ವಿಜಯಪುರ: ಕರ್ನಾಟಕವನ್ನು ಪಾಕಿಸ್ತಾನ ಮಾಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಹೊರಟಿದೆ ಎಂದು ಕೇಂದ್ರ ಮಾಜಿ ಸಚಿವ ಡಿ.ವಿ.ಸದಾನಂದಗೌಡ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ವಿಜಯಪುರ: ಕರ್ನಾಟಕವನ್ನು ಪಾಕಿಸ್ತಾನ ಮಾಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಹೊರಟಿದೆ ಎಂದು ಕೇಂದ್ರ ಮಾಜಿ ಸಚಿವ ಡಿ.ವಿ.ಸದಾನಂದಗೌಡ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪಟ್ಟಣದ ಬಲಿಜಪೇಟೆಯ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಲ್ಲಿನ ಕಾಂಗ್ರೆಸ್ ಸರ್ಕಾರ ರಾಜ್ಯದ ನಾಗರಿಕರನ್ನು ದ್ವಿತೀಯ ದರ್ಜೆ ನಾಗರಿಕರನ್ನಾಗಿ ನೋಡುತ್ತಿದೆ ಎಂದು ಆರೋಪಿಸಿದರು. ಹೊರ ರಾಜ್ಯದಿಂದ ಬಂದು ಇಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡವರಿಗೆ ರಾಜ್ಯ ಸರ್ಕಾರ ನಿವೇಶನ ನೀಡಿದರೆ ಕರ್ನಾಟಕದ ಎಲ್ಲ ನಿವೇಶನ ವಸತಿ ರಹಿತರೂ ಸರ್ಕಾರದ ಖಾಲಿ ಜಾಗಗಳಲ್ಲಿ ಕುಳಿತುಕೊಳ್ಳಬೇಕು. ಇವರಿಗೆಲ್ಲ ಸರ್ಕಾರ ವಸತಿ ನಿವೇಶನ ನೀಡಬೇಕು. ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ದೇಶದ ಯಾವ ರಾಜ್ಯದಲ್ಲೂ ನೋಡಿಲ್ಲ. ಸದ್ಯದ ಪರಿಸ್ಥಿತಿ ನೋಡಿದರೆ ಪ್ರಾಯಶಃ ಕರ್ನಾಟಕವನ್ನು ಮತ್ತೊಂದು ಪಾಕಿಸ್ತಾನ ಮಾಡುತ್ತಾರೆ ಎನಿಸುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿನ ಅತ್ಯಂತ ಕೆಟ್ಟ ರಾಜಕೀಯ ಬೆಳವಣಿಗೆ ದೇಶದ ಇತಿಹಾಸದಲ್ಲೇ ಇಲ್ಲ. ಯಾರು ಈ ಕೆ.ಸಿ.ವೇಣುಗೋಪಾಲ್ ? ಇವರಿಗೂ ಕರ್ನಾಟಕಕ್ಕೂ ಏನೂ ಸಂಬಂಧ? ಜನಾಶೀರ್ವಾದದಿಂದ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ. ಕಾಂಗ್ರೆಸ್ ಆಶೀರ್ವಾದದಿಂದಿಲ್ಲ. ಇಂತಹ ದುರುಂತವನ್ನು ಸಹಿಸಲು ಸಾಧ್ಯವಿಲ್ಲ ಎಂದು ಅಸಮಾಧಾಮ ವ್ಯಕ್ತಪಡಿಸಿದರು.
ಬಾಂಗ್ಲಾ ಜನರು ದೇಶಕ್ಕೆ ಬರಲು ಕಾಂಗ್ರೆಸ್ ಕಾರಣ:
ದೇಶದಲ್ಲಿ ಯುಪಿಎ ಸರಕಾರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಬಾಂಗ್ಲಾ ಪ್ರಜೆಗಳು, ಇಲ್ಲಿಗೆ ಬರಲು ಅವಕಾಶ ಮಾಡಿಕೊಟ್ಟಿದ್ದಾರೆ. ಆ ಕಾಲಘಟ್ಟದಲ್ಲಿ ಕಾಫಿ ಎಸ್ಟೇಟ್, ಹೋಟೆಲ್ ಇತರೆ ಕಡೆಗಳಿಗೆ ಹೊರಗಡೆಯಿಂದ ಅಕ್ರಮವಾಗಿ ರಾಜ್ಯಕ್ಕೆ ನುಸುಳಿದ್ದಾರೆ. ಪ್ರಧಾನಿಯಾಗಿ ನರೇಂದ್ರ ಮೋದಿ ಬಂದ ಮೇಲೆ ಯಾರೊಬ್ಬರೂ ನುಸುಳಿ ಬರಲು ಸಾಧ್ಯವಿಲ್ಲದಂತೆ ಕ್ರಮ ಕೈಗೊಂಡಿದ್ದಾರೆ. ಅಕ್ರಮವಾಗಿ ಬಂದಿರುವವರನ್ನೆಲ್ಲಾ ಹೊರಗೆ ಹಾಕುವ ಉದ್ದೇಶದಿಂದ ಗುರುತಿಸುವಂತೆ ಹೇಳಿದ್ದರೂ, ರಾಜ್ಯ ಸರ್ಕಾರ ಇದರ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಅಕ್ರಮವಾಗಿರುವವರಿಗೆ ನಿವೇಶನಗಳು ಕೊಟ್ಟರೆ, ನಾವು ಸರ್ಕಾರದ ವಿರುದ್ಧ ಹೋರಾಡುತ್ತೇವೆ. ನಮ್ಮ ರಾಜ್ಯದಲ್ಲಿ ನಿರಾಶ್ರಿತರು, ಸೂರಿಲ್ಲದವರಿಗೆ ಮೊದಲು ನಿವೇಶನಗಳು, ಮನೆಗಳು ಹಂಚಿಕೆ ಮಾಡಲಿ ಎಂದು ಹೇಳಿದರು.
ಪುರಸಭಾ ಮಾಜಿ ಸದಸ್ಯ ಬಲಮುರಿ ಶ್ರೀನಿವಾಸ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಂ.ರವಿಕುಮಾರ್, ಮುಖಂಡರಾದ ರವಿಕುಮಾರ್, ನಂಜೇಗೌಡರು, ಶಾಮಣ್ಣ, ಗಿರೀಶ್ ಆರಾಧ್ಯ, ಭಗವಾನ್ ರಾಮು, ಪ್ರಭು, ಸಾಗರ್, ರಾಘವ ಮತ್ತಿತರರು ಹಾಜರಿದ್ದರು.
(ಫೋಟೋ ಕ್ಯಾಫ್ಷನ್)
ವಿಜಯಪುರ ಪಟ್ಟಣದ ಬಲಿಜಪೇಟೆಯಲ್ಲಿರುವ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯಕ್ಕೆ ಕೇಂದ್ರ ಮಾಜಿ ಸಚಿವ ಡಿ.ವಿ. ಸದಾನಂದಗೌಡ ಅವರು ಭೇಟಿ ನೀಡಿದ ವೇಳೆ ದೇವಾಲಯದ ಕಮಿಟಿ ಮುಖಂಡರು ಸನ್ಮಾನಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.