ಡಿಪೋ ಮ್ಯಾನೇಜರ್ ಹಾಗೂ ಮ್ಯಾಕನಿಕ್ ಮುಖ್ಯಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕೆ.ಎಸ್.ಆರ್.ಟಿ.ಸಿ. ನಿರ್ವಾಹಕನ ಸಾವಿಗೆ ಕಾರಣವಾಗಿರುವ ಡಿಪೋ ಮ್ಯಾನೇಜರ್ ಹಾಗೂ ಮ್ಯಾಕಾನಿಕ್ ಮುಖ್ಯಸ್ಥರ ಅಮಾನತ್ತಿಗೆ ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಮುಖಂಡರು ಬುಧವಾರ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟದ ಮುಖಂಡ ದಂಟರಮಕ್ಕಿ ಶ್ರೀನಿವಾಸ್ , ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿ ನಿರ್ಲಕ್ಷ್ಯದಿಂದ ನಿರ್ವಾಹಕನ ಸಾವು ಸಂಭವಿಸಿದೆ. ಇದರಿಂದ ಆತನ ಕುಟುಂಬ ಅನಾಥವಾಗಿದೆ. ಈ ಸಾವಿಗೆ ಕಾರಣರಾದ ಡಿಪೋ ಮ್ಯಾನೇಜರ್ ಬೇಬಿಬಾಯಿ ಮತ್ತು ಮ್ಯಾಕಾನಿಕ್ ಮುಖ್ಯಸ್ಥ ಪರಮೇಶ್ವರಪ್ಪ ಅವರನ್ನು ಕೂಡಲೇ ಅಮಾನತ್ತು ಪಡಿಸಬೇಕು ಎಂದರು.ಕಳೆದ 18 ವರ್ಷಗಳಿಂದ ಕೆ.ಎಸ್.ಆರ್.ಟಿ.ಸಿ.ಯಲ್ಲಿ ಲಂಚ ನೀಡಿ, ಲಂಚದಿಂದಲೇ ಕಾರ್ಯನಿರ್ವಹಿಸುತ್ತಿರುವ ಭ್ರಷ್ಟ ಅಧಿಕಾರಿ ಗಳನ್ನು ಜಿಲ್ಲೆಯಿಂದ ವರ್ಗಾಯಿಸಬೇಕೆಂದು ಅನೇಕ ಹೋರಾಟ ಮುಖಾಂತರ ಕೆ.ಎಸ್.ಆರ್.ಟಿ.ಸಿ ಡಿಸಿಗೆ ಮನವಿ ಮಾಡಿದರೂ ಯಾವುದೇ ಕ್ರಮ ವಹಿಸದೇ ಬೇಜವಾಬ್ದಾರಿತನ ತೋರಿದ್ದಾರೆ ಎಂದು ದೂರಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪವೆಸಗಿರುವ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಸಾರಿಗೆ ಇಲಾಖೆಗೆ ಎಚ್ಚರಿಸಿ ದರೂ ನಿರ್ಲಕ್ಷ್ಯ ಧೋರಣೆ ತೋರಿದ್ದಾರೆ ಎಂದ ಅವರು, ಮುಂದೆ ಇನ್ನಷ್ಟು ಚಾಲಕ, ಕಂಡಕ್ಟರ್ ಹಾಗೂ ದುಡಿಯುವ ಕೆಳ ನೌಕರರನ್ನು ಬಲಿ ಪಡೆಯಲಿದೆ ಎಂಬ ಆತಂಕ ಎದುರಾಗಿದೆ ಎಂದರು.ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ಮಾತನಾಡಿ, ಅಮಾಯಕ ಕೆಎಸ್ಆರ್ಟಿಸಿ ನಿರ್ವಾಹಕ ಶ್ರೀನಾಥ್ ಸಾವಿನಿಂದ ಆತನ ಕುಟುಂಬ ಕಂಗಾಲಾಗಿದೆ. ಕೆಎಸ್ಆರ್ಟಿಸಿ ವ್ಯವಸ್ಥಾಪಕ ಹಾಗೂ ಮ್ಯಾಕನಿಕ್ ಮುಖ್ಯಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಭೀಮ್ ಆರ್ಮಿ ಜಿಲ್ಲಾ ಗೌರವಾಧ್ಯಕ್ಷ ಹೊನ್ನೇಶ್, ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ, ಜಯ ಕರ್ನಾಟಕದ ಸುನೀಲ್ ಕುಮಾರ್, ಎಸ್ಸಿ.ಎಸ್ಟಿ. ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷ್ಮಣ್, ಮುಖಂಡರುಗಳಾದ ಚಂದ್ರು, ಹರೀಶ್ ಮಿತ್ರಾ, ರಘು, ಜಂಶಿದ್ಖಾನ್, ಕೂದುವಳ್ಳಿ ಮಂಜು ಇದ್ದರು.ಪೋಟೋ ಫೈಲ್ ನೇಮ್ 4 ಕೆಸಿಕೆಎಂ 4ಕಂಡಕ್ಟರ್ ಸಾವಿಗೆ ಕಾರಣವಾಗಿರುವ ಡಿಪೋ ಮ್ಯಾನೇಜರ್ ಹಾಗೂ ಮ್ಯಾಕನಿಕ್ ಮುಖ್ಯಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದಸಂಸ ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಬುಧವಾರ ಚಿಕ್ಕಮಗಳೂರಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.