ಭಾರತ ಬಲಿಷ್ಠವಾಗಲು ಸಮುದಾಯ ಆರೋಗ್ಯ ಮುಖ್ಯ

ಕನ್ನಡಪ್ರಭ ವಾರ್ತೆ ವಿಜಯಪುರ: ಭಾರತವು ಬಲಿಷ್ಠವಾಗಿರಬೇಕಾದರೆ ಸಮುದಾಯದ ಆರೋಗ್ಯದ ಪಾತ್ರ ಬಹುಮುಖ್ಯವಾಗಿದೆ ಎಂದು ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ.ವೈ.ಎಂ.ಜಯರಾಜ ಅಭಿಪ್ರಾಯಪಟ್ಟರು.

KannadaprabhaNewsNetwork | Published : Apr 27, 2024 7:46 PM IST

ಕನ್ನಡಪ್ರಭ ವಾರ್ತೆ ವಿಜಯಪುರ: ಭಾರತವು ಬಲಿಷ್ಠವಾಗಿರಬೇಕಾದರೆ ಸಮುದಾಯದ ಆರೋಗ್ಯದ ಪಾತ್ರ ಬಹುಮುಖ್ಯವಾಗಿದೆ ಎಂದು ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ.ವೈ.ಎಂ.ಜಯರಾಜ ಅಭಿಪ್ರಾಯಪಟ್ಟರು.

ನಗರದ ಬಿಎಲ್‌ಡಿಇ ಸಂಸ್ಥೆಯ ಬಿ.ಎಂ.ಪಾಟೀಲ ನರ್ಸಿಂಗ್ ಕಾಲೇಜು, ರಾಜೀವ ಗಾಂಧಿ ವಿವಿ, ಬಿಎಲ್‌ಡಿಇ ಡೀಮ್ಡ್ ವಿವಿ, ಸೊಸೈಟಿ ಕಮ್ಯುನಿಟಿ ನರ್ಸಿಂಗ್ ಆಫ್ ಇಂಡಿಯಾ ಸಹಯೋಗದಲ್ಲಿ ನಗರದ ನರ್ಸಿಂಗ್ ಕಾಲೇಜಿನಲ್ಲಿ ಪ್ರಾರಂಭವಾದ ಸಮುದಾಯ ಆರೋಗ್ಯ ಶುಶ್ರೂಷಾ ಶಿಕ್ಷಣ ಕೌಶಲ್ಯ ಮತ್ತು ಸಂಶೋಧನೆಯಲ್ಲಿ ಕ್ರಾಂತಿ ಮತ್ತು ಹೊಸ ದೃಷ್ಟಿಕೋನ ಕುರಿತು ನಡೆದ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿವಿಯ ಸೆನೆಟ್ ಸದಸ್ಯ ಡಾ.ಸೋಮಶೇಖರ ಕಲ್ಮಠ ಮಾತನಾಡಿ, ಮುಂದಿನ ದಿನಗಳಲ್ಲಿ ಎಲ್ಲ ವಿಭಾಗಗಳಲ್ಲಿ ಶುಶ್ರೂಷಕರು ಅಗತ್ಯವಾಗಲಿದ್ದಾರೆ. ಶುಶ್ರೂಷಕರು ಇಲ್ಲದೇ ಆರೋಗ್ಯ ಕ್ಷೇತ್ರ ಇರಲಾರದು. ಬಸವ ನಾಡಿನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸುವ ಮೂಲಕ ಬಿಎಲ್‌ಡಿಇ ಸಂಸ್ಥೆ ಆರೋಗ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದೆ ಎಂದು ಶ್ಲಾಘಿಸಿದರು.

