ಕರ್ನಾಟಕ: ಇಂದು ಸಿದ್ದು 15ನೇ ಬಜೆಟ್‌ ಮಂಡನೆ

KannadaprabhaNewsNetwork |  
Published : Feb 16, 2024, 01:47 AM ISTUpdated : Feb 16, 2024, 11:20 AM IST
ಆಯವ್ಯಯ ಪತ್ರ | Kannada Prabha

ಸಾರಾಂಶ

ರಾಜ್ಯದ ಇತಿಹಾಸದಲ್ಲಿ ಹದಿನಾಲ್ಕು ಬಜೆಟ್ ಮಂಡಿಸಿ ಈಗಾಗಲೇ ಸಾರ್ವಕಾಲಿಕ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಸೃಷ್ಟಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ 15ನೇ ಬಜೆಟ್‌ ಮಂಡನೆಗೆ ಸಜ್ಜಾಗುವ ಮೂಲಕ ತಮ್ಮ ದಾಖಲೆಯನ್ನೇ ಉತ್ತಮ ಪಡಿಸಿಕೊಳ್ಳಲು ಅಣಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ಇತಿಹಾಸದಲ್ಲಿ ಹದಿನಾಲ್ಕು ಬಜೆಟ್ ಮಂಡಿಸಿ ಈಗಾಗಲೇ ಸಾರ್ವಕಾಲಿಕ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಸೃಷ್ಟಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ 15ನೇ ಬಜೆಟ್‌ ಮಂಡನೆಗೆ ಸಜ್ಜಾಗುವ ಮೂಲಕ ತಮ್ಮ ದಾಖಲೆಯನ್ನೇ ಉತ್ತಮ ಪಡಿಸಿಕೊಳ್ಳಲು ಅಣಿಯಾಗಿದ್ದಾರೆ. 

ಲೋಕಸಭಾ ಚುನಾವಣೆ ಸಾಮೀಪ್ಯವಿರುವ ಈ ಹಂತದಲ್ಲಿ ಮುಖ್ಯಮಂತ್ರಿಯಾಗಿ ತಮ್ಮ ಎರಡನೇ ಅ‍ವಧಿಯ ಎರಡನೇ ಬಜೆಟ್‌ ಅನ್ನು ಶುಕ್ರವಾರ ಬೆಳಗ್ಗೆ 10.15ಕ್ಕೆ ಅವರು ಮಂಡಿಸಲಿದ್ದು, ಆಯವ್ಯಯದ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಮೂಡಿದೆ.

ಪ್ರಸಕ್ತ ಅ‍ವಧಿಯ ಮೊದಲ ಬಜೆಟ್‌ನಲ್ಲೇ ಐದು ಗ್ಯಾರಂಟಿ ಅನುಷ್ಠಾನಗೊಳಿಸಿದ ಸಿದ್ದರಾಮಯ್ಯ ಇದೀಗ ಲೋಕಸಭೆ ಚುನಾವಣೆಯ ಹೊಸ್ತಿಲಿನಲ್ಲಿ 2024-25 ಸಾಲಿನ ಬಜೆಟ್‌ ಮಂಡಿಸುತ್ತಿರುವುದರಿಂದ ಮತ್ತೆ ಜನಪ್ರಿಯ ಯೋಜನೆಗಳ ಸುರಿಮಳೆ ಸುರಿಸುವರೋ ಅಥವಾ ಗ್ಯಾರಂಟಿ ಹೊರೆ ತಗ್ಗಿಸುವ ಆರ್ಥಿಕ ಶಿಸ್ತಿಗೆ ಆದ್ಯತೆ ನೀಡುವರೋ ಎಂಬ ಕುತೂಹಲವೂ ಇದೆ.

ಮೂಲಗಳ ಪ್ರಕಾರ 25ರಿಂದ 30 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿ ಭರವಸೆ ಮೂಲಕ ಉದ್ಯೋಗ ಗ್ಯಾರಂಟಿ ನೀಡಲಿದ್ದಾರೆ. ತನ್ಮೂಲಕ ಖಾಲಿಯಿರುವ 2.5 ಲಕ್ಷ ಸರ್ಕಾರ ಹುದ್ದೆಗಳನ್ನು ಸ್ವಲ್ಪ ಮಟ್ಟಿಗಾದರೂ ತುಂಬಿ ಕೇಂದ್ರಕ್ಕೆ ಸಂದೇಶ ರವಾನಿಸಲಿದ್ದಾರೆ ಎನ್ನಲಾಗಿದೆ. 

