ರಾಹುಲ್ ಯಾತ್ರೆಗೆ ಅಸ್ಸಾಂನಲ್ಲಿ ಅಡ್ಡಿ ಖಂಡಿಸಿ ಧರಣಿ

KannadaprabhaNewsNetwork |  
Published : Jan 25, 2024, 02:00 AM IST
23ಕೆಡಿವಿಜಿ6-ಅಸ್ಸಾಂನಲ್ಲಿ ರಾಹುಲ್ ಗಾಂಧಿ ಯಾತ್ರೆಗೆ ಬಿಜೆಪಿ ಅಡ್ಡಿಪಡಿಸುತ್ತಿರುವುದನ್ನು ಖಂಡಿಸಿ ದಾವಣಗೆರೆಯಲ್ಲಿ ಕಾಂಗ್ರೆಸ್ ಪ್ರತಿಭಟಿಸಿತು. | Kannada Prabha

ಸಾರಾಂಶ

ಬಿಜೆಪಿಯವರು ತಮಗಷ್ಟೇ ಭಕ್ತಿ ಇದೆ, ಹಿಂದೂ ದೇವರುಗಳು ತನಗಷ್ಟೇ ಎಂಬ ಗ್ರಹಿಕೆಯಿಂದ ಹೊರಬರಲಿ. ಕೋಮುವಾದ, ಜಾತೀವಾದದ ರಾಜಕಾರಣವನ್ನು ಬಿಜೆಪಿ ಕೈಬಿಡಲಿ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಭಾರತ್ ಜೋಡೋ ನ್ಯಾಯ ಯಾತ್ರೆ ಕೈಗೊಂಡಿರುವ ಎಐಸಿಸಿ ನಾಯಕ ರಾಹುಲ್ ಗಾಂಧಿ ಯಾತ್ರೆಗೆ ಅಸ್ಸಾಂನಲ್ಲಿ ಬಿಜೆಪಿ ಕಾರ್ಯಕರ್ತರು ತಡೆಯೊಡ್ಡುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕ ನಗರದಲ್ಲಿ ಮಂಗಳವಾರ ಪ್ರತಿಭಟಿಸಿತು.

ನಗರದ ಶ್ರೀ ಜಯದೇವ ವೃತ್ತದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ ಇತರರ ನೇತೃತ್ವದಲ್ಲಿ ಪ್ರತಿಭಟಿಸಿದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಅಸ್ಸಾಂ ರಾಜ್ಯದಲ್ಲಿ ಅಲ್ಲಿನ ಬಿಜೆಪಿ ಕಾರ್ಯಕರ್ತರ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ಹೊರ ಹಾಕಿದರು.

ಇದೇ ವೇಳೆ ಮಾತನಾಡಿದ ಎಚ್.ಬಿ.ಮಂಜಪ್ಪ, ರಾಹುಲ್ ಗಾಂಧಿ ಇದೀಗ ಭಾರತ್ ಜೋಡೋ ನ್ಯಾಯ ಯಾತ್ರೆ ಕೈಗೊಂಡಿದ್ದಾರೆ. ದೇಶದಲ್ಲಿ ಬಿಜೆಪಿ ಅನ್ಯಾಯದ ವಿರುದ್ಧ ರಾಹುಲ್ ಗಾಂಧಿ ನ್ಯಾಯಯುತ ಹೋರಾಟ ನಡೆಸುತ್ತಿದ್ದಾರೆ. ಆದರೆ, ಅಸ್ಸಾಂ ಸರ್ಕಾರವು ತನ್ನ ಕಾರ್ಯಕರ್ತರ ಮೂಲಕ ಯಾತ್ರೆಯನ್ನು ತಡೆಯುವ ಪ್ರಯತ್ನ ಮಾಡುತ್ತಿರುವುದು ದುರಂತ ಎಂದರು.

