ಕನ್ನಡಪ್ರಭ ವಾರ್ತೆ ಯಾದಗಿರಿ
ಬಿಜೆಪಿ ಜಿಲ್ಲಾಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೊಲೆ ಆರೋಪಿ ಫಯಾಜ್ ಗೆ ಗಲ್ಲುಶಿಕ್ಷೆ ವಿಧಿಸಬೇಕೆಂದು ಎಂದು ಆಗ್ರಹಿಸಿದರು. ಕೊಲೆ ಗಡುಕರಿಗೆ ರಕ್ಷಣೆ ನೀಡಲು ಮುಂದಾಗುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ, ನೇಹಾ ಕೊಲೆ ಖಂಡಿಸಿ ರಾಜ್ಯದಾದ್ಯಂತ ಇಂದು ಬಿಜೆಪಿ, ಎಲ್ಲ ಹಿಂದೂ ಸಂಘಟನೆಗಳ ಜೊತೆ ಸೇರಿ ಪ್ರತಿಭಟನೆ ನಡೆಸುತ್ತಿದೆ. ಲವ್ ಜಿಹಾದ್, ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ನಾವು ಹೋರಾಟ ಆರಂಭಿಸಿದ್ದೇವೆ ಎಂದು ಹೇಳಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ ಅವರ ಹೇಳಿಕೆ ಗಮನಿಸಿದರೆ, ಪ್ರಕರಣ ದಿಕ್ಕು ತಪ್ಪುವ ಸಾಧ್ಯತೆ ಕಂಡು ಬರುತ್ತಿದೆ. ನೇಹಾ ಅವರ ತಂದೆ ನಿರಂಜನಯ್ಯ ಹಿರೇಮಠ ಅವರು ನಮ್ಮ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಬಳಿಯೂ ಇದೇ ಸಂಶಯ ವ್ಯಕ್ತಪಡಿಸಿದ್ದಾರೆ. ರಾಜ್ಯ ಪೊಲೀಸರಿಂದ ನಿಷ್ಪಕ್ಷಪಾತ ತನಿಖೆ ನಡೆಸಲು ಸಾಧ್ಯವಿಲ್ಲ. ಆ ಕಾರಣದಿಂದ ರಾಜ್ಯ ಸರ್ಕಾರ ತಕ್ಷಣ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಯಾವ ಜನಾಂಗಕ್ಕೂ ಹಿಂಸೆ ನೀಡಿಲ್ಲ. ಆದರೆ, ಸಮಾಜ ಘಾತುಕ ಶಕ್ತಿಯನ್ನು ಎಂದಿಗೂ ಸುಮ್ಮನೆ ಬಿಡುವುದಿಲ್ಲ. ಮುಖ್ಯಮಂತ್ರಿ ಅವರೇ ಹಿಂದೂಗಳನ್ನು ಹಿಂಸಿಸುತ್ತಿದ್ದಾರೆ, ಬೇರೆ ಕೋಮಿನವರು ಕೊಲೆಯಾಗಿದ್ದರೆ ಮನೆಗೆ ತೆರಳಿ ಸಾಂತ್ವನ ಹೇಳುತ್ತಿದ್ದರು. ಹಿಂದೂ ಹುಡುಗಿ ಕೊಲೆಯಾಗಿದ್ದಕ್ಕೆ ಅವರು ಬಂದಿಲ್ಲ ಎಂದು ಆರೋಪಿಸಿದರು.
ಡಾ. ಶರಣಭೂಪಾಲರೆಡ್ಡಿ ನಾಯ್ಕಲ್, ವೆಂಕಟರಡ್ಡಿ ಅಬ್ಬೆತುಮಕೂರು, ಶರಣುಗೌಡ ಬಾಡಿಯಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ, ಪರುಶುರಾಮ ಕುರಕುಂದಿ, ಅಯ್ಯಣ್ಣ ಮಾಸ್ಟರ, ಸಿದ್ದಪ್ಪ ಹೊಟ್ಟಿ, ಬಸವರಾಜ ಚಂಡ್ರಕಿ, ನಗರಸಭೆ ಮಾಜಿ ಅಧ್ಯಕ್ಷ ವಿಲಾಸ ಪಾಟೀಲ್, ನಗರಸಭೆ ಸದಸ್ಯ ಹಣಮಂತ ಇಟ್ಟಗಿ, ಸ್ವಾಮಿದೇವ ದಾಸನಕೇರಿ, ಬಸವರಾಜ ಸಾಹು ಸೊನ್ನದ, ರವಿ ಬಾಪುರೆ, ಶಂಕರಪ್ಪಗೌಡ ಗೋನಾಲ, ಅಪ್ಪಣ್ಣ ಜೈನ, ಶಹಾಪುರ ಮಂಡಲ ಅಧ್ಯಕ್ಷ ದೇವಿಂದ್ರಪ್ಪ ಕೊನೇರ, ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ ಕಾಡಂನೊರ, ಮಂಜುನಾಥ ಜಡಿ, ಮಹಾದೇವಪ್ಪ ಗಣಪುರ, ದೇವಿಂದ್ರಪ್ಪ ಯರಳಗೋಳ, ರಮೇಶ ದೊಡಮನಿ, ಮಲ್ಲಿಕಾರ್ಜುನ ಕಟ್ಟಿಮನಿ, ಮೌನೇಶ ಬೆಳಿಗೇರಾ, ಶ್ರೀಧರ್ ರಾಯಚೂರು, ಮಲ್ಲು ಕೋಲಿವಾಡ, ಕೃಷ್ಣಾರಡ್ಡಿ ಬಬಲಾದಿ, ಮಹೇಶ ನಕ್ಕಲ ಇತರರಿದ್ದರು.