ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಕೈ- ಕಮಲ ಹಣಾಹಣಿ

KannadaprabhaNewsNetwork | Published : May 19, 2024 1:46 AM

ಸಾರಾಂಶ

ಕಾಂಗ್ರೆಸ್‌ ಈ ಬಾರಿ ಮತ್ತೆ ಡಾ. ಚಂದ್ರಶೇಖರ ಪಾಟೀಲರಿಗೆ ಮಣೆ ಹಾಕಿ ಕಣಕ್ಕಿಳಿಸಿದೆ. ಪುನರಾಯ್ಕೆ ಬಯಸಿರುವ ಡಾ. ಚಂದ್ರಶೇಖರ ಪಾಟೀಲ್‌ ಎರಡನೇ ಬಾರಿಗೆ ಪದವೀಧರರ ಬೆಂಬಲ ಪಡೆಯಲು ಮುಂದಾಗಿದ್ದಾರೆ.

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಲೋಕಸಭೆ ಸಮರದ ಬೆನ್ನಲ್ಲೇ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಶಾನ್ಯ ಪದವೀಧರ ಮತಕ್ಷೇತ್ರವನ್ನು ಪರಿಷತ್‌ನಲ್ಲಿ ಪ್ರತಿನಿಧಿಸುವ ಸಲುವಾಗಿ ಪ್ರಮುಖ ರಾಷ್ಟ್ರೀಯ ಪಕ್ಷಗಳಲ್ಲಿ ಸೆಣಸಾಟ ಶುರುವಾಗಿದೆ.

ಜೂ.3ರಂದು ಮತದಾನ ನಿಗದಿಯಾಗಿರುವ ಈಶಾನ್ಯ ಪದವೀಧರ ರಣಕಣದಲ್ಲೀಗ ಕಾಂಗ್ರೆಸ್‌- ಬಿಜೆಪಿ ನೇರ ಹಣಾಹಣಿ ನಡೆಯಲಿದೆ.

ಏತನ್ಮಧ್ಯೆ ಇಲ್ಲಿ ಬಿಜೆಪಿಗೆ ಎದುರಾಗಿದ್ದ ಬಂಡಾಯ ಕರಗಿ ಹೋಗಿದೆ. ಬಿಜೆಪಿಯಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷರು, ಬಿಜೆಪಿ ಮುಖಂಡ ಸುರೇಶ ಸಜ್ಜನ್‌ ತಮಗೆ ಟಿಕೆಟ್‌ ಕೈ ತಪ್ಪಿದ್ದರಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರಾದರೂ ಮಾಜಿ ಸಿಎಂ ಯಡಿಯೂರಪ್ಪನವರಿಗೆ ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ನಾಮಪತ್ರ ವಾಪಸ್‌ಗೆ ನಿರ್ಧರಿಸಿದ್ದಾರೆ.

ಕಾಂಗ್ರೆಸ್‌ ಈ ಬಾರಿ ಮತ್ತೆ ಡಾ. ಚಂದ್ರಶೇಖರ ಪಾಟೀಲರಿಗೆ ಮಣೆ ಹಾಕಿ ಕಣಕ್ಕಿಳಿಸಿದೆ. ಪುನರಾಯ್ಕೆ ಬಯಸಿರುವ ಡಾ. ಚಂದ್ರಶೇಖರ ಪಾಟೀಲ್‌ ಎರಡನೇ ಬಾರಿಗೆ ಪದವೀಧರರ ಬೆಂಬಲ ಪಡೆಯಲು ಮುಂದಾಗಿದ್ದಾರೆ.

2018ರಲ್ಲಿ ನಡೆದ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದ ಡಾ. ಚಂದ್ರಶೇಖರ ಪಾಟೀಲ್‌, ಮೊದಲ ಬಾರಿಗೆ ಬಿಜೆಪಿಯಿಂದ ಈಶಾನ್ಯ ಕ್ಷೇತ್ರವನ್ನ ಕೈವಶ ಮಾಡಿಕೊಂಡಿದ್ದರು.

ಕಳೆದ 6 ವರ್ಷದ ಅವಧಿಯಲ್ಲಿ ಡಾ. ಪಾಟೀಲರು ಬೀದರ್‌ಗೆ ಮಾತ್ರ ತಮ್ಮನ್ನುಸೀಮಿತ ಮಾಡಿಕೊಂಡರು, ಬೀದರ್‌ ಹೊರಗಿರುವ ಈಶಾನ್ಯದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಸಂಚರಿಸಿ ಪದವೀಧರರ ಸಮಸ್ಯೆಗಳಿಗೆ, ಇಲ್ಲಿನ ಜ್ವಂಲತ ಸಮಸ್ಯೆಗಳಿಗೆ ಸ್ಪಂದಿಸುವ, ಪರಿಹಾರ ಕಂಡುಕೊಳ್ಳುವ ಕೆಲಸ ನಿರೀಕ್ಷೆಯಂತೆ ಮಾಡಲಿಲ್ಲವೆಂಬ ಆರೋಪ ಇವರ ಮೇಲಿದೆ.

