ಸಂಡೂರಿನಿಂದ ಶ್ರೀ ಕುಮಾರಸ್ವಾಮಿ ದೇವಸ್ಥಾನಕ್ಕೆ ಪಾದಯಾತ್ರೆ
ತಾಲೂಕಿನ ಸ್ವಾಮಿಮಲೈ ಅರಣ್ಯ ಪ್ರದೇಶದಲ್ಲಿರುವ ಪುರಾಣ ಪ್ರಸಿದ್ಧ ಹರಿಶಂಕರ ದೇವಸ್ಥಾನದ ಬಳಿ ೨೫ ಸಾವಿರ ಸಸಿ ಹಾಗೂ ಬೀಜದುಂಡೆಗಳನ್ನು ಪರಿಸರಕ್ಕೆ ಸಮರ್ಪಿಸುವ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.
ಪಟ್ಟಣದ ವಾಸವಿ ಫೌಂಡೇಶನ್, ವೃಂದ ಗ್ರೂಪ್ ಮತ್ತು ವಿಶ್ವವಿನೂತನ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ೨ ದಶಕಗಳಿಂದ ೫೫೫ ಕಿಮೀ ಪಾದಯಾತ್ರೆ ಹಾಗೂ ೨೫ ಸಾವಿರ ಸಸಿ ಹಾಗೂ ಬೀಜದುಂಡೆಗಳನ್ನು ಪರಿಸರಕ್ಕೆ ಸಮರ್ಪಿಸುವ ಕಾರ್ಯಕ್ರಮ ಆರಂಭಿಸಲಾಗಿತ್ತು. ಎರಡೂ ಸಂಸ್ಥೆಗಳ ಮುಖಂಡರು, ಹಲವು ಪರಿಸರಾಸಕ್ತರು ಪಟ್ಟಣದ ವಾಸವಿ ಕನ್ಯಕಾಪರಮೇಶ್ವರಿ ದೇವಸ್ಥಾನದಿಂದ ಬೆಟ್ಟದಲ್ಲಿನ ಶ್ರೀಕುಮಾರಸ್ವಾಮಿ ದೇವಸ್ಥಾನಕ್ಕೆ ಪಾದಯಾತ್ರೆಯ ಮೂಲಕ ತೆರಳಿ, ದರ್ಶನ ಪಡೆದು, ಶ್ರೀ ಹರಿಶಂಕರ ದೇವಸ್ಥಾನದ ಆವರಣದಲ್ಲಿ ಕಾರ್ಯಕ್ರಮವನ್ನು ಸಮಾರೋಪಗೊಳಿಸಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಪ ವಲಯ ಅರಣ್ಯಾಧಿಕಾರಿ ತಿಪ್ಪೇಸ್ವಾಮಿ, ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯವಾಗಿದೆ. ೨೦ ವರ್ಷದಲ್ಲಿ ಸಹಸ್ರಾರು ಬೀಜದುಂಡೆಗಳನ್ನು ಪರಿಸರಕ್ಕೆ ಸಮರ್ಪಿಸುವುದಲ್ಲದೆ, ಸಾವಿರಾರು ಗಿಡಗಳನ್ನು ವಿವಿಧೆಡೆ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ವಾಸವಿ ಫೌಂಡೇಶನ್, ವೃಂದ ಗ್ರೂಪ್ ಹಾಗೂ ವಿಶ್ವವಿನೂತನ ಸೇವಾ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಹಾಗೂ ಮಾದರಿಯಾಗಿದೆ ಎಂದರು.
ತಾಲೂಕಿನ ಬೊಮ್ಮಾಘಟ್ಟ ಆರ್ಯವೈಶ್ಯ ಸಂಘದ ಅಧ್ಯಕ್ಷ ಎಸ್.ಟಿ. ಲಕ್ಷ್ಮೀಪತಿ, ಚೋರುನೂರು ವಾಸವಿ ಯುವಜನ ಸಂಘದ ಅಧ್ಯಕ್ಷ ಸತೀಶ್ಕುಮಾರ್, ವಾಸವಿ ಯುವಪಡೆಯ ಅಧ್ಯಕ್ಷ ಹರ್ಷ, ಸೋವೇನಹಳ್ಳಿಯ ಹುಲಿಕುಂಟರಾಜ್, ಪಟ್ಟಣದ ವಾಸವಿ ಫೌಂಡೇಶನ್ ಅಧ್ಯಕ್ಷ ಎ. ನಾಗರಾಜ, ಕಾರ್ಯಾಧ್ಯಕ್ಷ ವಿಷ್ಣುಕುಮಾರ್ ಆರ್.ವಿ., ಪದಾಧಿಕಾರಿಗಳಾದ ಕೆ.ವಿ. ಸತ್ಯನಾರಾಯಣ, ಕೆ.ವಿ. ರಾಜೇಶ್, ವಿಶ್ವವಿನೂತನ ಸೇವಾ ಸಂಸ್ಥೆಯ ಪದಾಧಿಕಾರಿಗಳಾದ ಪ್ರಹ್ಲಾದ್ ಶ್ರೇಷ್ಠಿ, ದತ್ತುರಾಜ್ ಆರ್.ವಿ., ಸವಿತಾ ರಾಣಿ, ವಾಸವಿ ಮಹಿಳಾ ಮಂಡಳಿಯ ಪದಾಧಿಕಾರಿಗಳಾದ ಕೋಮಲ, ಶೋಭಾ ಉಪಸ್ಥಿತರಿದ್ದರು.