ಸವಣೂರು: ಕೃಷಿ ಮತ್ತು ಕೃಷಿಯೇತರ ಸಾಲ ನೀಡುವುದು ಸಂಘದ ಮುಖ್ಯ ಉದ್ದೇಶವಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಂಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಬಲವರ್ಧನೆಗೊಳ್ಳಲು ಸಹಕಾರ ನೀಡಬೇಕು ಎಂದು ಧಾರವಾಡ ಕೆಸಿಸಿ ಬ್ಯಾಂಕ್ ನಿರ್ದೇಶಕ ಸುಭಾಸ ಗಡೆಪ್ಪನವರ ತಿಳಿಸಿದರು.ಪಟ್ಟಣದಲ್ಲಿ ಗುರುವಾರ ಏರ್ಪಡಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.ವ್ಯಾಪಾರ ಅಭಿವೃದ್ಧಿ ಯೋಜನೆ, ರೈತರಿಗೆ ಅಲ್ಪಾವಧಿಯ ಮತ್ತು ಪೂರ್ಣಾವಧಿಯ ಸಾಲ ಸೌಲಭ್ಯ, ಬೀಜ ಮತ್ತು ಯಂತ್ರೋಪಕರಣಗಳನ್ನು ನೀಡುವ ಉದ್ದೇಶ ಹೊಂದಿದ್ದು, ಕಳೆದ 77 ವರ್ಷಗಳಿಂದ ಸಾಕಷ್ಟು ಏರಿಳಿತಗಳನ್ನು ಕಂಡ ಸಂಘವು ಸದಸ್ಯರ ಸಹಕಾರ, ಶ್ರಮದೊಂದಿಗೆ ನೂತನ ಕಟ್ಟಡವನ್ನು ಹೊಂದುವ ಮೂಲಕ ಸುಮಾರು ₹4.33 ಲಕ್ಷ ಲಾಭದತ್ತ ಸಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮಲ್ಲಾರಪ್ಪ ತಳ್ಳಿಹಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ಸಂಜಯ ಸುಣಗಾರ, ಟಿಎಪಿಸಿಎಂಎಸ್ ಅಧ್ಯಕ್ಷ ಧರಿಯಪ್ಪಗೌಡ ಪಾಟೀಲ ಮಾತನಾಡಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯ ಮಂಜುನಾಥ ಗಾಣಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿದ್ಯಾಭಾರತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಡಿ.ಎನ್. ಗುಂಜಳ, ಪ್ರಮುಖ ಗಂಗಾಧರ ಬಾಣದ, ಸಂಘದ ಪದಾಧಿಕಾರಿಗಳಾದ ಬಸವಣ್ಣೆಪ್ಪ ತಳ್ಳಿಹಳ್ಳಿ, ಶಂಭುಲಿಂಗಪ್ಪ ಮಟಿಗಾರ, ಅಖಲಾಖಾನ ಬಿರಾದರ, ಗುರುನಗೌಡ ಪಾಟೀಲ, ವಿನಾಯಕ ಕುಲಕರ್ಣಿ, ಈರನಗೌಡ ಪಾಟೀಲ ಹಾಗೂ ಇತರರು ಪಾಲ್ಗೊಂಡಿದ್ದರು. ಜಯತೀರ್ಥ ದೇಶಪಾಂಡೆ, ಕೆ.ಬಿ. ಕೋಳಿವಾಡ, ಚಂದ್ರಶೇಖರ ನೇಗೂಣಿ ಹಾಗೂ ಸಿ.ಎನ್. ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.