ಶುಕ್ರವಾರ ಬೆಳಗ್ಗೆ 10.30ರಿಂದ ಮಧ್ಯಾಹ್ನ 12 ಗಂಟೆವರೆಗೆ ರಾಹುಕಾಲ ಇರುವುದರಿಂದ ಬೆಳಗ್ಗೆ 10.15ಕ್ಕೇ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ ಭಾಷಣ ಆರಂಭಿಸಲಿದ್ದಾರೆ.

ಲೋಕಸಭೆ ಚುನಾವಣೆ, ರಾಜ್ಯದಲ್ಲಿ ತೀವ್ರ ಬರಗಾಲದ ಜತೆಗೆ 9 ತಿಂಗಳಿಂದ ಅನುದಾನ ಬರ ಎದುರಿಸುತ್ತಿರುವ ಶಾಸಕರ ಆಶೋತ್ತರಗಳಿಗೂ ಮುಖ್ಯಮಂತ್ರಿಗಳು ಸ್ಪಂದಿಸಬೇಕಿದೆ. 

ಈಗಾಗಲೇ ಅನುದಾನ ಇಲ್ಲದೆ ಶಾಸಕರು ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿದ್ದಾರೆ. ಆದರೆ ಶಾಸಕರಿಗೆ ಅನುದಾನ ನೀಡುವ ಜತೆಗೆ ಜನತೆಯ ನಿರೀಕ್ಷೆಗಳನ್ನೂ ಕಾಪಿಡುವ ಒತ್ತಡದಲ್ಲಿ ಬಜೆಟ್ ತಜ್ಞರು ಎಂದೇ ಹೆಸರಾಗಿರುವ ಸಿದ್ದರಾಮಯ್ಯ ಸಿಲುಕಿದ್ದಾರೆ.

ಹೀಗಾಗಿ ಕೃಷಿ, ನೀರಾವರಿ, ಕೈಗಾರಿಕೆ, ಮೂಲಸೌಕರ್ಯ ಸೇರಿದಂತೆ ರೈತರು, ಕಾರ್ಮಿಕರು, ಮಹಿಳೆಯರು, ಮೀನುಗಾರರು, ನೇಕಾರರು ಸೇರಿದಂತೆ ವಿವಿಧ ವರ್ಗಗಳಿಗೆ ಯಾವ ಕಾರ್ಯಕ್ರಮಗಳನ್ನು ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಆರ್ಥಿಕ ಇಕ್ಕಟ್ಟಿನ ನಡುವೆ ಸರ್ಕಸ್: ಗ್ಯಾರಂಟಿಗಳ ಅನುಷ್ಠಾನದಿಂದ ಆರ್ಥಿಕತೆ ಮೇಲೆ ಹೊರೆ ಬಿದ್ದಿದೆ. ಕಳೆದ ವರ್ಷ 8 ತಿಂಗಳಿಗೆ ಸೀಮಿತವಾಗಿಯೇ 38,000 ಕೋಟಿ ರು. ವೆಚ್ಚವಾಗಿದೆ. 

ಈ ಬಾರಿ 12 ತಿಂಗಳ ಪೂರ್ಣಾವಧಿಗೆ 55 ರಿಂದ 58 ಸಾವಿರ ಕೋಟಿ ರು. ಕೇವಲ ಗ್ಯಾರಂಟಿಗಳ ಅನುಷ್ಠಾನಕ್ಕೆ ಬೇಕಾಗಿದೆ. ನೀರಾವರಿ ಯೋಜನೆಗಳಿಗೆ 60-70 ಸಾವಿರ ಕೋಟಿ ರು. ಅನುದಾನ ಬೇಕಿದೆ. 

ನೌಕರರ ವೇತನ, ಪಿಂಚಣಿಗೆ 80-90 ಸಾವಿರ ಕೋಟಿ ರು., ಬಡ್ಡಿ ಹಾಗೂ ಅಸಲು ಪಾವತಿ 37-40 ಸಾವಿರ ಕೋಟಿ ರು., ಗುತ್ತಿಗೆದಾರರಿಗೆ ತಕ್ಷಣ ಪಾವತಿ 25 ಸಾವಿರ ಕೋಟಿ ರು., ಚಾಲ್ತಿಯಲ್ಲಿರುವ ಅಭಿವೃದ್ಧಿ ಕಾಮಗಾರಿಗಳು 1.5 ಲಕ್ಷ ಕೋಟಿ, ಸರ್ಕಾರಿ ನೌಕರರ ವೇತನ ಆಯೋಗ ಬೇಡಿಕೆ ಹೀಗೆ ಸಾಲು-ಸಾಲು ಆರ್ಥಿಕ ಇಕ್ಕಟ್ಟುಗಳಲ್ಲಿ ಸರ್ಕಾರ ಇದೆ. 

