ಸಮೀಪದ ಲಿಂಗದಹಳ್ಳಿ ಹೋಬಳಿಯಾದ್ಯಂತ ಈ ವರ್ಷ ಸರಿಯಾದ ಸಮಯಕ್ಕೆ ಮಳೆ ಬಾರದೇ ತೋಟದ ಬೆಳೆಗಳೆಲ್ಲವೂ ರೈತರ ಕೈ ತಪ್ಪಿ ಹೋಗುವಂತಿದ್ದು, ಇದರೊಂದಿಗೆ ಕಾಡಾನೆ , ಕಾಡು ಕೋಣ ಸೇರಿದಂತೆ ವನ್ಯ ಪ್ರಾಣಿಗಳ ದಾಳಿಯಿಂದ ಫಸಲಿಗೆ ಬಂದಿರುವ ತೋಟದ ಬೆಳೆಗಳಾದ ಅಡಿಕೆ , ತೆಂಗು, ಕಾಫಿ, ಕಾಳು ಮೆಣಸು, ಸೇರಿದಂತೆ ವಿವಿಧ ಬೆಳೆಗಳನ್ನು ರೈತರು ಉಳಿಸಿಕೊಳ್ಳುವುದೇ ಕಷ್ಟಕರವಾಗಿದೆ ಎಂದು ಮಸ್ಕಲ್ ಮರಡಿ ಕಾಫಿ ತೋಟದ ವ್ಯವಸ್ಥಾಪಕ ಸೆಲ್ವಿನ್ ತಿಳಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಭದ್ರ ಅಭಯಾರಣ್ಯದಲ್ಲಿ ವ್ಯಾಪ್ತಿಯಲ್ಲಿ ವನ್ಯ ಪ್ರಾಣಿಗಳ ಸಂಖ್ಯೆ ಅಪಾರ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಅರಣ್ಯದ ವ್ಯಾಪ್ತಿಯಲ್ಲಿ ಅವುಗಳಿಗೆ ಸರಿಯಾದ ಮೇವು , ನೀರು ಸಿಗುತ್ತಿಲ್ಲ ವಾದ್ದರಿಂದ ಅರಣ್ಯದಂಚಿನ ಗ್ರಾಮಗಳಲ್ಲಿ ರೈತರು ಬೆಳೆದಿರುವ ತೋಟದ ಬೆಳೆಗಳ ಮೇಲೆ ದಾಳಿ ಮಾಡುತ್ತಿರುವುದು ಕಂಡು ಬರುತ್ತಿದೆ. ಕಳೆದ 2-3 ದಿನಗಳಿಂದ ಸಂಪಿಗೆ ಖಾನ್, ಮಸ್ಕಲ್ ಮರಡಿ ಕಾಫಿ ತೋಟಗಳ ವ್ಯಾಪ್ತಿಯಲ್ಲಿ ಬೆಳೆದಿರುವ ತೆಂಗಿನ ಮರಗಳನ್ನು ಉರುಳಿಸಿ ತೆಂಗು ತುಳಿದು ಹಾಳುಗೆಡೆವುತ್ತಿರುವುದರಿಂದ ಬೆಳೆಗಾರರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಸಂಜೆಯಾಯಿತೆಂದರೆ ಅರಣ್ಯದಂಚಿನ ಗ್ರಾಮಗಳೆಡೆಗೆ ಬರುವ ಕಾಡಾನೆ ಮುಂತಾದ ವನ್ಯ ಪ್ರಾಣಿ ಗಳಿಂದ ರಸ್ತೆಗಳಲ್ಲಿ ಸಂಚರಿಸುವ ವಾಹನ ಚಾಲಕರು ಮತ್ತು ಕಾಲ್ನಡಿಗೆಯಲ್ಲಿ ಕ್ರಮಿಸುವ ಗ್ರಾಮಸ್ಥರು ಜೀವ ಭಯದಿಂದಲೇ ಸಂಚಾರ ನಡೆಸಬೇಕಾಗಿದ್ದು, ಭದ್ರಾ ಅಭಯಾರಣ್ಯದ ಅಧಿಕಾರಿಗಳು ಇತ್ತ ಗಮನ ಹರಿಸಿ ಕಾಡು ಪ್ರಾಣಿಗಳನ್ನು ಕಾಡಿನೊಳಗಿನ ಮೇವು, ನೀರು ಸಿಗುವ ಸ್ಥಳಕ್ಕೆ ಓಡಿಸುವಂತೆ ಈ ಭಾಗದ ಗ್ರಾಮಸ್ಥರು ಒತ್ತಾಯ ಪಡಿಸಿದ್ದಾರೆ.
7ಕೆಟಿಆರ್,ಕೆ.4
ತರೀಕೆರೆ ಸಮೀಪದ ಸಂಪಿಗೆ ಖಾನ್, ಅಂಚೆ ಕಛೇರಿಯ ಸಮೀಪದಲ್ಲಿರುವ ದೇವಸ್ಥಾನದ ಬಳಿ ಇದ್ದ ತೆಂಗಿನ ಮರಗಳನ್ನು ಕಾಡಾನೆಗಳು ಮುರಿದು ತಿಂದಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.