ಕನ್ನಡಪ್ರಭ ವಾರ್ತೆ ಶಿರಾ ಶಿರಾ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸುಮಾರು 10 ಕೋಟಿ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡಲು ಸರ್ಕಾರ ಅನುದಾನ ಮಂಜೂರು ಮಾಡಿದ್ದು ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಮುಗಿಸಿ ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಆರ್.ಶಶಿಧರ ಗೌಡ ಹೇಳಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಎಸ್.ರವಿ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಹುಣಸೆ ಹಣ್ಣು ಬೆಳೆಯುತ್ತಿದ್ದು ಸೂಕ್ತ ಬೆಲೆ ದೊರೆಯದೆ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಆಂಧ್ರ ಪ್ರದೇಶದ ಹಿಂದೂಪುರ, ಪುಂಗನೂರು ಭಾಗದಿಂದ ಬರುವ ವರ್ತಕರು ಕಡಿಮೆ ದರಕ್ಕೆ ಹುಣಸೆ ಹಣ್ಣು ಖರೀದಿ ಮಾಡುತ್ತಾರೆ. ಸ್ವಲ್ಪ ಹಣ ಕೊಟ್ಟು ಮುಂದಿನ ವಾರ ಉಳಿದ ಹಣ ಕೊಡುವುದಾಗಿ ಹೇಳಿ ಹೋಗುತ್ತಾರೆ. ಆದರೆ ಹಲವಾರು ಬಾರಿ ರೈತರಿಗೆ ಹಣ ನೀಡದೆ ಮೋಸ ಮಾಡುತ್ತಿದ್ದಾರೆ. ಹುಣಸೆ ಹಣ್ಣು ಬಹಳ ದಿನ ಸಂಗ್ರಹಿಸಲು ಸಾಧ್ಯವಾಗದ ಕಾರಣ ರೈತರು ಅವರು ಕೇಳಿದಷ್ಟಕ್ಕೆ ಕೊಡುವಂತಾಗಿದೆ. ಈಗ ಕೋಲ್ಡ್ ಸ್ಟೋರೇಜ್ ನಿರ್ಮಾಣವಾಗುವುದರಿಂದ ರೈತರು ತಾವು ಬೆಳೆದ ಹುಣಸೆ ಹಣ್ಣು ಅಲ್ಲಿ ಸಂಗ್ರಹಿಸಿಟ್ಟು ಬೆಲೆ ಬಂದಾಗ ಮಾರಾಟ ಮಾಡಬಹುದು. ಒಂದು ವೇಳೆ ಹಣಕಾಸಿನ ಸಮಸ್ಯೆ ಇದ್ದರೆ ಹುಣಸೆಹಣ್ಣು ಅಡಮಾನ ಇಟ್ಟು ಹಣ ಪಡೆದು ಮಾರಾಟ ಮಾಡಿದಾಗ ಸಾಲವನ್ನು ವಾಪಸ್ಸು ಕೊಡಬಹುದಾಗಿದೆ. ಇಲ್ಲಿ ಹುಣಸೆ, ಟಮೋಟಾ, ಮಾವು, ಹಲಸು ಸೇರಿದಂತೆ ತರಕಾರಿ, ಹಣ್ಣು, ಹೂವುಗಳನ್ನು ದೀರ್ಘಕಾಲ ಇಡಬಹುದಾಗಿದ್ದು ರೈತರಿಗೆ ಹೆಚ್ಚಿನ ಲಾಭವಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಕುಂಚಿಟಿಗರ ಸಂಘದ ಅಧ್ಯಕ್ಷ ಮುಕುಂದಪ್ಪ, ನಗರಸಭೆ ಸದಸ್ಯ ಬಿ.ಎಂ.ರಾಧಾಕೃಷ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ರಾಜಣ್ಣ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಹಲವರು ಹಾಜರಿದ್ದರು.