ಸಂಗಣ್ಣ ಮನೆಯಲ್ಲಿ ಶ್ರಾವಣದೂಟ ಸವಿದ ಸಿಎಂ

KannadaprabhaNewsNetwork |  
Published : Aug 14, 2024, 12:51 AM IST
13ಕೆಪಿಎಲ್23 ಮಾಜಿ ಸಂಸದ ಸಂಗಣ್ಣ ಕರಡಿ ಅವರ ಕೊಪ್ಪಳ ನಗರದ ನಿವಾಸದಲ್ಲಿ ಸಿ.ಎಂ. ಸಿದ್ದರಾಮಯ್ಯ ಅವರು ಊಟ ಮಾಡುತ್ತಿರುವುದು. | Kannada Prabha

ಸಾರಾಂಶ

ತುಂಗಭದ್ರಾ ಜಲಾಶಯ ವೀಕ್ಷಣೆಗೆ ಬಂದಿದ್ದ ಸಿಎಂ ಸಿದ್ದರಾಮಯ್ಯ ಮಾಜಿ ಸಂಸದ ಸಂಗಣ್ಣ ಕರಡಿ ಅವರ ನಿವಾಸದಲ್ಲಿ ಶ್ರಾವಣ ಮಾಸದ ಉತ್ತರ ಕರ್ನಾಟಕ ಶೈಲಿಯ ಊಟ ಸವಿದರು.

ಕುತೂಹಲ ಮೂಡಿಸಿದ ರಾಜಕೀಯ ಬೆಳವಣಿಗೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ತುಂಗಭದ್ರಾ ಜಲಾಶಯ ವೀಕ್ಷಣೆಗೆ ಬಂದಿದ್ದ ಸಿಎಂ ಸಿದ್ದರಾಮಯ್ಯ ಮಾಜಿ ಸಂಸದ ಸಂಗಣ್ಣ ಕರಡಿ ಅವರ ನಿವಾಸದಲ್ಲಿ ಶ್ರಾವಣ ಮಾಸದ ಉತ್ತರ ಕರ್ನಾಟಕ ಶೈಲಿಯ ಊಟ ಸವಿದರು.

ಚಪಾತಿ, ಜೋಳದ ರೊಟ್ಟಿ, ನಾನಾ ತರಹದ ಪಲ್ಯ, ಚಿತ್ರಾನ್ನ, ಅನ್ನ ಸಾಂಬಾರು ಒಳಗೊಂಡು, ರವೆ ಉಂಡೆ ಸೇರಿದಂತೆ ನಾನಾ ಬಗೆಯ ಪಂಚಮಿಯ ಉಂಡೆಗಳ ಪಕ್ಕಾ ಶ್ರಾವಣ ಊಟ ಸವಿದರು.

ಈ ವೇಳೆಯಲ್ಲಿ ಯಾವುದೇ ರಾಜಕೀಯ ಚರ್ಚೆಯಾಗಲಿಲ್ಲ, ಬದಲಾಗಿ ಕುಶಲೋಪಹರಿ ಚರ್ಚೆಯಾಯಿತು.

ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಸಚಿವರಾದ ಶಿವರಾಜ ತಂಗಡಗಿ, ಎನ್.ಎಸ್. ಬೋಸರಾಜ, ಶಾಸಕ ರಾಘವೇಂದ್ರ ಹಿಟ್ನಾಳ ಸೇರಿದಂತೆ ಕಾಂಗ್ರೆಸ್ ನಾಯಕರ ದಂಡೆ ಸಿಎಂ ಅವರಿಗೆ ಸಾಥ್ ನೀಡಿತು.

ಕುತೂಹಲ: ಸಂಸದರಾಗಿದ್ದ ಸಂಗಣ್ಣ ಕರಡಿ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರಿದ ಮೇಲೆ ವಿಧಾನಪರಿಷತ್ ಸದಸ್ಯ ಸ್ಥಾನ ನೀಡುತ್ತಾರೆ ಎನ್ನುವ ಕುರಿತು ಚರ್ಚೆಯಾಗುತ್ತಿರುವ ವೇಳೆಯಲ್ಲಿಯೇ ಸಿಎಂ ಅವರ ನಿವಾಸಕ್ಕೆ ಬಂದಿರುವುದು ಸಹಜವಾಗಿಯೇ ಚರ್ಚೆಗೆ ಮತ್ತಷ್ಟು ಇಂಬು ಬಂದಂತಾಗಿದೆ.

