ಸಿಎಂ ಸಿದ್ದರಾಮಯ್ಯಗೆ ಅವಹೇಳನ: ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಪ್ರತಿಭಟನೆ, ಆಕ್ರೋಶ
ಕನ್ನಡಪ್ರಭ ವಾರ್ತೆ ಗಂಗಾವತಿ
ಶಾಸಕ ಗಾಲಿ ಜನಾರ್ದನ ರೆಡ್ಡಿ ಸಿದ್ದರಾಮಯ್ಯ ಅವರಿಗೆ ನಾಲಾಯಕ್ ಮುಖ್ಯಮಂತ್ರಿ ಎಂದಿದ್ದನ್ನು ಖಂಡಿಸಿ ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಕಾಂಗ್ರೆಸ್ ಗುಂಪುಗಾರಿಕೆ ಬಹಿರಂಗವಾಗಿದ್ದು, ಎರಡೂ ಗುಂಪುಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು. ರೆಡ್ಡಿ ವಿರುದ್ಧ ಕೈ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನನ್ನ ಕಾಂಗ್ರೆಸ್ ಬೆಂಬಲಿಗರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಎಂಬ ಆಡಿಯೋ ಬಿಡುಗಡೆ ಮಾಡಿದ್ದ ಹಿನ್ನೆಲೆ ಅನ್ಸಾರಿ ಬೆಂಬಲಿಗರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು. ಇನ್ನೊಂದು ಕಾಂಗ್ರೆಸ್ ಗುಂಪಿನ ಶ್ಯಾಮೀದ್ ಮನಿಯಾರ್ ಬೆಂಬಲಿಗರು ಸಹ ಪ್ರತಿಭಟನೆ ನಡೆಸಿದರು.
ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಫಕೀರಪ್ಪ ಎಮ್ಮಿ, ವಿಶ್ವನಾಥ ಮಾಲೀಪಾಟೀಲ್ ಕೇಸರಹಟ್ಟಿ, ನಗರಸಭಾ ಸದಸ್ಯ ಮನೋಹರಸ್ವಾಮಿ, ಎಫ್. ರಾಘವೇಂದ್ರ, ಜುಬೇರಾ, ಇಲಿಯಾಸ್ ಖಾದ್ರಿ, ಸನಿಕ್ ಅಹ್ಮದ್, ಎಪಿಎಂಸಿ ಮಾಜಿ ಅಧ್ಯಕ್ಷ ಸಣ್ಣಕ್ಕಿ ನೀಲಪ್ಪ, ಕಂಪ್ಲಿ ಬಾಬಾ, ಶಿವು ಚಲುವಾದಿ, ರವಿ, ಆನಂದ, ನಾಗರಾಜ್ ಕೋತ್ವಾಲ್, ನವಲಿ ಯಮನಪ್ಪ ಹುಸೇನಪ್ಪ ಹಂಚಿನಾಳ, ವೆಂಕಟೇಶ ಬಾಬು ಸೇರಿದಂತೆ ಇತರರು ಭಾಗವಹಿಸಿದ್ದರು.