ರೋಣ: ಪಂಚ ಗ್ಯಾರಂಟಿ ಯೋಜನೆಯಡಿಯಲ್ಲಿ ತಾಲೂಕಿನ ಯಾವುದೇ ವ್ಯಕ್ತಿ ಯೋಜನೆಯ ಲಾಭ ಪಡೆಯದೆ ಇದ್ದಲ್ಲಿ ಅಂತವರನ್ನು ಗುರುತಿಸಿ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಸರ್ವೇ ಕೈಗೊಂಡು ಸರ್ಕಾರದಿಂದ ಅನುಷ್ಠಾನಿತ ಪಂಚ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಮಿಥುನ ಪಾಟೀಲ ತಿಳಿಸಿದರು.ಪಟ್ಟಣದ ತಾಲೂಕು ಪಂಚಾಯತಿಯಲ್ಲಿ ಇರುವ ಗ್ಯಾರಂಟಿ ಕಾರ್ಯಾಲಯದಲ್ಲಿ ಜರುಗಿದ ರೋಣ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ನಡೆದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೋಣ ತಾಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 36857 ಅರ್ಜಿಗಳು ನೊಂದಣೆಯಾಗಿದ್ದು ಅದರಲ್ಲಿ 36183 ಮಂಜೂರಾತಿ ಆಗಿವೆ. ಅದರಲ್ಲಿ 674 ಮಂಜೂರಾತಿಗೆ ಬಾಕಿ ಉಳದಿವೆ. ಅವರನ್ನು ಗುರುತಿಸಿ ಅವರಿಗೆ ಗೃಹಲಕ್ಷ್ಮಿ ಗೆ ಸೇರಿಸಿ ಶೇ 98.17 ಪ್ರಗತಿ ಸಾಧಿಸಿದೆ. ಮುಖ್ಯವಾಗಿ 171 ಗೃಹಲಕ್ಷೀ ಯೋಜನೆಯ ಫಲಾನುಭವಿಗಳು ಮರಣ ಹೊಂದಿದ್ದು ಸಂಬಂಧಿಸಿದ ಅಂಗನವಾಡಿ ಕಾರ್ಯಕರ್ತೆಯರು ಮರಣ ಪತ್ರ ತೆಗೆದುಕೊಂಡು ಅವರ ಹೆಸರನ್ನು ಕಡಿಮೆ ಮಾಡಲು ತಿಳಿಸಿದರು.
ಗೃಹಜ್ಯೋತಿ ಯೋಜನೆಯಡಿ ರೋಣ ಉಪವಿಭಾಗದಲ್ಲಿ ಒಟ್ಟು ಸಂಪರ್ಕ ಇದ್ದ ಸಂಖ್ಯೆ 43272 ಸ್ಥಾವರಗಳು ಅದರಲ್ಲಿ 22268 ಫಲಾನುಭವಿಗಳು ಯೋಜನೆ ಲಾಭ ಪಡೆದಿದ್ದು 1380 ಯೋಜನೆಯ ಲಾಭ ಪಡೆದಿಲ್ಲಾ ಇದನ್ನು ಕೂಡಾ ಸರ್ವೇ ಮಾಡಿ ಎಂದರು.ಯುವನಿಧಿ ಯೋಜನೆಯಡಿ ರೋಣ ತಾಲೂಕಿನಲ್ಲಿ 753 ಫಲಾನುಭವಿಗಳ ನೋಂದಣಿಯಾಗಿದ್ದು 448 ಅರ್ಹ ಫಲಾನುಭವಿಗಳಿಗೆ ಡಿಬಿಟಿ ಮೂಲಕ 13,30,500 ರು. ವರ್ಗಾವಣೆಯಾಗಿರುತ್ತದೆ ಎಂದು ಸಂಬಂಧಿಸಿದ ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ, ಗ್ಯಾರಂಟಿ ಸಮಿತಿಯ ಸದಸ್ಯರು, ಅಧಿಕಾರಿಗಳು ಸೇರಿದಂತೆ ತಾಪಂ ಸಿಬ್ಬಂದಿಗಳು ಹಾಜರಿದ್ದರು.