ರಾಜ್ಯ ತೆಂಗು ಬೆಳೆಗಾರರ ಹಿತದೃಷ್ಟಿಯಿಂದ ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಖರೀದಿ ಪ್ರಕ್ರಿಯೆಯನ್ನು ಬುಧವಾರದಿಂದ ಪುನಾರಂಭಿಸಲು ಸರ್ಕಾರ ತೀರ್ಮಾನಿಸಿದೆ.
ಕನ್ನಡಪ್ರಭ ವಾರ್ತೆ, ವಿಧಾನ ಪರಿಷತ್ತು
ರಾಜ್ಯ ತೆಂಗು ಬೆಳೆಗಾರರ ಹಿತದೃಷ್ಟಿಯಿಂದ ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಖರೀದಿ ಪ್ರಕ್ರಿಯೆಯನ್ನು ಬುಧವಾರದಿಂದ ಪುನಾರಂಭಿಸಲು ಸರ್ಕಾರ ತೀರ್ಮಾನಿಸಿದೆ. ಮಂಗಳವಾರ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಟಿ.ಎ.ಶರವಣ ಸೇರಿದಂತೆ ಇತರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೃಷಿ ಮಾರುಕಟ್ಟೆಸಚಿವ ಶಿವಾನಂದ ಎಸ್. ಪಾಟೀಲ್ ಅವರು, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಅಕ್ರಮ ನೋಂದಣಿಗಳು ನಡೆದಿದ್ದವು. ಅನಧಿಕೃತ ಉಪಕರಣಗಳನ್ನು ಬಳಸಿ ರೖತರ ನೋಂದಣಿ ಮಾಡುವ ಮೂಲಕ ಅಕ್ರಮ ಎಸಗಿದ ಖರೀದಿ ಕೇಂದ್ರಗಳ 9 ಮಂದಿಯನ್ನು ಅಮಾನತ್ತು ಮಾಡಿದ್ದು, ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಜೊತೆಗೆ ಬುಧವಾರದಿಂದ ಕೊಬ್ಬರಿ ಖರೀದಿ ಮತ್ತು ನೋಂದಣಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ನೋಂದಣಿ ಮಾಡಿಕೊಂಡಿರುವವರ ಪಟ್ಟಿ ಪುನರ್ ಪರಿಶೀಲಿಸಿದ್ದು, ರೈತರ ಹೆಸರಿನಲ್ಲಿ ವರ್ತಕರು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂಬುದು ಪತ್ತೆಯಾಗಿದೆ. ಆದ್ದರಿಂದ ಅದನ್ನು ರದ್ದುಪಡಿಸಲಾಗಿದೆ. ಹಾಸನ ಜಿಲ್ಲೆಯಲ್ಲಿ ತೆಂಗು ಬೆಳೆ ವಿಸ್ತೀರ್ಣ ಮತ್ತು ಬೆಳೆಗಾರರ ಸಂಖ್ಯೆ ಕಡಿಮೆ ಇದ್ದರೂ, ಹೆಚ್ಚು ಮಂದಿ ಹೆಸರು ನೋಂದಾಯಿಸಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಜಾಸ್ತಿಯಿದ್ದರೂ, ಕಡಿಮೆ ರೈತರು ನೋಂದಾಯಿಸಿಕೊಂಡಿದ್ದಾರೆ. ಹಾಗಾಗಿ, ಅಕ್ರಮ ನೋಂದಣಿಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಕಳೆದ ವರ್ಷ 7 ತಿಂಗಳ ಕಾಲ ಕೊಬ್ಬರಿ ಖರೀದಿಗೆ ಅವಕಾಶ ಮಾಡಿಕೊಟ್ಟಿತ್ತು. ಆದರೆ, ಈ ಬಾರಿ ಮೊದಲಿಗೆ ಮೂರು ತಿಂಗಳು, ಆನಂತರ ಮೂರು ತಿಂಗಳು ಖರೀದಿಸಲು ಸೂಚಿಸಿದೆ. ಉಂಡೆ ಕೊಬ್ಬರಿ ಜತೆಗೆ ಮಿಲ್ಲಿಂಗ್ ಕೊಬ್ಬರಿಯನ್ನೂ ಖರೀದಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿದೆ. ಹಾಗೆಯೇ, ಕೊಬ್ಬರಿ ಖರೀದಿ ಮಿತಿಯನ್ನು ಶೇ. 50ಕ್ಕೆ ಹೆಚ್ಚಿಸುವಂತೆಯೂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಇದೇ ಕಳೆದ ವರ್ಷ ಕೊಬ್ಬರಿ ಖರೀದಿಯಿಂದ ನಾಫೆಡ್ ಸಂಸ್ಥೆಗೆ 200 ಕೋಟಿ ರು. ನಷ್ಟ ಉಂಟಾಗಿದೆ ಎಂದು ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.