ನೀತಿ ಆಯೋಗದ ಸಭೆಗೆ ಸಿಎಂ ಹಾಜರಾಗದೇ ರಾಜ್ಯಕ್ಕೆ ಅನ್ಯಾಯ: ಬೊಮ್ಮಾಯಿ

KannadaprabhaNewsNetwork |  
Published : Jul 29, 2024, 12:53 AM IST
ಮಾಜಿ ಸಿಎಂ | Kannada Prabha

ಸಾರಾಂಶ

ಗೃಹ ಸಚಿವರಿಗೆ ವೆಟರ್ನರಿ ಜ್ಞಾನ ಇದೆ ಎಂದು ನನಗೆ ಗೊತ್ತಿರಲಿಲ್ಲ! ಬಾಕ್ಸ್‌ನಲ್ಲಿ ಸಿಕ್ಕಿರುವ ಮಾಂಸ ಯಾವುದು ಎಂದು ತಜ್ಞರೇ ಹೇಳಬೇಕು

ಗದಗ: ಸಿಎಂ ಸಿದ್ದರಾಮಯ್ಯ ರಾಜ್ಯಕ್ಕೆ ಬೇಕಾದ ಯೋಜನೆಗಳ ಕುರಿತು ಚರ್ಚಿಸುವ ನೀತಿ ಆಯೋಗದ ಸಭೆಗೆ ಗೈರು ಹಾಜರಾಗುವ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈಲ್ವೆ ಸೇರಿದಂತೆ ಪ್ರಮುಖ ಯೋಜನೆಗಳಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಕೊಡದೇ ಕೇಂದ್ರ ಸರ್ಕಾರದ ವಿರುದ್ಧ ಅಸಹಕಾರ ತೋರುತ್ತಿದೆ. ಕಾಂಗ್ರೆಸ್ಸಿನವರು ಅಪಪ್ರಚಾರದಲ್ಲಿ ನಿಸ್ಸೀಮರು. ನಿರಂತರವಾಗಿ ಕೇಂದ್ರದ ಮೇಲೆ ಆಪಾದನೆ ಮಾಡುವುದು ಅವರಿಗೆ ಹವ್ಯಾಸವಾಗಿದೆ. ಅಪಪ್ರಚಾರದ ಮೂಲಕ ರಾಜ್ಯದ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದ ವಾಗ್ದಾಳಿ ನಡೆಸಿದರು.

ಈ ಬಾರಿ ರಾಜ್ಯದ ರೈಲ್ವೆ ಯೋಜನೆಗಳಿಗೆ ₹7,329 ಕೋಟಿ ಕೊಟ್ಟಿದ್ದೇವೆ‌. ಕಳೆದ ಬಾರಿ, ಅದರ ಹಿಂದಿನ ಬಾರಿಯೂ ₹ 7 ಸಾವಿರ ಕೋಟಿ ಕೊಡಲಾಗಿತ್ತು. ಯುಪಿಎ ಕಾಲದಲ್ಲಿ ವರ್ಷಕ್ಕೆ ಕೇವಲ ₹ 600 ಕೋಟಿ ಕೊಟ್ಟಿದ್ದರು. ಈಗ ಅದರ 10 ಪಟ್ಟು ಹೆಚ್ಚು ಕೊಟ್ಟರೂ ಕೇಂದ್ರದಿಂದ ಏನೂ ಸಿಗುತ್ತಿಲ್ಲ ಎಂದು ಆರೋಪಿಸುತ್ತಾರೆ. ರಾಜ್ಯ ಸರ್ಕಾರ ತನ್ನ ಪಾಲಿನ ಮ್ಯಾಚಿಂಗ್ ದುಡ್ಡು ಕೊಟ್ಟಿಲ್ಲ. ಭೂ ಸ್ವಾಧೀನ ಮಾಡಿಲ್ಲ. ರಾಜ್ಯ ಸರ್ಕಾರ ಕೇಂದ್ರದ ಜತೆಗೆ ಅಸಹಕಾರ ತೋರುತ್ತಿದೆ. ರಾಜ್ಯದ ಬೆಳವಣಿಗೆ, ಅಭಿವೃದ್ಧಿ, ಹಿತ ಕಾಪಾಡಲು ರಾಜ್ಯ ಸರ್ಕಾರ ತಯಾರಿಲ್ಲ ಎಂದರು.

ಮಾಫಿಯಾಗೆ ಕಡಿವಾಣ ಹಾಕಿ: ಇನ್ನು ರೈಲುಗಳ ಮೂಲಕ ಬೆಂಗಳೂರಿಗೆ ಬರುವ ಮಾಂಸದ ಕುರಿತು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗೃಹ ಸಚಿವರಿಗೆ ವೆಟರ್ನರಿ ಜ್ಞಾನ ಇದೆ ಎಂದು ನನಗೆ ಗೊತ್ತಿರಲಿಲ್ಲ! ಬಾಕ್ಸ್‌ನಲ್ಲಿ ಸಿಕ್ಕಿರುವ ಮಾಂಸ ಯಾವುದು ಎಂದು ತಜ್ಞರೇ ಹೇಳಬೇಕು. ಇದು ಜನಸಾಮಾನ್ಯರ ಆರೋಗ್ಯದ ಪ್ರಶ್ನೆ. ಈ ಬಗ್ಗೆ ತಜ್ಞರೇ ಪರಿಶೀಲಿಸಿ ಹೇಳಬೇಕು. ಅಲ್ಲಿಯವರೆಗೂ ಯಾರೇ ಏನೇ ಮಾತನಾಡಿದರೂ ಅದಕ್ಕೆ ಅರ್ಥ ಇಲ್ಲ. ಈಗಾಗಲೇ ಕಡಿಮೆ ದರಕ್ಕೆ ಸಿಗುತ್ತದೆ ಎಂದು ಏನು ಬೇಕಾದರೂ ತಿನ್ನಿಸುವ ಹುನ್ನಾರ ನಡೆಯುತ್ತಿದೆ. ಮೊದಲಿನಿಂದಲೂ ಇದೊಂದು ಮಾಫಿಯಾ ರೀತಿ ನಡೆಯುತ್ತಿದೆ. ಅದಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಎಂದ ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