂತೆಲ್ಲ ದುರ್ವಾಸನೆ ಅಧಿಕಗೊಳ್ಳುತ್ತಿದೆ. ಇದರಿಂದ ಮನೆಗಳಲ್ಲಿ ಕೂರುವುದು ದುಸ್ತರವಾಗಿದೆ. ಇಲ್ಲಿನ ಪರಿಸರ ಹಾಳಾಗಿದ್ದು, ಮಕ್ಕಳು, ಹಿರಿಯರ ಆರೋಗ್ಯಕ್ಕೆ ಇದು ಮಾರಕವಾಗಿ ಪರಿಣಮಿಸಿದೆ. ಅಡುಗೆ ಮಾಡುವುದು, ಆಹಾರ ಸೇವಿಸುವುದು ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.
ಈ ಪ್ರದೇಶ ನಗರದ ಎಲೇಕೇರಿ ಹಾಗೂ ೧೮ನೇ ವಾರ್ಡ್ ವ್ಯಾಪ್ತಿಗೆ ಬರುತ್ತದೆ. ಸಮಸ್ಯೆ ಕುರಿತು ನಗರಸಭೆ ಸದಸ್ಯರನ್ನು ಪ್ರಶ್ನಿಸಿದರೆ, ನೀವು ನಮಗೆ ಮತ ನೀಡಿಲ್ಲ, ಕುಮಾರಸ್ವಾಮಿ ಅವರನ್ನು ಕೇಳಿ ಅನ್ನುತ್ತಾರೆ. ಇಂತಹ ವಾತಾವರಣದಲ್ಲಿ ನಾವು ಜೀವಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.ನಗರಸಭೆ ಅಧಿಕಾರಿಗಳು ಈ ಕೂಡಲೇ ಕಸವನ್ನು ಇಲ್ಲಿಂದ ತೆರವುಗೊಳಿಸಬೇಕು. ಇನ್ನು ಮುಂದೆ ನಗರಸಭೆಯ ಕಸದ ವಾಹನಗಳು ಈ ಪ್ರದೇಶದಲ್ಲಿ ಕಂಡುಬಂದಲ್ಲಿ, ಅದನ್ನು ನಾವೇ ತಡೆದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪೊಟೋ೨೫ಸಿಪಿಟಿ೨: ಚನ್ನಪಟ್ಟಣ ನಗರಸಭೆ ಆವರಣದಲ್ಲಿ ಕುಂಬಾರಗುಂಡಿ ನಿವಾಸಿಗಳು ಕಸ ತೆರವುಗೊಳಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಿದರು.