ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದ ನಿವಾಸದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ವಿಶ್ರಾಂತಿಯ ಮೂಡ್ನಲ್ಲಿದ್ದರು.
- ಹೇರ್ ಡೈ ಮಾಡಿಸಿಕೊಂಡು, ವಿಶ್ರಾಂತಿ
- ಕೊಪ್ಪಳದಲ್ಲಿ ಕಾರ್ಯಕರ್ತರೊಂದಿಗೆ ಏನಾಗಬಹುದು ಎಂದು ಲೆಕ್ಕಾಚಾರ
- ಗೆಲ್ಲುವುದು ಪಕ್ಕಾ, ಈಗೇನಿದ್ದರೂ ಅಂತರದ ಲೆಕ್ಕಚಾರ: ರಾಜಶೇಖರ ಹಿಟ್ನಾಳಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳ
ಮತದಾನ ದಿನ ತಡರಾತ್ರಿಯವರೆಗೂ ಲೆಕ್ಕಾಚಾರ ಮತ್ತು ನಂತರ ಕುಟುಂಬದವರೊಂದಿಗೆ ಮಾತುಕತೆ, ಮಕ್ಕಳೊಂದಿಗೆ ಆಟವಾಡಿ, ತಡರಾತ್ರಿಯಾದ ಮೇಲೆ ಮಲಗಿದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಬುಧವಾರ ಬೆಳಗ್ಗೆ ಎದ್ದಿದ್ದು 8.30ಕ್ಕೆ.
ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದ ನಿವಾಸದಲ್ಲಿಯೇ ವಿಶ್ರಾಂತಿಯ ಮೂಡ್ನಲ್ಲಿದ್ದರು. ತಡವಾಗಿ ಎದ್ದ ರಾಜಶೇಖರ ಹಿಟ್ನಾಳ ಬಿಡುವಿಲ್ಲದ ಓಡಾಟದಿಂದಾಗಿ ತಲೆಗೆ ಹೇರ್ ಡೈ (ಕೂದಲಿಗೆ ಬಣ್ಣ) ಹಾಕಲು ಸಮಯ ಸಿಕ್ಕಿರಲಿಲ್ಲ. ಹೀಗಾಗಿ ಬೆಳಗ್ಗೆ ಎದ್ದ ತಕ್ಷಣ ಹೇರ್ ಡೈ ಹಾಕಿಕೊಂಡರು.
ಆದರೆ, ಈ ವೇಳೆಗಾಗಲೇ ಬಂದಿದ್ದ ಕಾಲ್ಗಳನ್ನು ಅಟೆಂಡ್ ಮಾಡಿ, ಶ್ರಮಿಸಿದವರಿಗೆ ಧನ್ಯವಾದ ಹೇಳುತ್ತಿದ್ದರು. ಅನೇಕರು ಮನೆಯತ್ತ ಧಾವಿಸಲು ಪ್ರಾರಂಭಿಸಿದ್ದರಿಂದ ಬೆಳಗ್ಗೆ 10 ಗಂಟೆಯ ವೇಳೆಗೆ ಸ್ನಾನ, ಉಪಾಹಾರ ಮುಗಿಸಿಕೊಂಡು 12 ಗಂಟೆಗೆ ಸರಿಯಾಗಿ ಕೊಪ್ಪಳದ ವೈಟ್ ಹೌಸ್ (ಕಾಂಗ್ರೆಸ್ ಕಾರ್ಯಾಲಯ)ಗೆ ಆಗಮಿಸಿದರು. ಅಲ್ಲಿ ಮಾಧ್ಯಮದವರು ಸೇರಿದಂತೆ ಬಂದಿದ್ದ ಕಾರ್ಯಕರ್ತರೊಂದಿಗೆ ಚರ್ಚೆ ಮಾಡುತ್ತ ಚಹಾ ಹೀರಿದರು.
ಗೆಲುವು ಪಕ್ಕಾ:
ಲೀಡ್ ಇಷ್ಟೇ ಎಂದು ಹೇಳುವುದಕ್ಕಿಂತ ಗೆಲ್ಲುವುದು ಪಕ್ಕಾ. ಈಗಿರುವ ಲೆಕ್ಕಚಾರದ ಪ್ರಕಾರ 90 ಸಾವಿರದಿಂದ 1 ಲಕ್ಷ ಮತಗಳ ಅಂತರದಿಂದ ಗೆಲ್ಲುವುದಾಗಿ ರಾಜಶೇಖರ ಹಿಟ್ನಾಳ ವಿಶ್ವಾಸದಿಂದಲೇ ಹೇಳಿದರು.
ಸಿಂಧನೂರಿನಲ್ಲಿ ನಮಗೆ ಹಿನ್ನಡೆಯಾಗುತ್ತದೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಈ ಬಾರಿ ನಮಗೆ ಲೀಡ್ ಆಗಿಯೇ ಆಗುತ್ತದೆ ಎನ್ನುವ ವಿಶ್ವಾಸವಿದೆ. ಅಲ್ಲಿ ಹಾಗೆ ಕಾರ್ಯಾಚರಣೆ ಮಾಡಿದ್ದಾರೆ ನಮ್ಮ ನಾಯಕರು. ಮಸ್ಕಿ, ಸಿರಗುಪ್ಪಾ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿಯೂ ಹಿನ್ನಡೆಯಾಗುವ ಪ್ರಶ್ನೆಯೇ ಇಲ್ಲ. 1 ಲಕ್ಷ ಮತಗಳ ಅಂತರದಿಂದ ಗೆಲುವು ಗ್ಯಾರಂಟಿ ಎಂದಿದ್ದಾರೆ.
ನಾಲ್ಕಾರು ಗಂಟೆ ನಿದ್ರೆ:
ಚುನಾವಣೆಯ ವೇಳೆಯಲ್ಲಿ ನಿತ್ಯ ನಾಲ್ಕಾರು ಗಂಟೆ ನಿದ್ರೆ ಮಾಡಲು ಸಾಧ್ಯವಾಗಿಲ್ಲ. ಬೆಳಗ್ಗೆ ಬೇಗ ಎದ್ದು ಪ್ರಚಾರ ಕಾರ್ಯಕ್ಕೆ ಹೊರಡುವುದೇ ಆಗಿತ್ತು. ಈಗ ಒಂದಿಷ್ಟು ನಿಟ್ಟುಸಿರು ಬಿಟ್ಟಿದ್ದೇವೆ ಎಂದು ಚುನಾವಣೆ ಸಮಯದಲ್ಲಿನ ಓಡಾಟ ನೆನಪಿಸಿಕೊಂಡರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.