ದೊಡ್ಡಬಳ್ಳಾಪುರ: ಶೈಕ್ಷಣಿಕ ಅಭಿವೃದ್ಧಿಯಿಂದ ಮಾತ್ರ ಸಮುದಾಯದ ಪ್ರಗತಿ ಸಾಧ್ಯ. ಎಲ್ಲ ಹಂತಗಳಲ್ಲಿ ಮುನ್ನಡೆ ಸಾಧಿಸಬೇಕಾದರೆ ಉತ್ತಮ ಶಿಕ್ಷಣದಿಂದಲೇ ಸಾಧ್ಯ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.
ಜೀವನದಲ್ಲಿ ಸಿಗುವ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ನಮ್ಮ ಗುರಿ ಮುಟ್ಟಬೇಕು. ಸಾಧನೆಯ ಹಾದಿಯಲ್ಲಿ ಯಾವತ್ತೂ ಪಲಾಯನವಾದಿ ಆಗಬಾರದು. ಹಲವಾರು ಸಾಧಕರ ಜೀವನ ಚರಿತ್ರೆಯನ್ನು ನೋಡಿದಾಗ ಅವರ ನಿರಂತರ ಪರಿಶ್ರಮದ ಸಾಧನೆ -ತಿಳಿಯುತ್ತದೆ. ವಿಪ್ರೋದಲ್ಲಿ ಕೆಲಸ ಅರಸಿ ಹೊರಟ ನಾರಾಯಣಮೂರ್ತಿ ಜಗತ್ತಿನ ದೊಡ್ಡ ಕಂಪನಿ ಇನ್ಫೋಸಿಸ್ ಕಟ್ಟಿದರು. ನಮ್ಮ ಕೆಲಸಗಳಲ್ಲಿ ನಾವು ಸಾಧನೆ ಮಾಡಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅವಕಾಶ ದೊರೆಯಬೇಕಾದರೆ ತಾಂತ್ರಿಕ ಜ್ಞಾನ ಮತ್ತು ಕೌಶಲ ಉತ್ತೇಜಿಸುವ ಕೆಲಸ ಆಗಬೇಕು. ಪುನೀತ್ ರಾಜ್ಕುಮಾರ್ ಅವರ ಸಮಾಜ ಸೇವೆಯನ್ನು ನಾವು ಇಂದಿಗೂ ಸ್ಮರಿಸುತ್ತೇವೆ ಎಂದರು.
ಪುಷ್ಪಾಂಡಜ ಆಶ್ರಮದ ದಿವ್ಯ-ಜ್ಞಾನಾನಂದಗಿರಿ ಸ್ವಾಮೀಜಿ, ಸಾಧನೆ ಎಂದಿಗೂ ಸಾಧಕನ ಸ್ವತ್ತೇ ವಿನಃ ಸೋಮಾರಿಯ ಸ್ವತ್ತಲ್ಲ. ಸ್ವಾರ್ಥ ಬದಿಗಿಟ್ಟು ಸಮಾಜವನ್ನು ವಿಶಾಲ ದೃಷ್ಟಿಯಿಂದ ನೋಡಿದಾಗ ಮಾತ್ರ ಬದುಕಿನಲ್ಲಿ ನಿಜವಾದ ನೆಮ್ಮದಿ ದೊರೆಯುತ್ತದೆ ಎಂದರು.ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪದವಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ 120 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನದೊಂದಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಯೋಗ, ಕ್ರೀಡಾ ಪ್ರತಿಭೆಗಳು, ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.
ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಆರ್.ರವಿ, ಅಂತಾರಾಷ್ಟ್ರೀಯ ಯೋಗ ಚಿಕಿತ್ಸಾಲಯದ ಕಾರ್ಯದರ್ಶಿ ಬಿ.ಎಸ್.ಮಂಜುನಾಥಸ್ವಾಮಿ, ಪಿಸಿವಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಪಿ.ಸಿ. ವೆಂಕಟೇಶ್, ಕಾರ್ಯದರ್ಶಿ ಪಿ.ವಿ. ಪ್ರಶಾಂತ್, ಖಜಾಂಚಿ ಪುಷ್ಪಲತಾ, ಟ್ರಸ್ಟಿಗಳಾದ ಅನುಶ್ರೀ, ಡಾ.ಚಂದನ ಇತರರಿದ್ದರು.4ಕೆಡಿಬಿಪಿ3-
ದೊಡ್ಡಬಳ್ಳಾಪುರದ ಪಿಸಿವಿ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರದಲ್ಲಿ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.