ಹುಬ್ಬಳ್ಳಿ: ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ಕುರಿತು ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ, ಮತಗಳನ್ನು ಕಳ್ಳತನ ಮಾಡುವುದರಲ್ಲಿ ಕಾಂಗ್ರೆಸ್ ನಾಯಕರು ನಿಸ್ಸೀಮರು. ಕುಂಬಳಕಾಯಿ ಕಳ್ಳ ಎಂದರೆ ರಾಹುಲ್ ಗಾಂಧಿ ಹೆಗಲು ಮುಟ್ಟಿ ನೋಡಿಕೊಳ್ಳುತ್ತಾರೆ ಎಂದಿದ್ದಾರೆ.
ರಾಜ್ಯದಲ್ಲಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಜನ 136 ಸೀಟ್ ನೀಡಿದ್ದಾರೆ. ಆಗ ಮತಗಳ್ಳತನ ಆರೋಪ ಯಾಕೆ ಮಾಡಲಿಲ್ಲ? 2024ರ ಲೋಕಸಭಾ ಚುನಾವಣೆಯಲ್ಲಿ ಜನ ಬಿಜೆಪಿಗೆ ಬೆಂಬಲ ನೀಡಿದ ತಕ್ಷಣ ಮತಗಳ್ಳತನ ಆರೋಪ ಮಾಡಿದ್ದಾರೆ. ಬಿಹಾರದ ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಹೊಸ ನಾಟಕ ಹೂಡಿದ್ದಾರೆ, ಅನುಮಾನವಿದ್ದರೆ ಚುನಾವಣೆ ಆಯೋಗಕ್ಕೆ ದೂರು ನೀಡಲಿ ಎಂದರು.
ಸಿಎಂ ರಾಜೀನಾಮೆ ನೀಡಲಿಮತಗಳ್ಳತನ ಆರೋಪದಲ್ಲಿ ಪ್ರಧಾನಿ ರಾಜೀನಾಮೆ ಕೇಳಿರುವ ಸಿಎಂ ಸಿದ್ದರಾಮಯ್ಯ ಅವರೇ ರಾಜೀನಾಮೆ ನೀಡಲಿ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮತಗಳ್ಳತದಿಂದಲೇ 136 ಸೀಟು ಬಂದಿದೆಯಾ ಎಂದು ಪ್ರಶ್ನಿಸಿದರು.
ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ನಿಂದ ಮತಗಳ್ಳತನವಾಗಿದೆ ಎಂದು ನಾವು ಆರೋಪಿಸಿದರೆ ಸಿಎಂ ರಾಜೀನಾಮೆ ನೀಡುತ್ತಾರಾ ಎಂದ ಅವರು, ಬಿಜೆಪಿ ಯಾವಾಗಲೂ ಜನರ ತೀರ್ಪಿಗೆ ತಲೆಬಾಗುತ್ತದೆ. ಕಾಂಗ್ರೆಸ್ ಸಹ ಜನರ ತೀರ್ಪು ಕಾಂಗ್ರೆಸ್ ಒಪ್ಪಿಕೊಳ್ಳುವುದನ್ನು ಕಲಿಯಬೇಕು ಎಂದರು.