ವಾಣಿಜ್ಯಶಾಸ್ತ್ರ ಉಪನ್ಯಾಸಕರಿಗೆ ಶೈಕ್ಷಣಿಕ ಕಾರ್ಯಾಗಾರ । ನಿವೃತ್ತರಾಗಲಿರುವ ವಾಣಿಜ್ಯಶಾಸ್ತ್ರ ಪ್ರಾಂಶುಪಾಲರಿಗೆ ಸನ್ಮಾನ
ವಾಣಿಜ್ಯಶಾಸ್ತ್ರಕ್ಕೆ ಪ್ರಸ್ತುತ ದಿನಗಳಲ್ಲಿ ಉತ್ತಮವಾದ ಅವಕಾಶಗಳಿದ್ದು, ಕಂಪ್ಯೂಟರ್ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳ ಪರಿಚಯ ಮಾಡಿಸುವ ಕೆಲಸ ಶಿಕ್ಷಕರಿಂದ ಆಗಬೇಕೆಂದು ಪದವಿ ಪೂರ್ವ ಉಪನಿರ್ದೇಶಕ ಗಂಗಾಧರ್ ತಿಳಿಸಿದ್ದಾರೆ.
ನಗರದ ಜಯದೇವ ಹಾಸ್ಟಲ್ ಆವರಣದಲ್ಲಿರುವ ಅನನ್ಯ ಇನ್ಸ್ಟಿಟ್ಯೂಟ್ ಅಫ್ ಕಾರ್ಮಸ್ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನ ಸಭಾಂಗಣದಲ್ಲಿ ಶಾಲಾಶಿಕ್ಷಣ(ಪಿಯು)ಇಲಾಖೆ, ತುಮಕೂರು ಜಿಲ್ಲಾ ವ್ಯವಹಾರ ಅಧ್ಯಯನ ಉಪನ್ಯಾಸಕರ ವೇದಿಕೆ, ಅನನ್ಯ ಇನ್ಸ್ಟಿಟ್ಯೂಟ್ ಅಫ್ ಕಾರ್ಮಸ್ ಅಂಡ್ ಮ್ಯಾನೇಜ್ಮೆಂಟ್ ಪೋರಂ ವತಿಯಿಂದ ವಾಣಿಜ್ಯಶಾಸ್ತ್ರ ಉಪನ್ಯಾಸಕರಿಗೆ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರ ಉದ್ದೇಶಿಸಿ ಮಾತನಾಡುತಿದ್ದ ಅವರು, ಬದಲಾವಣೆಗೆ ಅನುಗುಣವಾಗಿ ಮಕ್ಕಳನ್ನು ತಯಾರುವ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.ವ್ಯಾಟ್, ಜಿಎಸ್ಟಿಯಂತಹ ಯೋಜನೆಗಳು ಕಾರ್ಮಸ್ ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಹೆಚ್ಚಿಸಿವೆ. ತುಮಕೂರು ವಿಶ್ವವಿದ್ಯಾಲಯ ಒಂದರಲ್ಲಿಯೇ ಸುಮಾರು 17 ಮಾಸ್ಟರ್ ಡಿಗ್ರಿ (ಎಂ.ಕಾಂ) ಸೆಂಟರ್ಗಳಿವೆ. ಹಾಗಾಗಿ ನಮ್ಮ ಮಕ್ಕಳು ಇಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಇಂದಿನ ಅಗತ್ಯಕ್ಕೆ ತಕ್ಕಂತೆ ತಯಾರು ಮಾಡಬೇಕಾಗಿದೆ ಎಂದು ತಿಳಿಸಿದರು.
ಅನನ್ಯ ಇನ್ಸ್ಟಿಟ್ಯೂಟ್ ಅಫ್ ಕಾರ್ಮಸ್ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನ ಮುಖ್ಯಸ್ಥ ವಿಶ್ವನಾಥ್ ಮಾತನಾಡಿ, ಮಕ್ಕಳು ಹೆಚ್ಚು ಅಂಕ ಪಡೆದು ಪಾಸು ಮಾಡುವುದರ ಜೊತೆಗೆ ಇಂಡಸ್ಟ್ರಿ ಮತ್ತು ಅಕಾಡೆಮಿಕ್ ಅನ್ನು ಒಂದು ಗೂಡಿಸುವ ಕೆಲಸ ಆಗಬೇಕು. ಆಗ ಮಾತ್ರ ಮಕ್ಕಳು ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯ. ಚಾರ್ಟೆಡ್ ಅಕೌಂಟೆಂಟ್ಗಳಿಗೆ ಬಹಳ ಬೇಡಿಕೆ ಇದೆ. ಹಾಗಾಗಿ ಈ ವಿಷಯದಲ್ಲಿ ಮಕ್ಕಳಲ್ಲಿ ಕನಿಷ್ಠ ಜ್ಞಾನವನ್ನಾದರೂ ನಾವು ತುಂಬಬೇಕು. ಜೊತೆಗೆ ವ್ಯವಹಾರಿಕ ಭಾಷೆಯಾಗಿರುವ ಇಂಗ್ಲೀಷನ್ನು ಮಕ್ಕಳಿಗೆ, ಅದರಲ್ಲಿಯೂ ಗ್ರಾಮೀಣ ಭಾಗದ ಮಕ್ಕಳಿಗೆ ಕಲಿಸುವ ಮೂಲಕ ಬದಲಾವಣೆಗೆ ತಕ್ಕಂತೆ ಮಕ್ಕಳನ್ನು ತಯಾರ ಮಾಡಬೇಕೆಂದು ಸಲಹೆ ನೀಡಿದರು.
ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪ್ರಭಾಕರ ರೆಡ್ಡಿ ಮಾತನಾಡಿ, ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಹಾಗೂ ಕಾರ್ಮಸ್ ಅಂಡ್ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ನಿರಂತರ ಬದಲಾವಣೆಗಳಾಗುತ್ತಿವೆ. ಹಾಗಾಗಿ ಉಪನ್ಯಾಸಕರಿಗೆ ತರಬೇತಿ ಅಗತ್ಯ ಎಂದು ಪರಿಗಣಿಸಿ, ಈ ಶೈಕ್ಷಣಿಕ ಕಾರ್ಯಾಗಾರ ಹಮ್ಮಿಕೊಂಡಿದ್ದೇವೆ. 2024-25ನೇ ಸಾಲಿನಿಂದ ವಿಜ್ಞಾನ, ಕಾರ್ಮಸ್, ಅರ್ಥಶಾಸ್ತ್ರದ ಜೊತೆಗೆ ಕಂಪ್ಯೂಟರ್ ಸೈನ್ಸ್, ಹೋಂ ಸೈನ್ಸ್ ಮತ್ತು ಎಲೆಕ್ಟ್ರಾನಿಕ್ಸ್ ವಿಷಯದಲ್ಲಿಯೂ ಸಹ ಎನ್ಸಿಇಆರ್ಟಿ ಪಠ್ಯಕ್ರಮವನ್ನು ಅನುಸರಿಸಲಾಗುತ್ತಿದೆ. ಪ್ರಾಜೆಕ್ಟ್ ಮತ್ತು ಅಸೈನಮೆಂಟ್ಗಳಿಗೂ ಅರ್ಜಿಂ ಪ್ರೇಮಜೀ ವಿವಿಯಿಂದ ಅಯ್ದ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಕೆಲವೇ ದಿನಗಳಲ್ಲಿ ನಿವೃತ್ತರಾಗಲಿರುವ ವಾಣಿಜ್ಯಶಾಸ್ತ್ರ ಪ್ರಾಂಶುಪಾಲರಾದ ಅಶ್ವಥಪ್ಪ, ಆಶ್ವಥನಾರಾ ಯಣ್, ಶೇಷಾಚಲ, ಗೋಪಾಲ್ ಮಾರಕಾಲ್ ಅವರನ್ನು ಅಭಿನಂದಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ನಾರಾಯಣ್. ಎಚ್.ಎಸ್., ಲಕ್ಷ್ಮಿ ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಪಿಯು ಪ್ರಾಂಶುಪಾಲರ ಸಂಘದ ಉಪಾಧ್ಯಕ್ಷ ಪ್ರಕಾಶ್ ಎಸ್. ಭಾಗವಹಿಸಿದ್ದರು. ಕಾರ್ಯಾಗಾರದಲ್ಲಿ ನೂರಾರು ವಾಣಿಜ್ಯಶಾಸ್ತ್ರ ಉಪನ್ಯಾಸಕರು ಪಾಲ್ಗೊಂಡಿದ್ದರು.ಫೋಟೊ
ತುಮಕೂರಿನ ಅನನ್ಯ ಇನ್ಸ್ಟಿಟ್ಯೂಟ್ ಅಫ್ ಕಾರ್ಮಸ್ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ವಾಣಿಜ್ಯಶಾಸ್ತ್ರ ಉಪನ್ಯಾಸಕರಿಗೆ ಶೈಕ್ಷಣಿಕ ಕಾರ್ಯಾಗಾರವನ್ನು ಪದವಿ ಪೂರ್ವ ಉಪನಿರ್ದೇಶಕ ಗಂಗಾಧರ್ ಉದ್ಘಾಟಿಸಿದರು. ಜತೆಗೆ ಕಾಲೇಜಿನ ಮುಖ್ಯಸ್ಥ ವಿಶ್ವನಾಥ್ ಮತ್ತಿತರರು ಇದ್ದರು.