ಒಂದು ಬೆಳೆಗೆ ನೀರಿನ ಸಮಸ್ಯೆಯಾಗಲ್ಲ- ಸಿಎಂ ವಿಶ್ವಾಸ:

ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಮುರಿದು ನೀರು ಹೊರಹೋಗುತ್ತಿರುವುದರಿಂದ ಅಚ್ಚುಕಟ್ಟು ಪ್ರದೇಶದ ರೈತರು ಆತಂಕಗೊಂಡಿದ್ದಾರೆ. ಆದರೆ, ಈಗ ನಾಟಿ ಮಾಡಿರುವ ಒಂದು ಬೆಳೆಗೆ ನೀರಿನ ಸಮಸ್ಯೆ ಆಗುವುದಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಕೊಪ್ಪಳ ತಾಲೂಕಿನ ಗಿಣಿಗೇರಿ ಬಳಿ ವಿಮಾನ ತಂಗುದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಆತಂಕಗೊಳ್ಳಬೇಡಿ ಎಂದು ಮನವಿ ಮಾಡಿದರು.

ಜಲಾಶಯದಲ್ಲಿದ್ದ 105 ಟಿಎಂಸಿ ನೀರಿನಲ್ಲಿ ಈಗ ಗೇಟ್ ದುರಸ್ತಿಗಾಗಿ ನದಿಯ ಮೂಲಕ ನೀರು ಹರಿಬಿಡಲಾಗುತ್ತದೆ. ಆದರೂ ಜಲಾಶಯದಲ್ಲಿ 65 ಟಿಎಂಸಿ ನೀರು ಉಳಿಸಿಕೊಂಡೇ ದುರಸ್ತಿ ಮಾಡುತ್ತೇವೆ. ದುರಸ್ತಿಯಾದ ಮೇಲೆ ಮಳೆ ಬರಲಿದೆ. ಈಗಾಗಲೇ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಉತ್ತಮ ಮಳೆಯಾಗಲಿದೆ. ಆಗ ಸಮಸ್ಯೆಯೇ ಆಗುವುದಿಲ್ಲ ಎಂದರು.

ಒಂದು ಬೆಳೆಗೆ ಬೇಕಾಗುವ 90 ಟಿಎಂಸಿ ನೀರು ನಮಗೆ ಲಭ್ಯವಾಗುತ್ತದೆ, ಇದರಲ್ಲಿ ಅನುಮಾನ ಬೇಡ ಎಂದರು.

ಇದನ್ನು ಮೀರಿ ಆಗಸ್ಟ್ ಮತ್ತು ಅಕ್ಟೋಬರ್‌ನಲ್ಲಿ ಮಳೆಗಾಲ ಇರುವುದರಿಂದ ಉತ್ತಮ ಮಳೆಯಾಗಿ ಜಲಾಶಯ ಭರ್ತಿಯಾದರೂ ಆಗಬಹುದು. ಹಾಗಾದರೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದರು.

ಗೇಟ್ ದುರಸ್ತಿಗೆ ಶಕ್ತಿ ಮೀರಿ ಶ್ರಮಿಸಲಾಗುತ್ತಿದೆ. ತಜ್ಞರ ತಂಡ ಈ ದಿಸೆಯಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ. 2-3 ದಿನಗಳಲ್ಲಿ ಗೇಟ್ ಅಳವಡಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇನ್ನು ನಾಲ್ಕೈದು ದಿನಗಳಾಗಬಹುದು ಎಂದರು.

ತುಂಗಭದ್ರಾ ಜಲಾಶಯಕ್ಕೆ 70 ವರ್ಷಗಳಾಗಿವೆ. ಈ ಹಿಂದೆ ಯಾವಾಗಲು ಈ ಸಮಸ್ಯೆ ಬಂದಿರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ಆಗಿರುವುದರಿಂದ ಇನ್ಮುಂದೆ ಎಚ್ಚರ ವಹಿಸಲಾಗುವುದು. ಈಗಾಗಲೇ ಉಪಮುಖ್ಯಮಂತ್ರಿ ರಾಜ್ಯದ ಎಲ್ಲ ಜಲಾಶಯಗಳ ಸ್ಥಿತಿಗತಿಯನ್ನು ಪರಿಶೀಲನೆ ಮಾಡಲು ಸೂಚಿಸಿದ್ದಾರೆ.

ತುಂಗಭದ್ರಾ ಜಲಾಶಯದ ಸ್ಥಿತಿ ಪರಿಶೀಲಿಸಿ, ಅಗತ್ಯ ಕ್ರಮವಹಿಸಲಾಗುವುದು. ಈ ದಿಸೆಯಲ್ಲಿ ಆಂಧ್ರ, ತೆಲಂಗಾಣ ಸರ್ಕಾರಗಳೊಂದಿಗೆ ಸಂಪರ್ಕದಲ್ಲಿದ್ದೇವೆ, ಬೋರ್ಡ್ ಜೊತೆಗೂ ಸಂಪರ್ಕದಲ್ಲಿದ್ದು, ಸಮಸ್ಯೆ ಪರಿಹರಿಸುವ ದಿಸೆಯಲ್ಲಿ ಮೊದಲು ಪ್ರಯತ್ನ ಮಾಡಲಾಗುತ್ತದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