ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)
ಶಿಸ್ತು, ಸಂಯಮತೆ, ಸಂಸ್ಕೃತಿ, ಸನ್ನಢತೆ ಅಡಿಯಲ್ಲಿ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ಒಳ್ಳೆಯ ಮನಸುಗಳನ್ನು ನೀಡುವ ಕೆಲಸ ತುಂಬ ಮಹತ್ತರವಾದುದು. ಸನ್ನಢತೆಯುಳ್ಳ ವಿದ್ಯೆ ನಮ್ಮ ಬದುಕಲ್ಲಿ ಬಹು ಶ್ರೇಷ್ಠವಾದುದು ಎಂದು ಬಾಗಲಕೋಟೆ ವಿಶ್ವವಿದ್ಯಾಲಯದ ಸಹಾಯಕ ಕುಲ ಸಚಿವ ಡಾ.ಚಿದಾನಂದ ಢವಳೇಶ್ವರ ಹೇಳಿದರು.ಬಾಗಲಕೋಟೆ ವಿಶ್ವವಿದ್ಯಾಲಯ ಜಮಖಂಡಿ ಹಾಗೂ ಎಸ್ಡಿಎಂ ಮಹಾವಿದ್ಯಾಲಯ ತೇರದಾಳ ಸಂಯುಕ್ತಾಶ್ರಯದಲ್ಲಿ ಬಿಇಡಿ ಸಭಾಂಗಣದಲ್ಲಿ ಸನ್ ೨೦೨೩-೨೪ನೇ ಸಾಲಿನ ಬಿಇಡಿ ಪ್ರಶಿಕ್ಷಣಾರ್ಥಿಗಳ ಸ್ವಾಗತ ಕಾರ್ಯಕ್ರಮ, ಶಿಕ್ಷಕ ವಿದ್ಯಾರ್ಥಿ ಒಕ್ಕೂಟ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಬಡ ಪ್ರತಿಭಾವಂತ ಮಕ್ಕಳಿಗೆ ವಿಶೇಷ ಮತ್ತು ಜಾಗತಿಕ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸಂಸ್ಥೆಯ ಸೇವೆ ಪ್ರಶಂಸಾರ್ಹವಾಗಿದೆ ಎಂದರು.
ಸಂಸ್ಥಾಪಕ ಚೇರಮನ್ ಡಾ.ಎಂ.ಎಸ್.ದಾನಿಗೊಂಡ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ನಾಡಿನಲ್ಲಿ ಅಸಂಖ್ಯೆ ವಿದ್ಯಾವಂತರಿದ್ದಾರೆ. ಆದರೆ, ಇನ್ನೂ ಈ ದೇಶ ಗೊಂದಲದ ಗೂಡಲ್ಲಿದೆ. ವಿದ್ಯೆಯ ಜೊತೆಗೆ ಸನ್ನಢತೆ ಮತ್ತು ಪ್ರಾಮಾಣಿಕ ವ್ಯಕ್ತಿಗಳ ಅವಶ್ಯಕತೆ ಇಂದಿಗೂ ಇದೆ. ನಾವು ಕೇವಲ ವಿದ್ಯಾವಂತರಾದರೇ ಸಾಲದು ಬದಲಾಗಿ ಸಚ್ಚಾರಿತ್ಯವಂತರಾಗಿ ದೇಶದ ಅಭಿವೃದ್ಧಿಯಲ್ಲಿ ಪ್ರ್ರಾಮಾಣಿಕತೆಯಿಂದ ಕೈಜೋಡಿಸುವ ಗುಣಗ್ರಾಹಿಗಳಾಗಬೇಕು ಎಂದರು.ಅತಿಥಿ ನಾರಾಯಣ ಕುಲಕರ್ಣಿ, ಎಸ್ಡಿಎಂ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ಡಾ.ಪುಷ್ಪದಂತ ಎಂ.ದಾನಿಗೊಂಡ, ಪ್ರಾಚಾರ್ಯ ಡಾ.ಎಂ.ಆರ್.ಪಾಟೀಲ, ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಪ್ರೊ.ಎಸ್.ಎಂ.ಪರಮಗೊಂಡ, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಯು.ಎಂ.ಪಕಾಲೆ ಹಾಗೂ ವರ್ಗಪ್ರತಿನಿಧಿ ಅಸ್ಲಾಂ ಪೆಂಡಾರಿ, ಮಹಿಳಾ ಪ್ರತಿನಿಧಿ ವರ್ಷಾ ರಾಠೋಡ ಉಪಸ್ಥಿತರಿದ್ದರು.
ಮಮ್ತಾಜ್ ನದಾಫ ನೃತ್ಯ ಗಮನ ಸೆಳೆಯಿತು. ಡಾ.ವಿ.ಎಸ್.ಛಬ್ಬಿಯವರು ನಿರೂಪಿಸಿದರು. ಎಸ್.ಎಂ.ಪರಮಗೊಂಡ ಸ್ವಾಗತಿಸಿದರು. ಪ್ರೊ.ಎಸ್.ಎ.ಕುಂಬಾರ ವಂದಿಸಿದರು.