ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಕೂತನೂರು ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರು ಸ್ಥಗಿತಗೊಂಡಿದೆ. ಜೊತೆಗೆ ಕೆರೆಯಂಗಳದಲ್ಲಿದ್ದ ನಾಲ್ಕು ಬೋರ್ವೆಲ್ ಮುಳುಗಡೆಯಾದ ಕಾರಣ ಕೂತನೂರಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಲ್ಭಣಿಸಿದೆ.ಬಹುಗ್ರಾಮ ಕುಡಿಯುವ ನೀರೆತ್ತುವ ಜಾಕ್ ವೆಲ್ ನದಿಯಲ್ಲಿ ನೀರು ಹೆಚ್ಚಳವಾದ ಹಿನ್ನಲೆ ಬೋರ್ಗಳು ಮುಳುಗಿದ ಕಾರಣ ಬಹುಗ್ರಾಮ ಯೋಜನೆಯ ನೀರು ಸ್ಥಗಿತಗೊಂಡು ನಾಲ್ಕು ದಿನಗಳು ಕಳೆದಿವೆ. ಬಹುಗ್ರಾಮ ಕುಡಿಯುವ ನೀರಿನ ಸ್ಥಗಿತಗೊಂಡ ಬೆನ್ನಲ್ಲೆ ತಾಲೂಕಿನಲ್ಲಿ ಕಳೆದ ೧೦ ದಿನಗಳಿಂದ ಸತತವಾಗಿ ಮಳೆ ಬೀಳುತ್ತಿರುವ ಕಾರಣ ಕೂತನೂರು ಬಳಿಯ ಕೆರೆಯೂ ತುಂಬಿದೆ. ನಾಲ್ಕು ಬೋರ್ವೆಲ್ ಮುಳುಗಡೆಯಾದ ಜೊತೆಗೆ ವಿದ್ಯುತ್ ಟ್ರಾನ್ಸ್ಪಾರ್ಮರ್ ಹಾಗೂ ವಿದ್ಯುತ್ ಕಂಬಗಳು ವಾಲಿ ನಿಂತ ಕಾರಣ ವಿದ್ಯುತ್ ಸಂಪರ್ಕವೂ ಇಲ್ಲದೆ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಹಾತೊರೆಯುವಂತಾಗಿದೆ.
ಕೆರೆ ಅಂಚಿನಲ್ಲಿದ್ದ ಒಂದು ಬೋರ್ವೆಲ್ಗೆ ಕೂತನೂರು ಗ್ರಾಪಂ ಪಿಡಿಒ ಕುಮಾರಸ್ವಾಮಿ ಕೆರೆ ಬಳಿಯ ರೈತರೊಬ್ಬರ ಕೃಷಿ ಜಮೀನಿನಿಂದ ವಿದ್ಯುತ್ ಸಂಪರ್ಕ ಪಡೆದಿದ್ದು ಒಂದು ಬೋರ್ವೆಲ್ನ ನೀರು ಈಡಿ ಊರಿಗೆ ಸಾಕಾಗುತ್ತಿಲ್ಲವಾಗಿದೆ. ಗ್ರಾಪಂ ಪಿಡಿಒ ಹಾಗೂ ಸದಸ್ಯರು ಇರುವ ಒಂದು ಬೋರ್ವೆಲ್ನಲ್ಲಿ ಬರುವ ನೀರಿನ ಜೊತೆಗೆ ಟ್ಯಾಂಕರ್ ಮೂಲಕ ನೀರು ಕೊಡುವ ಪ್ರಯತ್ನ ನಡೆಸಲಾಗಿದೆ. ಆದರೂ ಗ್ರಾಮಸ್ಥರ ಆಕ್ರೋಶ ಮುಗಿಲು ಮುಟ್ಟಿದೆ.ಕುಡಿಯುವ ನೀರಿನ ಸಮಸ್ಯೆ ಬೇಗ ಬಗೆಹರಿಸಿ ಇಲ್ಲ, ರೈತಸಂಘ ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ಗ್ರಾಮದ ರೈತಸಂಘದ ಗಣೇಶ್ ಎಚ್ಚರಿಕೆ ನೀಡಿದ್ದಾರೆ.ಕೂತನೂರು ಗ್ರಾಮಕ್ಕೆ ಬಹುಗ್ರಾಮ ಕುಡಿಯುವ ನೀರು ಸ್ಥಗಿತಗೊಂಡು ವಾರ ಕಳೆದಿದೆ. ಗ್ರಾಮದ ಬಳಿಯಿದ್ದ ಬೋರ್ವೆಲ್ ಇದ್ದ ಕೆರೆಗೆ ನೀರು ಬಂದಿದೆ. ಟ್ರಾನ್ಸ್ಪಾರ್ಮರ್ ಮುಳುಗಿದೆ. ಕೆರೆ ಬಳಿಯ ಒಂದು ಬೋರ್ವೆಲ್ ನಿಂದ ನೀರು ಕೊಡಲಾಗುತ್ತಿದೆ. ಜೊತೆಗೆ ಟ್ಯಾಂಕರ್ ಮೂಲಕವೂ ನೀರು ಕೊಡುತ್ತಿದ್ದೇವೆ.-ಕುಮಾರಸ್ವಾಮಿ, ಪಿಡಿಒ ಕೂತನೂರು