ಕನ್ನಡಪ್ರಭ ವಾರ್ತೆ ಪಾವಗಡ
ರಾಜ ಮಹಾರಾಜರ ಆಳ್ವಿಕೆಗೊಳಪಟ್ಟ ತಾಲೂಕಿನ ನಿಡಗಲ್ ದುರ್ಗವು ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಇಲ್ಲಿ ನೂರಾರು ದೇಗುಲಗಳಿವೆ. ಬೆಟ್ಟದ ಸುತ್ತ ಪ್ರಕೃತಿ ಮಡಿಲು ತುಂಬಿಸಿಕೊಂಡಿದ್ದು, ಈ ಕ್ಷೇತ್ರವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ರೂಪಿಸಲು ಕೇಂದ್ರ, ರಾಜ್ಯ ಸರ್ಕಾರದ ಗಮನ ಸೆಳೆಯುವುದಾಗಿ ಶಾಸಕ ಎಚ್.ವಿ.ವೆಂಕಟೇಶ್ ಭರವಸೆ ನೀಡಿದರು.ಶ್ರಾವಣ ಮಾಸದ ಕಡೆ ದಿನವಾಗಿದ್ದ ಹಿನ್ನೆಲೆ ಗ್ರಾಮಸ್ಥರು ಹಾಗೂ ತಾಲೂಕು ವಾಲ್ಮೀಕಿ ಜಾಗೃತಿ ವೇದಿಕೆಯಿಂದ ಸೋಮವಾರ ನಿಡಗಲ್ ದುರ್ಗದ ಶ್ರೀರಾಮತೀರ್ಥದ ಬಳಿ ಹಮ್ಮಿಕೊಂಡಿದ್ದ 2024 ನೇ ಸಾಲಿನ ನಿಡಗಲ್ ಉತ್ಸವದ ಸಮಾರಂಭದ ಉದ್ಘಾಟನೆ ನೆರೆವೇರಿಸಿ ಮಾತನಾಡಿದರು.
ಬಹು ಎತ್ತರ ಹಾಗೂ ವಿಶಾಲ ವ್ಯಾಪ್ತಿ ಹೊಂದಿರುವ ನಿಡಗಲ್ ಬೆಟ್ಟವು ತನ್ನದೇ ಆದ ವೈಶಿಷ್ಟ್ಯತೆ ಹೊಂದಿದ್ದು, ಎದುರಾಳಿಗಳು ಅಕ್ರಮ ಪ್ರವೇಶ ಮಾಡದಂತೆ ಬೆಟ್ಟದ ಸುತ್ತ ಬೃಹತ್ ಕೋಟೆಯಿಂದ ಸುತ್ತುವರಿದಿದೆ. ವಿವಿಧ ಮರ, ಗಿಡ ಸೇರಿ ಪ್ರಕೃತಿ ಮಡಿಲು ಮೈದುಂಬಿಸಿಕೊಂಡ ಈ ಬೆಟ್ಟವು ನೋಡುಗರಿಗೆ ಅತ್ಯಂತ ಆಕರ್ಷಣೀಯವಾಗಿದೆ. ಇಂತಹ ರಮಣೀಯ ಪ್ರದೇಶದಲ್ಲಿ ನಿಡಗಲ್ ಉತ್ಸವ ನಡೆಯುತ್ತಿರುವುದು ಸಂತಸ ತಂದಿದೆ. ಕಾರ್ಯಕ್ರಮದ ಆಯೋಜಕರಿಗೆ ಅಭಿನಂದನೆ ಸಲ್ಲಿಸುತ್ತಾ, ನಿಡಗಲ್ ಕ್ಷೇತ್ರದ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆದು, ನಿಡಗಲ್ ಬೆಟ್ಟ ಸಮಗ್ರ ಪ್ರಗತಿಗೆ ಸದಾ ಪ್ರೋತ್ಸಾಹಿಸುವ ಭರವಸೆ ವ್ಯಕ್ತಪಡಿಸಿದರು.ಸಂಸದ ಗೋವಿಂದ ಕಾರಜೋಳ ಮಾತನಾಡಿ, ಐತಿಹಾಸಿಕ ಹಿನ್ನೆಲೆಯ ನಿಡಗಲ್ ತನ್ನದೇ ಆದ ಇತಿಹಾಸ ಹೊಂದಿದ್ದು, ಕ್ಷೇತ್ರದ ಪ್ರಗತಿಗೆ ಬದ್ಧರಿದ್ದೇವೆ. ಪ್ರವಾಸೋದ್ಯಮ ಕೇಂದ್ರವನ್ನಾಗಿ ರೂಪಿಸಲು ಕೇಂದ್ರ ಸರ್ಕಾರದಲ್ಲಿ ಪ್ರಸ್ತಾವನೆ ಇಡುವುದಾಗಿ ಹೇಳಿದರು.
ಮಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪ, ನಿಡಗಲ್ ದುರ್ಗದ ಐತಿಹಾಸಿಕ ಹಿನ್ನೆಲೆ ಹಾಗೂ ತಾವು ಶಾಸಕರಾಗಿದ್ದಾಗ ನಿಡಗಲ್ ಪ್ರಗತಿಗೆ ನೀಡಿದ ಒತ್ತು ಮತ್ತು ಅನುದಾನದ ಬಗ್ಗೆ ವಿವರಿಸಿದರು.ವಾಲ್ಮೀಕಿ ಜಾಗೃತಿ ವೇದಿಕೆಯಿಂದ ಶಾಸಕ ಎಚ್.ವಿ.ವೆಂಕಟೇಶ್ ಮತ್ತು ನೂತನ ಪುರಸಭಾ ಅಧ್ಯಕ್ಷ ಪಿ.ಎಚ್.ರಾಜೇಶ್ ಹಾಗೂ ತೆಂಗಿನಕಾಯಿ ರವಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಿಡಗಲ್ ಆಶ್ರಮದ ಅಧ್ಯಕ್ಷ ಸಂಜಯ್ಕುಮಾರ್ ಸ್ವಾಮೀಜಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದು, ಪುರಸಭಾ ಸದಸ್ಯರಾದ ರವಿ, ನ್ಯಾಯದಗುಂಟೆ ಎನ್.ಎ.ಈರಣ್ಣ, ಮಾಜಿ ತಾಪಂ ಸದಸ್ಯ ದಿವಾಕರಪ್ಪ, ದೊಡ್ಡೇನಹಳ್ಳಿ ಮಾರಪ್ಪ, ಗುಜ್ಜಾರಹಳ್ಳಿ ಬಸವರಾಜು, ನಿಡಗಲ್ ಪಾಲ್ಗುಣಪ್ಪ ಮಹರಾಜ್, ಯುವ ಮುಖಂಡರಾದ ಚಿತ್ತಗಾನಹಳ್ಳಿ ಚಂದ್ರು, ದೇವಲಕರೆ ಲೋಕೇಶ್, ಓಂಕಾರ್ ನಾಯಕ, ಕನ್ನಮೇಡಿ ಸುರೇಶ್, ವಿರ್ಲಗೊಂದಿ ನಾಗರಾಜು ಸೇರಿ ಇತರೆ ಆನೇಕ ಮುಖಂಡರು ಉಪಸ್ಥಿತರಿದ್ದರು.