ಆದಾಗ್ಯೂ ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿ, ಅದರಲ್ಲೂ ಪದವೀಧರ ಯುವಕರಿಗೆ ನೀಡಿರುವ ಯುವನಿಧಿಯಂತಹ ಯೋಜನೆಗಳೇ ತಮ್ಮ ಗೆಲುವಿಗೆ ಈ ಬಾರಿ ಶ್ರೀರಕ್ಷೆಯಾಗಲಿವೆ ಎಂದು ಡಾ. ಪಾಟೀಲ್‌ ಈಶಾನ್ಯ ಪದವೀಧರ ಮತಕ್ಷೇತ್ರ ಕೈ ಬಿಟ್ಟು ಹೋಗದಂತೆ ಗಟ್ಟಿಯಾಗಿ ಹಿಡಿದುಕೊಳ್ಳುವ ಹುಮ್ಮಸ್ಸಲಿದ್ದಾರೆ.

ಬಿಜೆಪಿಯಿಂದ ಅಮರನಾಥ ಪಾಟೀಲರಿಗೆ ಮತ್ತೆ ಮಣೆ: ಬಿಜೆಪಿ ಈ ಬಾರಿ 2012ರಲ್ಲಿ ಗೆದ್ದು ಈ ಕ್ಷೇತ್ರವನ್ನೊಮ್ಮೆ ಪ್ರತಿನಿಧಿಸಿದ್ದ ಅಮರನಾಥ ಪಾಟೀಲರಿಗೆ ಮತ್ತೊಮ್ಮೆ ಮಣೆ ಹಾಕಿ ಕೈಬಿಟ್ಟು ಹೋಗಿರುವ ಈಶಾನ್ಯ ಮತಕ್ಷೇತ್ರದ ಪದವೀಧರರ ವಿಶ್ವಾಸ ಗಳಿಸಲು ರಣತಂತ್ರ ರೂಪಿಸಿದೆ.

2012ರಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದಿದ್ದ ಅಮರನಾಥ ಪಾಟೀಲರಿಗೆ 2018ರಲ್ಲಿ ಪಕ್ಷ ಟಿಕೆಟ್ ನೀಡಿರಲಿಲ್ಲ. ಇವರ ಸ್ಥಾನದಲ್ಲಿ ಬಳ್ಳಾರಿಯವರೊಬ್ಬರಿಗೆ ಟಿಕೆಟ್‌ ನೀಡಿ ಕಣಕ್ಕಿಳಿಸಿತ್ತಾದರೂ ಗೆಲ್ಲಲಾಗದೆ ಕೈ ಚೆಲ್ಲಿದ್ದು ಇತಿಹಾಸ.

2018ರಲ್ಲಿ ತಮಗೆ ಟಿಕೆಟ್‌ ಕೈ ತಪ್ಪಿದರೂ ಕೂಡಾ ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಿ ಪಕ್ಷ ನೀಡಿದ ಕೆಲಸಗಳನ್ನು ಮಾಡುತ್ತ ಗಮನ ಸೆಳೆದಿದ್ದ ಅಮರನಾಥ ಪಾಟೀಲರಿಗೆ ಪಕ್ಷ ಮತ್ತೊಮ್ಮೆ ಅವಕಾಶ ನೀಡುವ ಮೂಲಕ ಕೈ ವಿರುದ್ಧ ಸೆಡ್ಡು ಹೊಡೆದಿದೆ. ಅವಕಾಶ ಸಿಕ್ಕಾಗ ಕ್ಷೇತ್ರಾದ್ಯಂತ ಸಂಚರಿಸಿ ಕ್ರಿಯಾಶೀಲರಾಗಿದ್ದ ಅಮರನಾಥ ಪಾಟೀಲ್‌ ಪದವೀಧರರಿಗೆ ಸಂಪರ್ಕದಲ್ಲಿದ್ದವರು. ಇವರ ಈ ಕ್ರಿಯಾಶೀಲತೆ, ಕೇಂದ್ರದಲ್ಲಿನ ಬಿಜೆಪಿ ಸರಕಾರದ ಯುವಕರ ಪರವಾದಂತಹ ಯೋಜನೆಗಳು ಇವೆಲ್ಲವೂ ಈಶಾನ್ಯದಲ್ಲಿ ಈ ಬಾರಿ ಕಮಲ ಅರಳಿಸಲು ಪೂರಕ ಸಂಗತಿಗಳಾಗಿ ನಿಲ್ಲೋದು ನಿಶ್ಚಿತ ಎಂಬ ಲೆಕ್ಕಾಚಾರ ಬಿಜೆಪಿ ವರಿಷ್ಠರದ್ದಾಗಿದೆ.