ಸೊಸೈಟಿ ಕಮ್ಯುನಿಟಿ ನರ್ಸಿಂಗ್ ಆಫ್ ಇಂಡಿಯಾ ಅಧ್ಯಕ್ಷ ಡಾ.ಚೆಲರಾನಿ ವಿಜಯಕುಮಾರ ಮಾತನಾಡಿ, ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಸಮ್ಮೇಳನಗಳು ಮಹಾನಗರಗಳಲ್ಲಿ ನಡೆಯುತ್ತವೆ. ಈ ಬಾರಿ ಉತ್ತರ ಕರ್ನಾಟಕದ ವಿಜಯಪುರದಲ್ಲಿ ಅತ್ಯುತ್ತಮವಾಗಿ ಸಮ್ಮೇಳನ ಆಯೋಜಿಸಿರುವುದು ಹೆಮ್ಮೆಯ ಸಂಗತಿ. ಮುಂಬರುವ ದಿನಗಳಲ್ಲಿ ಶುಶ್ರೂಷಕರಿಗೆ ಸಂಬಂಧಿಸಿದ ಇನ್ನಷ್ಟು ಕಾರ್ಯಕ್ರಮಗಳು ನಡೆಯಲಿ ಎಂದು ಶುಭ ಹಾರೈಸಿದರು.

ಕರ್ನಾಟಕ ಡಿಪ್ಲೊಮಾ ನರ್ಸಿಂಗ್‌ ಬೋರ್ಡ್ ಕಾರ್ಯದರ್ಶಿ ಮಡಿವಾಳಪ್ಪ ನಾಗರಳ್ಳಿ ಮಾತನಾಡಿ, ಸಮುದಾಯದಲ್ಲಿ ಶುಶ್ರೂಷಕರ ಪಾತ್ರ ಬಹು ಮುಖ್ಯವಾಗಿದ್ದು, ಮುಂದಿನ ದಿನಗಳಲ್ಲಿ ಸಮುದಾಯ ಶುಶ್ರೂಷಕರಿಗೆ ಎಲ್ಲ ರೀತಿಯ ಅಧಿಕಾರ ನೀಡಿದರೆ, ಆರೋಗ್ಯ ಸುಧಾರಣೆ ಮತ್ತಷ್ಟು ಉತ್ತಮವಾಗಿರಲಿದೆ ಎಂದು ತಿಳಿಸಿದರು.

ಬಿಎಲ್‌ಡಿಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ.ಆರ್‌.ಬಿ.ಕೊಟ್ನಾಳ ಮಾತನಾಡಿ, ಸಂಸ್ಥೆ ವಿದ್ಯಾರ್ಥಿಗಳು ಮತ್ತು ಆರೋಗ್ಯ ಕ್ಷೇತ್ರದ ಸಿಬ್ಬಂದಿಗೆ ಕಾಲಕಾಲಕ್ಕೆ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಆಯಾ ಕ್ಷೇತ್ರಗಳ ಬದಲಾವಣೆಗಳ ಕುರಿತು ತರಬೇತಿ ನೀಡುತ್ತಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ.ಆನಂದ ಪಾಟೀಲ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ರಾಜೇಶ ಹೊನ್ನುಟಗಿ, ಸೊಸೈಟಿ ಕಮ್ಯುನಿಟಿ ನರ್ಸಿಂಗ್ ಆಫ್ ಇಂಡಿಯಾ ಕಾರ್ಯದರ್ಶಿ ಡಾ.ಶಾಂಡ್ರೆಲ್ಲಾ ಇಮ್ಯಾನುಯೆಲ್ ಮಾತನಾಡಿದರು.

ಈ ಸಂದರ್ಭದಲ್ಲಿ ಗುರುರಾಜ ಗುಗ್ಗರಿ, ಡಾ.ಜಯಶ್ರೀ ಪೂಜಾರಿ, ಡಾ.ಬಶೀರ ಅಹ್ಮದ, ಡಾ.ಕವಿತಾ, ಸೌಜನ್ಯ ಪೂಜಾರಿ, ಅಮರನಾಥ ಸನ್ಮುಕೆ, ಬಾಪು ಖೋದ್ನಾಪೂರ‌, ಪ್ರವೀಣ ಬಗಲಿ ಮುಂತಾದವರು ಉಪಸ್ಥಿತರಿದ್ದರು.

ನರ್ಸಿಂಗ್ ಕಾಲೇಜಿನ ಉಪಪ್ರಾಚಾರ್ಯೆ ಡಾ.ಸುಚಿತ್ರಾ ರಾಠಿ ಸ್ವಾಗತಿಸಿದರು. ಪ್ರಾಚಾರ್ಯ ಡಾ.ಶಾಲ್ಮೊನ ಚೊಪಡೆ ಪರಿಚಯಿಸಿದರು. ಈ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ 800ಕ್ಕಿಂತ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Share this article