ವಿಐಎಸ್‌ಎಲ್ ಕಾರ್ಖಾನೆಯ ದುಃಸ್ಥಿತಿಗೆ ಕಾಂಗ್ರೆಸ್ ಕಾರಣ

KannadaprabhaNewsNetwork | Published : Jan 28, 2025 12:47 AM

ಶಿವಮೊಗ್ಗ: ನಿಮ್ಮ ಮುಖಕ್ಕೆ ಮಸಿ ಬಳಿಯಲು ಬೇಕಾದಷ್ಟು ವಿಚಾರಗಳು ನಮ್ಮ ಬಳಿ ಇವೆ. ಅಹಂಕಾರದ ಮಾತುಗಳು ಸರಿಯಲ್ಲ. ಸುಳ್ಳು ಹೇಳುವುದನ್ನು ಮೊದಲು ಬಿಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿಕೆಗೆ ಸಂಸದ ಬಿ.ವೈ.ರಾಘವೇಂದ್ರ ತಿರುಗೇಟು ನೀಡಿದರು.

ಶಿವಮೊಗ್ಗ: ನಿಮ್ಮ ಮುಖಕ್ಕೆ ಮಸಿ ಬಳಿಯಲು ಬೇಕಾದಷ್ಟು ವಿಚಾರಗಳು ನಮ್ಮ ಬಳಿ ಇವೆ. ಅಹಂಕಾರದ ಮಾತುಗಳು ಸರಿಯಲ್ಲ. ಸುಳ್ಳು ಹೇಳುವುದನ್ನು ಮೊದಲು ಬಿಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿಕೆಗೆ ಸಂಸದ ಬಿ.ವೈ.ರಾಘವೇಂದ್ರ ತಿರುಗೇಟು ನೀಡಿದರು.ಶಿವಮೊಗ್ಗದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪರ ಕುರಿತಂತೆ ಏಕವಚನದಲ್ಲಿ ಮಾತನಾಡಿದ್ದಾರೆ. ರೈತರ ಪ್ರತಿಭಟನೆಯಲ್ಲಿ ಜಿಲ್ಲಾ ಮಂತ್ರಿಗಳ ಬಗ್ಗೆ ನಾವೇನು ಅವಹೇಳನ ಮಾಡಿಲ್ಲ. ಅವರ ಸ್ಥಾನಕ್ಕೆ ಗೌರವ ಕೊಡುತ್ತಿದ್ದೇವೆ. ಆದರೆ, ಇತ್ತೀಚೆಗೆ ಅವರ ಬಾಯಲ್ಲಿ ಬರುತ್ತಿರುವ ಹೇಳಿಕೆಗಳು ಸರಿಯಲ್ಲ ಎಂದು ಕುಟುಕಿದರು.ಶರಾವತಿ ಮುಳುಗಡೆ ಸಂತ್ರಸ್ತರ ವಿಚಾರದ ಕುರಿತಂತೆ, ಇಷ್ಟು ವರ್ಷ ನೀವೇನು ಮಾಡಿದ್ದೀರಿ. ನಿಮ್ಮ ಹಿಂದೆ ಇದ್ದವರು ಏನು ಮಾಡಿದ್ದರು. ಈ ವಿಚಾರ ದೆಹಲಿಗೆ ಯಾಕೆ ಹೋಯ್ತು. ಸುಪ್ರೀಂ ಕೋರ್ಟ್‌ಗೆ ಯಾಕೆ ಹೋಯ್ತು. ಎಂಬುವುದು ಸೇರಿದಂತೆ ಬೇಕಾದಷ್ಟು ವಿಚಾರಗಳಿವೆ ನಿಮ್ಮ ಮುಖಕ್ಕೆ ಮಸಿ ಬಳಿಯಲು ಎಂದರು.ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯ ದುಃಸ್ಥಿತಿಯು ಕಾಂಗ್ರೆಸ್ ಪಾಪದ ಕೂಸಾಗಿದೆ. ಇವತ್ತಿನ ಸಮಸ್ಯೆಯಲ್ಲ. ಇಂದಿನವರೆಗೂ ಅದನ್ನು ರನ್ನಿಂಗ್ ಕಂಡಿಷನ್‌ನಲ್ಲಿಟ್ಟಿಕೊಂಡಿರುವುದೆ ನಮ್ಮ ಸಾಧನೆಯಾಗಿದೆ. ಆಂಧ್ರ ಪ್ರದೇಶದ ಐರನ್ ಸ್ಟೀಲ್ ಇಂಡಸ್ಟ್ರೀ ಬಗ್ಗೆ ತೀರ್ಮಾನವಾಗಿದೆ. ವಿಐಎಸ್‌ಎಲ್ ಬಗ್ಗೆಯೂ ಉತ್ತಮ ನಿರ್ಧಾರವಾಗುವ ವಿಶ್ವಾಸವಿದೆ ಎಂದು ಹೇಳಿದರು.ಕಳೆದ ೬೦ ವರ್ಷಗಳಿಂದ ಆಳ್ವಿಕೆ ನಡೆಸಿಕೊಂಡು ಬಂದ ನೀವು (ಕಾಂಗ್ರೆಸ್) ಮಾಡಿದ ತಪ್ಪನ್ನು ಯಾರೂ ಕೂಡ ತೊಳೆಯಲು ಆಗುವುದಿಲ್ಲ. ಶರಾವತಿ ಮುಳುಗಡೆ ಸಂತ್ರಸ್ತರ ಕಣ್ಣೀರಿಗೆ ನೀವು ಕಾರಣಕರ್ತರಾಗಿದ್ದೀರಿ. ಹಂತಹಂತವಾಗಿ ವಿಐಎಸ್‌ಎಲ್ ಕಾರ್ಖಾನೆಗೆ ಜೀವ ಕೊಡುವ ಕೆಲಸ ಮಾಡುತ್ತಿದ್ದೇವೆ. ಈ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.ಶರಾವತಿ ಮುಳುಗಡೆ ರೈತರ ಪರವಾಗಿ ರಾಜ್ಯದ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರನ್ನು ಭೇಟಿಯಾಗಿದ್ದೇನೆ. ಇದು ಸಂಸದನಾಗಿ ನನ್ನ ಕರ್ತವ್ಯ. ನಿಮಗೆ ಏನು ಕಷ್ಟ. ಶಿವಮೊಗ್ಗ ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಲಾಗಿದೆ. ಇದಕ್ಕೆಲ್ಲ ನೀವು ಟೀಕೆ ಮಾಡುತ್ತಿರುವುದೇಕೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.ಸಚಿವರಾಗಿ ದುರಂಹಕಾರದ ಮಾತುಗಳನ್ನು ಕಡಿಮೆ ಮಾಡಿಕೊಳ್ಳಿ. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಕೆಲಸ ಮಾಡಿ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಅನುದಾನ ವಾಪಾಸ್ ಆಗಿದೆ. ಇದರ ಬಗ್ಗೆ ಗಮನ ಹರಿಸಿ. ಆದರೆ ಹಾಲಪ್ಪರಂತಹ ಹಿರಿಯ ನಾಯಕರಿಗೆ ಸೆಗಣಿ ತಿನ್ನುತ್ತಿದ್ದರಾ ? ಎಂಬ ಮಾತುಗಳನ್ನಾಡುತ್ತಿರಾ ಎಂದರೆ ನಿಮಗೆಷ್ಟು ದುರಹಂಕಾರವಿದೆ ಎಂದು ಪ್ರಶ್ನಿಸಿದರು.ಕುವೆಂಪು ವಿಶ್ವವಿದ್ಯಾಲಯ ಸ್ಥಾಪನೆಯಾಗಿದ್ದು ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಗಳಾಗಿದ್ದಾಗ. ಆದರೆ, ಮಧು ಬಂಗಾರಪ್ಪ ಅವರು ನಮ್ಮ ತಂದೆ (ಎಸ್ ಬಂಗಾರಪ್ಪ) ಸ್ಥಾಪನೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಕೇವಲ ಸುಳ್ಳಿನ ಕಂತೆಗಳನ್ನು ಹೇಳುತ್ತಿದ್ದಾರೆ ಎಂದು ಟೀಕಿಸಿದರು.ಆಶ್ರಯ ಯೋಜನೆ ಮನೆಗಳ ಹಂಚಿಕೆಗೆ ನಿಗದಿಯಾಗಿದ್ದ ದಿನಾಂಕವನ್ನು ಬೇಕೆಂದಲೇ ಮುಂದೆ ಹಾಕಲಾಗುತ್ತಿದೆ. ಸದರಿ ಯೋಜನೆ ಅನುಷ್ಠಾನಕ್ಕೆ ಈ ಹಿಂದೆ ಕೆ.ಎಸ್.ಈಶ್ವರಪ್ಪ, ಶಾಸಕ ಚನ್ನಬಸಪ್ಪ ಅವರು ಸಾಕಷ್ಟು ಶ್ರಮಿಸಿದ್ದಾರೆ. ಬಡವರಿಗೆ ಸೂರು ಕಲ್ಪಿಸುವ ಕಾರ್ಯ ಮಾಡಿದ್ದಾರೆ. ಆದರೆ, ನೀನೇನೋ ಒಂದು ಟ್ಯೂಬ್ ಲೈಟ್ ಹಾಕಿಸಿ ಉದ್ಘಾಟನೆಗೆ ಎರಡ್ಮೂರು ತಿಂಗಳು ಸಮಯ ತೆಗೆದುಕೊಂಡರೆ ಹೇಗೆ ಎಂದು ಪ್ರಶ್ನಿಸಿದರು.ಇನ್ನಾದರೂ ಸಣ್ಣತನ ಬಿಡಿ ನಿಮ್ಮ ಬಗ್ಗೆ ಗೌರವವಿದೆ ಅದನ್ನು ಉಳಿಸಿಕೊಳ್ಳಿ. ವಿರೋಧಪಕ್ಷವಾಗಿ ಸಹಕಾರ ನೀಡುತ್ತಿದ್ದೇವೆ. ಅಭಿವೃದ್ಧಿಪರ ಚಿಂತನೆಗಳತ್ತ ಗಮನಹರಿಸಿ. ಕೇಂದ್ರದಿಂದ ಏನಾಗಬೇಕೋ ಅದನ್ನು ನಾವು ಗಮನಿಸುತ್ತೆವೆ. ರಾಜ್ಯ ಸರ್ಕಾರದಿಂದ ಏನಾಗಬೇಕೋ ಅದನ್ನು ನೀವು ಗಮನಿಸಿ. ಈ ಮೂಲಕ ಜಿಲ್ಲೆಯ ಅಭಿವೃದ್ಧಿ ರಥ ಏಳೆಯೋಣ ಎಂದು ಇದೇ ವೇಳೆ ಮಧು ಬಂಗಾರಪ್ಪರಿಗೆ ಸಲಹೆ ನೀಡಿದರು.