ಕಾಂಗ್ರೆಸ್ ಪಕ್ಷವು ಹಿಂದೂ ವಿರೋಧಿಯಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ದೇವಸ್ಥಾನ ಉದ್ಘಾಟನೆ ಮಾಡಿ, ನಾವೂ ಹಿಂದೂಗಳು, ರಾಮಭಕ್ತರು ಎಂಬುದಾಗಿ ತೋರಿಸಿದ್ದಾರೆ. ಬಿಜೆಪಿಯವರು ತಮಗಷ್ಟೇ ಭಕ್ತಿ ಇದೆ, ಹಿಂದೂ ದೇವರುಗಳು ತನಗಷ್ಟೇ ಎಂಬ ಗ್ರಹಿಕೆಯಿಂದ ಹೊರಬರಲಿ. ಕೋಮುವಾದ, ಜಾತೀವಾದದ ರಾಜಕಾರಣ ವನ್ನು ಬಿಜೆಪಿ ಕೈಬಿಡಲಿ ಎಂದು ಅವರು ಹೇಳಿದರು. ಬಿಜೆಪಿಯ ಸುಳ್ಳಿನ ಮಾತಿಗೆ ಜನರು ಮರುಳಾಗಬಾರದು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೇರು ಸಮೇತ ಕಿತ್ತೊಗೆಯಬೇಕು. ಅಸ್ಸಾಂನಲ್ಲಿ ಬಿಜೆಪಿ ವರ್ತನೆ ಇದೇ ರೀತಿ ಮುಂದುವರಿದರೆ ನಾವು ಸಹ ತಕ್ಕ ಪಾಠವನ್ನೇ ಕಲಿಸಬೇಕಾಗುತ್ತದೆ. ಬಿಜೆಪಿ ಮುಖಂಡರು ದೇಶ ವಾಸಿಗಳಲ್ಲಿ ವಿನಾಕಾರಣ ಕೋಮುಭಾವನೆ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ನಾವು ಹಿಂದೂ ವಿರೋಧಿಗಳಲ್ಲ. ಆದರೂ, ಕಾಂಗ್ರೆಸ್ಸನ್ನು ಹಿಂದೂ ವಿರೋಧಿ ಎಂಬುದಾಗಿ ಬಿಜೆಪಿ ಬಿಂಬಿಸುತ್ತಿದೆ. ರಾಜ್ಯದ ಜನತೆ ಈ ಬಗ್ಗೆ ಜಾಗರೂಕ ರಾಗಿರಬೇಕು ಎಂದು ಅವರು ತಿಳಿಸಿದರು.

ಕೆಪಿಸಿಸಿ ವಕ್ತಾರ ಡಿ.ಬಸವರಾಜ, ಹಿರಿಯ ಮುಖಂಡರಾದ ಕೆ.ಜಿ.ಶಿವಕುಮಾರ, ಪಾಲಿಕೆ ಸದಸ್ಯ ಕೆ.ಚಮನ್ ಸಾಬ್‌, ಮಾಜಿ ಮೇಯರ್ ಅನಿತಾಬಾಯಿ ಮಾಲತೇಶ, ಶಿವ ಕುಮಾರ ಒಡೆಯರ್, ಎಸ್‌.ಮಲ್ಲಿಕಾರ್ಜುನ, ಎಲ್.ಎಂ.ಎಚ್.ಸಾಗರ್, ಶುಭಮಂಗಳ, ಕವಿತಾ ಚಂದ್ರಶೇಖರ, ಜಗಳೂರು ಕೆ.ಪಿ.ಪಾಲಯ್ಯ, ಎಚ್.ಜೆ.ಮೈನುದ್ದೀನ್‌, ಗಾಂಧಿ ನಗರ ರಮೇಶ, ವಕೀಲ ಅನೀಸ್ ಪಾಷ, ಸೋಮಲಾಪುರ ಹನುಮಂತಪ್ಪ, ಗುರುರಾಜ, ದಾಕ್ಷಾಯಣಮ್ಮ, ಕವಿತಾ, ನಾಗರಾಜ, ಜಸ್ಟಿನ್‌ ಕುಮಾರ ಇತರರು ಪ್ರತಿಭಟನೆ ಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಂಚನೆಗೆ ಬ್ಯಾಂಕ್ ಖಾತೆ ಬಳಕೆ: ಅಂತಾರಾಜ್ಯ ಸೈಬರ್ ಕ್ರೈಂ ಜಾಲ ಬಯಲು
ವಿಕಲಚೇತನರಿಗೆ ತ್ವರಿತಗತಿಯಲ್ಲಿ ಸೌಲಭ್ಯ ಮಂಜೂರು: ಟಿ.ಎಂ. ಶಾಹೀದ್