ಹಾವೇರಿ: ಬೆಂಗಳೂರಿನಲ್ಲಿ ಇತ್ತೀಚೆಗೆ ಆರ್ಸಿಬಿ ವಿಜಯೋತ್ಸವ ವೇಳೆ ನಡೆದ ಕಾಲ್ತುಳಿತ ಪ್ರಕರಣಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಿದ್ದು, ಪೊಲೀಸರನ್ನು ಎತ್ತಂಗಡಿ ಮಾಡುವುದಕ್ಕಿಂತ ಪ್ರಕರಣಕ್ಕೆ ಸಚಿವರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಹೊಣೆ ಹೊರಬೇಕು ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದೊಂದು ಬುದ್ಧಿ ಇಲ್ಲದ ಅತ್ಯಂತ ಬೇಜವಾಬ್ದಾರಿ ಸರ್ಕಾರ. ಇಂತಹ ಸರ್ಕಾರ ನೋಡಿರಲಿಲ್ಲ. ಬುದ್ಧಿಗೇಡಿ ಸರ್ಕಾರ ಇದು ಎಂದು ವಾಗ್ದಾಳಿ ನಡೆಸಿದರು.ಆರ್ಸಿಬಿ ಮ್ಯಾಚ್ ಗೆದ್ದ ದಿನ ರಾತ್ರಿಯಿಡಿ ಅಭಿಮಾನಿಗಳು ವಿಜಯೋತ್ಸವ ಮಾಡಿದ್ದಾರೆ. ಅದಕ್ಕೆ ಪೊಲೀಸರು ಬಂದೋಬಸ್ತ್ ನೀಡಿದ್ದಾರೆ. ಬೆಳಗ್ಗೆ ತರಾತುರಿಯಲ್ಲಿ ವಿಜಯೋತ್ಸವ ಹಮ್ಮಿಕೊಂಡಿದ್ದು, ಪೊಲೀಸರು ಯಾವ ರೀತಿ ಭದ್ರತೆ ನೀಡಬೇಕು. ಇವರೇನು ಒಲಿಂಪಿಕ್ ಗೆದ್ದು ಬಂದಿದ್ದಾರಾ? ಆಯೋಜಕರು ಸಹ ಬೇಜವಾಬ್ದಾರಿ ಮಾಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಾಗಿಲು ಮುಚ್ಚಿದ್ದು ಈ ಅನಾಹುತಕ್ಕೆ ಕಾರಣ. ಈ ಸರ್ಕಾರಕ್ಕೆ ರಾಜ್ಯ ಆಡಳಿತ ಮಾಡಲು ಅರ್ಹತೆ ಇಲ್ಲ. ಇಡೀ ಕಾರ್ಯಕ್ರಮ ಗೊಂದಲಮಯವಾಗಿತ್ತು. ಅವರ ಚೇಲಾಗಳೇ ವೇದಿಕೆಯಲ್ಲಿದ್ದರು. ಪೊಲೀಸರನ್ನು ಎತ್ತಂಗಡಿ ಮಾಡುದಕ್ಕಿಂತ ಪ್ರಕರಣಕ್ಕೆ ಸಚಿವರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಹೊಣೆ ಎಂದು ಆರೋಪಿಸಿದರು.ಕ್ರೀಡಾಂಗಣದ ಹೊರಗಡೆ ಸಾವಿನ ಸುದ್ದಿ ಬಂದರೂ ಕ್ರೀಡಾಂಗಣದ ಒಳಗೆ ಕಾರ್ಯಕ್ರಮ ಮುಂದುವರಿಸಿದ್ದಾರೆ. ಒಂದು ಕಡೆ ವಿಜಯೋತ್ಸವ, ಇನ್ನೊಂದು ಶವಯಾತ್ರೆ ಮಾಡಿದ್ದಾರೆ. ಇದೊಂದು ಸರ್ಕಾರನಾ? ರಾಜ್ಯದಲ್ಲಿ ಕೋಮುಗಲಭೆ, ಅಪಹರಣ, ಗಲಾಟೆ ಕೊಲೆ ಪ್ರಕರಣಗಳು ಹೆಚ್ಚಾಗಿದೆ ಎಂದರು.ವಿರೋಧ ಪಕ್ಷ ಸಾವಿನಲ್ಲೂ ರಾಜಕಾರಣ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ, 11 ಜನರು ಸತ್ತರು ನಾವು ಕೇಳಬಾರದಾ? ಕೆಎಸ್ಸಿಎ ಮೇಲೆ ಕೇಸ್ ಆಗಿದ್ದು ಸರಿ ಇದೆ. ಅದರೆ ಕಾನೂನು ಸುವ್ಯವಸ್ಥೆ ನಿರ್ವಹಣೆ ಮಾಡಲು ಸರ್ಕಾರ ವಿಫಲವಾಗಿದೆ. ಇದರ ಹೊಣೆಯನ್ನು ಸರ್ಕಾರವೇ ಹೊರಬೇಕು ಎಂದರು.ಡಿವೈಡರ್ಗೆ ಬಸ್ ಡಿಕ್ಕಿ: 8 ಪ್ರಯಾಣಿಕರಿಗೆ ಗಾಯ
ಶಿಗ್ಗಾಂವಿ: ಸಾರಿಗೆ ಬಸ್ಸೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ೮ ಪ್ರಯಾಣಿಕರು ಗಾಯಗೊಂಡ ಘಟನೆ ಪಟ್ಟಣದ ಗರುಡ ಹೋಟೆಲ್ ಸಮೀಪದ ರಾಷ್ಟ್ರೀಯ ಹೆದ್ದಾರಿ ೪೮ರಲ್ಲಿ ಶುಕ್ರವಾರ ಜರುಗಿದೆ.ಹುಬ್ಬಳ್ಳಿಯಿಂದ ಹಾನಗಲ್ಲ ಕಡೆಗೆ ತೆರಳುತ್ತಿದ್ದ ಸಾರಿಗೆ ಬಸ್ ಡಿವೈಡರ್ಗೆ ಡಿಕ್ಕಿ ಹೊಡೆದಿದ್ದು, ವಾಹನ ಸರ್ವಿಸ್ ರಸ್ತೆಗೆ ಬಿದ್ದಿದ್ದು, ಘಟನೆಯಲ್ಲಿ 8 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಶಿಗ್ಗಾಂವಿ ಪೊಲೀಸ್ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.