ಕುಮಟಾ: ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ ೭೬೬ಇ ಹಾಗೂ ರಾಷ್ಟ್ರೀಯ ಹೆದ್ದಾರಿ ೬೬ ಚತುಷ್ಪಥ ಕಾಮಗಾರಿಯ ವಿಳಂಬಕ್ಕೆ ಇನ್ನೂ ನೆಪ ಹೇಳುತ್ತಾ ಕೂರದೇ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಶಾಸಕ ದಿನಕರ ಶೆಟ್ಟಿ ಕಟ್ಟುನಿಟ್ಟಾಗಿ ಎರಡೂ ಕಾಮಗಾರಿ ನಿರ್ವಹಣೆಯ ಗುತ್ತಿಗೆ ಕಂಪನಿಗೆ ಹಾಗೂ ಅಧಿಕಾರಿಗಳಿಗೆ ಎಚ್ಚರಿಸಿದರು.
ತಾಲೂಕು ಸೌಧದ ಸಭಾಭವನದಲ್ಲಿ ಮಂಗಳವಾರ ರಾ.ಹೆ.ಪ್ರಾಧಿಕಾರದ ಅಧಿಕಾರಿಗಳು, ಆರ್.ಎನ್.ಎಸ್ ಮತ್ತು ಐ.ಆರ್.ಬಿ ಕಂಪನಿಯ ಅಧಿಕಾರಿಗಳ ಸಭೆ ನಡೆಸಿದರು.ಕುಮಟಾ-ಶಿರಸಿ ರಸ್ತೆ ಕಾಮಗಾರಿ ವಿಳಂಬಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಗುತ್ತಿಗೆ ಕಂಪನಿಯವರನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.
ಕಾಮಗಾರಿಗೆ ಬೇಕಾದ ಜಲ್ಲಿ ಮುಂತಾದ ಕಚ್ಚಾ ಸಾಮಗ್ರಿಗಳನ್ನು ದೂರದ ಹಾನಗಲ್ ಕಡೆಗಳಿಂದ ತರಬೇಕಾಗಿದೆ. ಹಣ ಸಂದಾಯವಾಗದ್ದರಿಂದ ವಿಳಂಬವಾಗುತ್ತಿದೆ ಎಂದು ಆರ್ಎನ್ಎಸ್ ಕಂಪನಿಯವರು ತಿಳಿಸಿದಾಗ ಪ್ರತಿಕ್ರಿಯಿಸಿದ ಶಾಸಕ ಶೆಟ್ಟಿ, ನೀವು ಇಂಥ ಕ್ಷುಲಕ ಕಾರಣ ಹೇಳುವ ಬದಲು ಮೊದಲು ರಸ್ತೆ ಕೆಲಸ ಮಾಡಿ. ಕೆಲಸ ವಿಳಂಬಕ್ಕೆ ಕುಂಟು ನೆಪ ಹೇಳುವ ಬದಲು ಸಾರ್ವಜನಿಕರ ಕೆಲಸ ಮಾಡಲು ಮೊದಲು ನಿಮ್ಮಲ್ಲಿ ಇಚ್ಚಾಶಕ್ತಿ ಇರಬೇಕು. ನೀವೇ ಒಪ್ಪಿಕೊಂಡಂತೆ ಡಿಸೆಂಬರ್-೨೦೨೫ ರೊಳಗೆ ಸಂಪೂರ್ಣ ಕಾಮಗಾರಿ ಮುಗಿಸಿ ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.ಖಾಸಗಿಯವರಿಂದ ಭೂಸ್ವಾಧೀನಪಡಿಸಿಕೊಂಡ ಸ್ಥಳದಲ್ಲಿಯ ಮರಗಳನ್ನು ಕಟಾವು ಕಾರ್ಯ ಶೀಘ್ರವಾಗಲಿ, ನಿಗದಿಯಂತೆ ವರ್ಷಾಂತ್ಯದೊಳಗೆ ಶಿರಸಿ-ಕುಮಟಾ ರಸ್ತೆ ಕಾಮಗಾರಿ ಮುಗಿಯಬೇಕು ಎಂದರು.