ಹೆಚ್ಚಿದ ಮತದಾರರ ಸಂಖ್ಯೆ: ಕಾಡುತ್ತಿರುವ ಸಮಸ್ಯೆಗಳೆಲ್ಲದಕ್ಕೂ ಪರಿಹಾರ ಸಿಗುತ್ತದೆಂಬ ಭರವಸೆ ಪದವೀಧರರಿಗಿಲ್ಲವಾದರೂ ಜ್ವಲಂತ ಹಾಗೂ ಹೆಚ್ಚು ಜನರಿಗೆ ಬಾಧಿಸುತ್ತಿರುವ ಸಮಸ್ಯೆಗಳಿಗಾದರೂ ಗೆದ್ದವರು ಸದನದ ಒಳಗೆ ಹೊರಗೆ ಧ್ವನಿ ಎತ್ತಬೇಕು, ಅಂತಹವರಿಗೆ ನಾವು ಗೆಲ್ಲಿಸುತ್ತೇವೆಂದು ಪದವೀಧರರು ಸಜ್ಜಾಗಿದ್ದಾರೆ.

ಈಶಾನ್ಯ ಪದವೀಧರ ಮತಕ್ಷೇತ್ರದಲ್ಲಿ ಸಧ್ಯ 1,50,184ರಷ್ಟು ಪದವೀಧರ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. ಕಲಬುರಗಿ- 37, 267, ಬೀದರ್‌- 25,991, ಬಳ್ಳಾರಿ- 22,156, ಕೊಪ್ಪಳ- 13,405, ರಾಯಚೂರು- 19,716, ವಿಜಯನಗರ- 16,999 ಹಾಗೂ ಯಾದಗಿರಿ- 14,650 ಸೇರಿದಂತೆ ಈಶಾನ್ಯ ವಲಯದಲ್ಲಿ ಒಟ್ಟು 1,50,184 ಮತದಾರರಿದ್ದಾರೆ. ಈಶಾನ್ಯ ಸಪ್ತ ಜಿಲ್ಲೆಗಳಲ್ಲಿ ಕಲಬುರಗಿಯಲ್ಲೇ ಅತೀ ಹೆಚ್ಚಿನ ಮತದಾರರಿದ್ದು ಈ ಬಾರಿ ವಿದ್ಯಾವಂತ ಮತದಾರರೆಲ್ಲರ ಒಲವು ಯಾವಕಡೆ ಅನ್ನೋದೇ ಜನತೆ ಕುತೂಹಲದಿಂದ ಗಮನಿಸುತ್ತಿದ್ದಾರೆ.

ಪದವೀಧರರ ಸಮಸ್ಯೆಗಳು ನೂರಾರು- ಸ್ಪಂದಿಸುವರೆ ಗೆದ್ದವರು?:

ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್‌, ರಾಯಚೂರು, ಕೊಪ್ಪಳ, ಬಳ್ಳಾರಿ, ಯಾದಗಿರಿ ಹಾಗೂ ವಿಜಯನಗರ ಸೇರಿದಂತೆ 7 ಜಿಲ್ಲೆಗಳ ವಿಶಾಲ ವ್ಯಾಪ್ತಿಯ ಈಶಾನ್ಯ ಪದವೀಧರ ಮತಕ್ಷೇತ್ರದಲಲ್ಲಿ ಪದವೀಧರರು ಸಮಸ್ಯೆಗಳನ್ನೇ ಹಾಸಿ ಹೊದ್ದು ಮಲಗಿದ್ದಾರೆ.

ಕಲ್ಯಾಣ ನಾಡಿಗೆ ಕಲಂ 371 (ಜೆ) ಅನ್ವಯವಾಗಿ ದಶಕ ಕಳೆದರೂ ಉದ್ಯೋಗ, ಶಿಕ್ಷಣ, ಅಭಿವೃದ್ಧಿ ಅನುದಾನದ ವಿಚಾರದಲ್ಲಿ ಈ ಕಲಂ ಅನ್ವಯ ಯಾವುದೂ ಕೆಲಸವಾಗುತ್ತಿಲ್ಲ. ಅನುಷ್ಠಾನದಲ್ಲಿ ಸಾಕಶ್ಟು ಸಮಸ್ಯೆಗಳಿರುವ ಈ ವಿಚಾರದಲ್ಲಿ ಪದವೀಧರರು ತೊಂದರೆ ಅನುಭವಿಸುತ್ತಿದ್ದಾರೆ.

