ಹಾವೇರಿ: ಚಿತ್ತಾಪುರ ತಾಲೂಕು ಮತ್ತಾ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಭಗ್ನಗೊಳಿಸಿರುವುದನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹಾವೇರಿ ಜಿಲ್ಲಾ ಅಂಬಿಗ, ಬೆಸ್ತರ ಸಂಘದ ಮುಖಂಡರು ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ವೇಳೆ ನಿಜಶರಣ ಅಂಬಿಗರ ಚೌಡಯ್ಯನವರ ಗಂಗಾಮತಸ್ಥರ ಸಂಘದ ಜಿಲ್ಲಾಧ್ಯಕ್ಷ ಪರಶುರಾಮ ಸೊನ್ನದ ಮಾತನಾಡಿ, ನಾಡಿಗೆ ಶ್ರೇಷ್ಠ ವಚನಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದ ಮಹಾನ್ ದಾರ್ಶನಿಕ ಹಾಗೂ 12ನೇ ಶತಮಾನದ ಬಸವಾದಿ ಶರಣರಲ್ಲಿ ನಿಜಶರಣ ಎಂಬ ಬಿರುದಾಂಕಿತ ಪಡೆದ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಚಿತ್ತಾಪುರ ತಾಲೂಕು ಮತ್ತಾ ಗ್ರಾಮದಲ್ಲಿ ಭಗ್ನಗೊಳಿಸಿರುವುದು ಅತ್ಯಂತ ಖಂಡನೀಯ. ಸಮಾಜದಲ್ಲಿರುವ ಅಂಕು ಡೊಂಕುಗಳನ್ನು ತಮ್ಮ ವಚನಗಳ ಮೂಲಕ ತಿದ್ದುವ ಕೆಲಸ ಮಾಡಿರುವ ದಾರ್ಶನಿಕರ ಮೂರ್ತಿಯನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದು, ರಾಜ್ಯದ ಗಂಗಾಮತ ಸಮಾಜ, ಕೋಲಿ ಸಮಾಜ, ವಿವಿಧ ಸಮಸ್ತ ಅಂಬಿಗ ಸಮಾಜಕ್ಕೆ ಮಾಡಿರುವ ಅಪಮಾನವಾಗಿದೆ. ಅಲ್ಲಿಯ ಜಿಲ್ಲಾಡಳಿತ ಹಾಗೂ ಸರ್ಕಾರ ಈ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಬರುವ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಮನವಿ ಸಲ್ಲಿಸುವ ವೇಳೆ ಜಿಲ್ಲಾ ಗೌರವಾಧ್ಯಕ್ಷ ಮಂಜುನಾಥ ಭೋವಿ, ಪ್ರಧಾನ ಕಾರ್ಯದರ್ಶಿ ಕೋಟ್ರೇಶಪ್ಪ ಕುದರಿಹಾಳ, ಉಪಾಧ್ಯಕ್ಷ ಶಂಕರ ಸುತಾರ, ಮಲ್ಲಪ್ಪ ನಿಂಬಕ್ಕನವರ, ಹೊನ್ನಪ್ಪ ತಿಮ್ಮೇನಹಳ್ಳಿ, ಕರಬಸಪ್ಪ ಹಳದೂರ, ಶೇಖಪ್ಪ ಬಾರಕೇರ, ಚಿತ್ರಶೇಖರ ತಿಮ್ಮೇನಹಳ್ಳಿ, ಮಾಲತೇಶ ಚಿಕ್ಕಣ್ಣನವರ, ಕೊಟ್ರೇಶ ಕೋಣತಂಬಿಗಿ, ಪರಮೇಶಪ್ಪ ತಿಮ್ಮೇನಹಳ್ಳಿ, ಮಂಜಪ್ಪ ಹುಬ್ಬಳ್ಳಿ, ಕರಬಸಪ್ಪ ನಿಟ್ಟೂರ, ಕೋಟೆಪ್ಪ ಗುಡಗೂರ, ಕೊಟ್ರೇಶ ಹಡಪದ, ಪರಶುರಾಮ ಕೆಂಗಾಪುರ ಸೇರಿದಂತೆ ಇತರರು ಇದ್ದರು.