ಬಳಿಕ ರಾಷ್ಟ್ರೀಯ ಹೆದ್ದಾರಿ ೬೬ ಚತುಷ್ಪಥ ಕಾಮಗಾರಿ ಪ್ರಗತಿಯ ಬಗ್ಗೆ ಐ.ಆರ್.ಬಿ ಅಧಿಕಾರಿಗಳು ಮತ್ತು ರಾಹೆ ಪ್ರಾಧಿಕಾರದ ಪಿ.ಡಿ ರವರೊಂದಿಗೆ ಚರ್ಚಿಸಿದರು. ಕುಮಟಾದಿಂದ ಹೊನ್ನಾವರ ವರೆಗೆ ಇರುವ ಮರಾಕಲ್ ಕುಡಿಯುವ ನೀರು ಯೋಜನೆಯ ಪೈಪ್ ಲೈನ್ಗಳನ್ನು ತೆರವುಗೊಳಿಸಲು ಯಾವುದೇ ಟೆಂಡರ್ ಕರೆಯದೇ ಕೆಲಸ ಮಾಡಿದ್ದರಿಂದ ಸರ್ಕಾರದ ಹಣ, ಅಂದರೆ ಜನರ ತೆರಿಗೆ ಹಣ ಕೋಟ್ಯಂತರ ವ್ಯಯವಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಆಕ್ಷೇಪಿಸಿದರು. ಸಮರ್ಪಕ ಉತ್ತರಿಸಲು ಎನ್.ಎಚ್.ಎ.ಐ ಮತ್ತು ಐ.ಆರ್.ಬಿ ಅಧಿಕಾರಿಗಳು ತಡಬಡಾಯಿಸಿದರು.ಸರ್ಕಾರದ ಕಡೆಯಿಂದ ಉಪವಿಭಾಗಾಧಿಕಾರಿಗಳು ಈ ಬಗ್ಗೆ ಕೂಲಂಕುಷವಾಗಿ ಮಾಹಿತಿ ಮತ್ತು ದಾಖಲೆ ಪಡೆದು ಪರಿಶೀಲಿಸಬೇಕು ಎಂದು ಸೂಚಿಸಿದ ಶಾಸಕ ದಿನಕರ ಶೆಟ್ಟಿ, ಸಾರ್ವಜನಿಕರ ತೆರಿಗೆ ಹಣ ಯಾರೂ ಲೂಟಿ ಮಾಡದಂತೆ ತಡೆಯುವುದು ನಮ್ಮೆಲ್ಲರ ಜವಾಬ್ದಾರಿ ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಎಂದರು.
ಸಭೆಯಲ್ಲಿ ರಾಹೆ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿವಕುಮಾರ, ಆರ್.ಎನ್.ಎಸ್.ಪ್ರಾಜೆಕ್ಟ್ ಮೆನೇಜರ್ ಆರ್.ಬಿ. ಪಾಟೀಲ್, ಐ.ಆರ್.ಬಿ ಪ್ರಾಜೆಕ್ಟ್ ಡೈರೆಕ್ಟರ್ ಶ್ರೀನಿವಾಸ, ಸೈಟ್ ಇಂಜಿನೀಯರ್ ಮಲ್ಲಿಕಾರ್ಜುನ, ಉಪವಿಭಾಗಾಧಿಕಾರಿ ಪಿ. ಶ್ರವಣಕುಮಾರ, ತಹಸೀಲ್ದಾರ ಶ್ರೀಕೃಷ್ಣ ಕಾಮಕರ, ತಾಪಂ ಇ.ಓ ಆರ್.ಎಲ್.ಭಟ್, ಕತಗಾಲ ಆರ್.ಎಫ್.ಒ ಪ್ರೀತಿ ನಾಯ್ಕ, ಕುಮಟಾ-ಶಿರಸಿ ರಸ್ತೆ ವ್ಯಾಪ್ತಿಗೊಳಪಟ್ಟ ಗ್ರಾಪಂ ಪಿಡಿಒಗಳು ಉಪಸ್ಥಿತರಿದ್ದರು.