ಶಿರಹಟ್ಟಿ: ಕಾಂಗ್ರೆಸ್ ಸ್ಥಳೀಯ ನಾಯಕರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಜೈಲಿನಲ್ಲಿರಬೇಕಾದ ಪಪಂ ಮಾಜಿ ಅಧ್ಯಕ್ಷ ಹುಮಾಯೂನ್ ಮಾಗಡಿ ಬೇಲ್ ಮೇಲೆ ಹೊರಗಡೆ ಓಡಾಡುತ್ತಿದ್ದಾರೆ ಎಂದು ಪಪಂ ಮಾಜಿ ಸದಸ್ಯ ಜೆ.ಆರ್. ಕುಲಕರ್ಣಿ ಆರೋಪಿಸಿದರು.
ಸಧ್ಯ ಹುಮಾಯೂನ್ ಮಾಗಡಿ ಬ್ಲಾಕ್ ಕಾಂಗ್ರೆಸ್ ಕಮೀಟಿ ಅಧ್ಯಕ್ಷರಾಗಿದ್ದಾರೆ. ಇವರು ಪಪಂ ಅಧ್ಯಕ್ಷರಾಗಿದ್ದ ವೇಳೆ ಮಾಡಲಾರದ ಕಾನೂನು ಬಾಹಿರ ಚಟುವಟಿಕೆ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ. ಇವರು ಸದ್ಯ ಎರಡು ಕೇಸ್ನಲ್ಲಿ ಅಪರಾದಿಯಾಗಿರುವುದು ಸಾಬೀತಾಗಿದೆ. ಇಂತವರು ನೈತಿಕತೆ, ಭ್ರಚ್ಟಾಚಾದ ಬಗ್ಗೆ ಮಾತನಾಡಲು ಹೊರಟಿರುವುದು ನಾಚಿಕೆಗೇಡು ಎಂದರು.
ಗಣ್ಯ ವ್ಯಕ್ತಿಗಳಿಗೆ, ಮುಖಂಡರುಗಳಿಗೆ ವಿಶ್ರಾಂತಿಗೆಂದು ಇರುವ ಪ್ರವಾಸಿ ಮಂದಿರವನ್ನೇ ರಾಜಕೀಯ ವೇದಿಕೆ ಮಾಡಿಕೊಂಡು ಅಲ್ಲಿ ಪತ್ರಿಕಾಗೋಷ್ಠಿ ಕರೆದು ಅಪರಾದವೆಸಗಿದ್ದಾರೆ. ಅಪರಾಧಿ ಸ್ಥಾನದಲ್ಲಿರುವ ವ್ಯಕ್ತಿ ಸರ್ಕಾರಿ ಕಾರ್ಯಕ್ರಮದ ವೇದಿಕೆ ಮೇಲೆ ಕುಳಿತುಕೊಳ್ಳುವುದು ಸರಿಯಲ್ಲ ಎಂದರು.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಫಕ್ಕೀರೇಶ ರಟ್ಟಿಹಳ್ಳಿ, ಬಿಜೆಪಿ ಮಂಡಳದ ಅಧ್ಯಕ್ಷ ನಾಗರಾಜ ಲಕ್ಕುಂಡಿ ಮಾತನಾಡಿ, ಶಾಸಕರು ಹಾಗೂ ಬಿಜೆಪಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಕೇಸರಿ ಶಾಲ ಹಾಕಿಕೊಂಡು ಬಂದಿರುವುದಕ್ಕೆ ಕಾಂಗ್ರೆಸ್ನವರು ವಿರೋಧ ವ್ಯಕ್ತಪಡಿಸಿದ್ದು, ಕೇಸರಿ ಶಾಲು ಸಾಮರಸ್ಯದ ಸಂಕೇತ ಇದರ ಬಗ್ಗೆ ಕಾಂಗ್ರೆಸ್ನವರಿಗೆ ಯಾಕೆ ಉರಿ ಎಂದು ಪ್ರಶ್ನಿಸಿದರು.
ಕ್ಷೇತ್ರದ ಜನತೆ ಆಶೀರ್ವದಿಸಿದ್ದರಿಂದ ಶಾಸಕರಾಗಿದ್ದು, ಇವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷದವರೇ ಪ್ರವಾಸಿ ಮಂದಿರಕ್ಕೆ ಅಧಿಕಾರಿಗಳನ್ನು ಕರೆದು ಕಿರುಕುಳ ನೀಡುತ್ತಿದ್ದಾರೆ. ಇದನ್ನು ಮೊದಲು ಸರಿಪಡಿಸಿಕೊಳ್ಳಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ ಎಂಬ ಭ್ರಮೆಯಲ್ಲಿ ತೇಲುತ್ತಿರುವ ನೀವು ಮಾಡಿದೆಲ್ಲವೂ ಸರಿ ಎಂದು ತಿಳಿದುಕೊಳ್ಳದೇ ತಪ್ಪನ್ನು ಸರಿಪಡಿಸಿಕೊಂಡು ನಡೆಯಬೇಕು ಎಂದು ಎಚ್ಚರಿಸಿದರು.