ಖಾಲಿ, ಬ್ಯಾಕ್‌ ಲಾಗ್‌ ಭರ್ತಿ, ಶಿಕ್ಷಕರ ಕೊರತೆ ನೀಗಿಸುವುದು, ವೇತನ ತಾರತಮ್ಯ ನಿವಾರಣೆ, ಹಳ ಪಿಂಚಣಿ ಯೋಜನೆ ಜಾರಿ ಮಾಡುವ ಬೇಡಿಕೆ, ಪದವೀಧರರಿಗೆ ನಿರುದ್ಯೋಗ ಭತ್ಯೆ ಜಾರಿಗೊಳಿಸುವುದು, ವಿವಿ ಖಾಲಿ ಶಿಕ್ಷಕರ ಹುದ್ದೆ ಭರ್ತಿಯಂತಹ ಜ್ವಂಲತ ಸಮಸ್ಯೆಗಳಿಗೆ ಸ್ಪಂದಿಸುವವರೇ ಇಲ್ಲದಂತಾಗಿದೆ. ಪದವೀಧರರೆಂದರೆ ವಿದ್ಯಾವಂತ ಮತದಾರರು, ಇವರನ್ನೇ ತಿಕ್ಕಿಮುಕ್ಕುತ್ತಿರುವ ನೂರಾರು ಸಮಸ್ಯೆಗಳಿಗೆ ಈ ಕ್ಷೇತ್ರದಿಂದ ಗೆದ್ದವರು ಸ್ಪಂದಿಸುವರೆ? ಎಂಬುದೇ ಈಗಿನ ಪ್ರಶ್ನೆಯಾಗಿದೆ.

ಕಾಂಗ್ರೆಸ್‌- ಬಿಜೆಪಿ ನೇರ ಹಣಾಹಣಿ:

ಸದ್ಯಕ್ಕಂತೂ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಹಣಾಹಣಿ ಕಂಡಿದೆ. ಜೆಡಿಎಸ್‌ ದೋಸ್ತಿ ಈ ಕಣದಲ್ಲಿಯೂ ಮುಂದುವರಿದಿರೋದು ಬಿಜೆಪಿಗೆ ತುಸು ಅನುಕೂಲವಾಗಲಿದೆ. ಕ್ಷೇತ್ರ ರಚನೆಯಾದಾಗಿನಿಂದ ಡಾ. ಎಂ.ಆರ್. ತಂಗಾ ಅವರೇ ಸತತ 3 ಬಾರಿ ಈ ಕ್ಷೇತ್ರವನ್ನ ಪರಿಷತ್‌ನಲ್ಲಿ ಪ್ರತಿನಿಧಿಸಿ ಸೈ ಎನ್ನಿಸಿಕೊಂಡಿದ್ದರು. ನಂತರದಲ್ಲಿ ಮನೋಹರ ಮಸ್ಕಿ ಇಲ್ಲಿಂದ ಮೇಲ್ಮನೆಗೆ ಪ್ರವೇಶಿಸಿದ್ದರು. ಇದಾದ ನಂತರ ಅಮರನಾಥ ಪಾಟೀಲ್‌ 2012ರಲ್ಲಿ ಗೆದ್ದು ಬೀಗಿದ್ದರು. ನಂತರ 2018ರಲ್ಲಿ ಬಿಜೆಪಿ ಈ ಕ್ಷೇತ್ರ ಬೀದರ್‌ ಮೂಲದ ಡಾ. ಚಂದ್ರಶೇಖರ ಅವರಿಗೆ ಒಲಿದಿತ್ತು. 2014ರಲ್ಲಿ ಮತ್ತೆ ಹಣಾಹಣಿ ಜೋರಾಗಿ ಕಂಡು ಬಂದಿದೆ. ಬೀದರ್‌ನ ಚಂದ್ರಶೇಖರ ಪಾಟೀಲ್‌ ಪುನರಾಯ್ಕೆ ಬಯಸಿ ಕಣದಲ್ಲಿದ್ದರೆ, ಬಿಜೆಪಿಯ ಅಮರನಾಥ ಪಾಟೀಲ್‌ ಕೈತಪ್ಪಿರೋ ಕ್ಷೇತ್ರ ಮರುವಶಕ್ಕೆ ಮುಂದಾಗಿದ್ದಾರೆ.

Share this article