ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಖಾಸಗಿ ಎಂಜಿನಿಯರಿಂಗ್ ಪದವಿ ಕಾಲೇಜುಗಳಲ್ಲಿ ಸೀಟ್ ಪಡೆಯಲು ಕಾಮೆಡ್-ಕೆ ನಡೆಸಿದ ಪರೀಕ್ಷೆಯಲ್ಲಿ ಮೂಡುಬಿದಿರೆಯ ಎಕ್ಸಲೆಂಟ್ ಪದವಿ ಪೂರ್ವಕಾಲೇಜಿನ ಶಿಶಿರ್ ಎಚ್. ಶೆಟ್ಟಿ ಮೊದಲ ರ್ಯಾಂಕ್ ಗಳಿಸಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದಾರೆ.ದೇಶದ ೧,೧೩,೧೧೧ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದು, ಮೂಡುಬಿದಿರೆ ಹರೀಶ ಶೆಟ್ಟಿ ಮತ್ತು ಸುಮಿತಾ ಶೆಟ್ಟಿ ದಂಪತಿ ಪುತ್ರ ಶಿಶಿರ್ ಎಚ್. ಶೆಟ್ಟಿ ಪ್ರಥಮ ಸ್ಥಾನಿಯಾಗಿದ್ದಾರೆ.ಎಕ್ಸಲೆಂಟ್ ಬಳಗದ ಪ್ರತಿಭಾನ್ವಿತ ವಿದ್ಯಾರ್ಥಿ ಶಿಶಿರ್, ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ ೬೬೪ನೇ ಸ್ಥಾನ, ಜೆಇಇ ಮೈನ್ಸ್ನಲ್ಲಿ ೯೯.೯೭೧ ಪರ್ಸಂಟೈಲ್, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಿಇಟಿ ಪರೀಕ್ಷೆಯಲ್ಲಿ ಎಂಜಿನಿಯರಿಂಗ್ ವಿಭಾಗದಲ್ಲಿ ೪ನೇ ರ್ಯಾಂಕ್, ಕರ್ನಾಟಕ ಪರೀಕ್ಷಾ ಮಂಡಳಿ ನಡೆಸಿದ ದ್ವೀತಿಯ ಪಿಯುಸಿಯಲ್ಲಿ ರಾಜ್ಯ ಮಟ್ಟದಲ್ಲಿ ೭ನೇ ರ್ಯಾಂಕ್ (೫೯೩ ಅಂಕಗಳು) ಪಡೆದು ವಿಶಿಷ್ಟ ಸಾಧನೆ ಮಾಡಿದ್ದರು.
ಶಿಶಿರ್ಗೆ ಸಮ್ಮಾನ: ಕಾಮೆಡ್ ಕೆ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ ೧ನೇ ರ್ಯಾಂಕ್ ಪಡೆದಿರುವ ಶಿಶಿರ್ ಎಚ್. ಶೆಟ್ಟಿ ಅವರನ್ನುಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಶನಿವಾರ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಸಾಧನೆ ಬಗ್ಗೆ ಹರ್ಷ ವ್ಯಕ್ತಪಡಿಸಿದ ಸಂಸ್ಥೆ ಅಧ್ಯಕ್ಷ ಯುವರಾಜ್ ಜೈನ್, ಶಿಶಿರ್ ಸಾಧನೆ ಸಂತೋಷಕೊಟ್ಟಿದೆ. ಕಳೆದ ೧೩ ವರ್ಷಗಳಿಂದ ಗುರುಕುಲ ಮಾದರಿ ಶಿಕ್ಷಣದೊಂದಿಗೆ ಪಠ್ಯದ ಜೊತೆ ಸಂಸ್ಕಾರಯುತ ಶಿಕ್ಷಣಕ್ಕೆ ಪ್ರಾಶಸ್ತ್ಯ ನೀಡಿರುವ ಎಕ್ಸಲೆಂಟ್ ಅನುಭವಿ ಶಿಕ್ಷಕರ ಸಹಯೋಗದಿಂದ ಯಶಸ್ಸನ್ನು ಸಾಧಿಸಿದೆ ಎಂದರು.ಶಿಶಿರ್ ಹೆತ್ತವರಾದ ಸುಮಿತಾ, ಹರೀಶ್ ಶೆಟ್ಟಿ ಮಾತನಾಡಿ, ಮಗನ ಸಾಧನೆ ಸಂತಸ ತಂದಿದೆ. ಎಲ್ಲರ ಪ್ರೋತ್ಸಾಹದಿಂದ ಸಾಧನೆ ಸಾಧ್ಯವಾಗಿದೆ ಎಂದು ಹೇಳಿದರು.ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ಕುಮಾರ್ ಶೆಟ್ಟಿ, ಉಪಪ್ರಾಂಶುಪಾಲ ಮನೋಜ್ ಕುಮಾರ್, ಸ್ಪರ್ಧಾತ್ಮಕ ಪರೀಕ್ಷೆಗಳ ವಿಭಾಗದ ಮುಖ್ಯಸ್ಥ ರಾಮಮೂರ್ತಿ, ಡಾ.ದಯಾನಂದ ಉಪಸ್ಥಿತರಿದ್ದರು. ಉಪನ್ಯಾಸಕ ವಿಕ್ರಮ ನಾಯಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.-------------------ರ್ಯಾಂಕ್ ಸಂತಸ ತಂದಿದೆ. ಎಕ್ಸಲೆಂಟ್ ಮೂಡುಬಿದಿರೆಯಲ್ಲಿ ಓದಿಗೆ ಪೂರಕ ವಾತಾವರಣವಿದೆ. ಅನುಭವಿ ಉಪನ್ಯಾಸಕರು ಶಿಸ್ತುಬದ್ಧ ವ್ಯವಸ್ಥೆ, ಹಸಿರ ವಾತಾವರಣ, ಪೂರಕ ವೇಳಾಪಟ್ಟಿ ನನ್ನ ಯಶಸ್ಸಿಗೆ ಕಾರಣವಾಯಿತು. ಮುಂದೆ ಐಐಎಸ್ಸಿ ಮೂಲಕ ಬಿಟೆಕ್ ಮಾಡುವ ಉದ್ದೇಶವಿದೆ. ಥ್ಯಾಂಕ್ಯೂ ಯೂ ಎಕ್ಸಲೆಂಟ್ ಮೂಡುಬಿದಿರೆ.
। ಶಿಶಿರ್ ಎಚ್. ಶೆಟ್ಟಿ