ಜತೆಗೆ ತವರು ಜಿಲ್ಲೆ ಮೈಸೂರು, ರಾಜಕೀಯ ಪುನರ್‌ಜನ್ಮ ನೀಡಿದ್ದ ಬಾಗಲಕೋಟೆ, ಗಡಿ ಜಿಲ್ಲೆ, ಕಲ್ಯಾಣ ಕರ್ನಾಟಕ ಹೀಗೆ ವಿವಿಧ ಭಾಗಗಳ ಜನರು ಬೆಟ್ಟದಷ್ಟು ನಿರೀಕ್ಷೆ ಇಟ್ಟಿದ್ದಾರೆ. 

ಗೋಕಾಕ್‌, ಚಿಕ್ಕೋಡಿ ಸೇರಿದಂತೆ ಹಲವು ಹೊಸ ಜಿಲ್ಲೆಗಳ ಬೇಡಿಕೆಯೂ ಸರ್ಕಾರದ ಮುಂದಿದೆ. ಮಳೆ ಕೈಕೊಟ್ಟಿದ್ದರಿಂದ ರೈತರು ಸಾಲ ಮನ್ನಾಗೂ ಬೇಡಿಕೆ ಇಟ್ಟಿದ್ದು, ಕನಿಷ್ಠ ಬಡ್ಡಿ ಮನ್ನಾ ಆದರೂ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ.

ಇದರ ರೈತರ ಬಡ್ಡಿಯ ಹೊರೆ ಕಡಿಮೆ ಮಾಡಲು ಸಹಕಾರ ಬ್ಯಾಂಕ್‌ಗಳಲ್ಲಿನ ಕೃಷಿ ಸಾಲದ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಮಯಗಳನ್ನು ಬದಲು ಮಾಡುವ ಸಾಧ್ಯತೆಯಿದೆ.

ಹೊಸ ತೆರಿಗೆ ಹೊರೆ?
ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜತೆಗೆ ಹೊಸ ಕಾರ್ಯಕ್ರಮ ನೀಡಲು ಆರ್ಥಿಕ ಹೊರೆಯಾದರೂ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ತೆರಿಗೆ ಹೆಚ್ಚಳ ಮಾಡದಂತೆ ನಿಭಾಯಿಸಲು ಪ್ರಯತ್ನಿಸಲಾಗುತ್ತಿದೆ. 

ಆದಾಗ್ಯೂ ಅಬಕಾರಿ ತೆರಿಗೆ ಹೆಚ್ಚಳ ಮಾಡುವ ಸಾಧ್ಯತೆಯಿದೆ. ತನ್ಮೂಲಕ ಮದ್ಯಪ್ರಿಯರಿಗೆ ಮತ್ತೆ ಹೊರೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಪ್ರತಿಯೊಬ್ಬ ನಾಗರಿಕನ ಮೇಲೆ 1 ಲಕ್ಷ ರು. ಸಾಲ?
2024-25ನೇ ಸಾಲಿನ ಆಯವ್ಯಯದ ಮೂಲಕ ರಾಜ್ಯದ ಮೇಲಿನ ಋಣ ಭಾರ 6.45 ದಿಂದ 6.50 ಲಕ್ಷ ಕೋಟಿ ರು.ವರೆಗೆ ತಲುಪುವ ಸಾಧ್ಯತೆಯಿದೆ.

ತನ್ಮೂಲಕ ರಾಜ್ಯದ 6.11 ಕೋಟಿ ಜನಸಂಖ್ಯೆಗೆ (2011ರ ಜನಗಣತಿ) ಹೋಲಿಸಿದರೆ ಪ್ರತಿಯೊಬ್ಬರ ಮೇಲೆ 1.05 ಲಕ್ಷ ರು. ಸಾಲದ ಹೊರೆ ಉಂಟಾಗಲಿದೆ.

2024-25ನೇ ಸಾಲಿಗೆ ಅಂದಾಜಿಸಿರುವ ರಾಜ್ಯದ 7.24 ಕೋಟಿ ಜನಸಂಖ್ಯೆಗೆ ಹೋಲಿಸಿದರೂ ಪ್ರತಿಯೊಬ್ಬರ ಮೇಲೆ 90 ಸಾವಿರ ರು. ಪ್ರತಿಯೊಬ್ಬರ ಮೇಲೆ ಋಣ ಭಾರ ಉಂಟಾಗಲಿದೆ ಎಂದು ತಿಳಿದುಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಂ ಜಿ ವಿರೋಧಕ್ಕೆ ರೈತರಿಗೆ ಸಿಎಂ ಕರೆ
ನೀವೂ ಸಿಎಂ ಆಗಬೇಕು : ಡಿಕೆಗೆ ಪೂಜಾರಿ ಹಾರೈಕೆ