ಚಿಕ್ಕಪ್ಪನಹಳ್ಳಿ ಷಣ್ಮುಖ
ಏಳು ಜನ ಎಂಎಲ್ಎ, ಓರ್ವ ಸಚಿವ, ಸಾಲದೆಂಬಂತೆ ಮೂರು ನಿಗಮ ಮಂಡಳಿ ಅಧ್ಯಕ್ಷರಿದ್ದರೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿದೆ.
ಜಿಲ್ಲೆಯಲ್ಲಿ ಹೊಳಲ್ಕೆರೆ ಬಿಟ್ಟರೆ ಬೇರೆಡೆ ಶಾಸಕ ಸ್ಥಾನ ಹೊಂದಿರದ ಬಿಜೆಪಿ. ಹೊಸದುರ್ಗ, ಹಿರಿಯೂರು, ಚಳ್ಳಕೆರೆ, ಪಾವಗಡ ಹಾಗೂ ಶಿರಾದಲ್ಲಿ ನಾಯಕರೆ ಇಲ್ಲ. ಆದರೂ ಬಿಜೆಪಿ ನಿರಾಯಾಸವಾಗಿ ಗೆದ್ದಿದೆ. ಇದು ಹೇಗೆ ಸಾಧ್ಯವಾಯಿತು ಎಂಬುದು ಚಿತ್ರದುರ್ಗ ಕ್ಷೇತ್ರದ ಸೋಲು- ಗೆಲುವಿನ ಕುರಿತು ನಡೆಯುತ್ತಿರುವ ಚರ್ಚೆಯ ಹಿಂದಿರುವ ಮೂಲ ತಿರುಳು.ಕಾಂಗ್ರೆಸ್ನಲ್ಲಂತೂ ಚಿತ್ರದುರ್ಗದ ಸೋಲನ್ನು ಅರಗಿಸಿಕೊಳ್ಳಲಿಕೆ ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಕಾಂಗ್ರೆಸ್ಗೆ ಮೊಳಕಾಲ್ಮೂರಿನಲ್ಲಿ 26 ಸಾವಿರ ಲೀಡ್ ಬಾರದಿದ್ದರೆ ಪರಿಸ್ಥಿತಿ ಇನ್ನಷ್ಟೂ ಭೀಕರವಾಗಿರುತ್ತಿತ್ತು ಎನ್ನತ್ತಾರೆ ಕೆಲ ಹಿರಿಯ ನಾಯಕರು.
ಹಾಗೆ ನೋಡಿದರೆ ಕಾಂಗ್ರೆಸ್ ಲೋಕಸಭೆ ಚುನಾವಣೆಗೆ ಭರ್ಜರಿ ಪೂರ್ವ ತಯಾರಿ ನಡೆಸಿತ್ತು. ಚಿತ್ರದುರ್ಗದಲ್ಲಿ ಶೋಷಿತ ಸಮುದಾಯಗಳ ಬೃಹತ್ ಸಮಾವೇಶ ಆಯೋಜನೆ ಮಾಡಿ, ಹಿಂದುಳಿದ, ಪರಿಶಿಷ್ಟ ಸಮುದಾಯಗಳು ಹೆಚ್ಚು ಪಾಲ್ಗೊಳ್ಳುವಂತೆ ನೋಡಿಕೊಂಡಿತ್ತು. ಅಲ್ಲದೇ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರಸ್ನ ಪ್ರಿಯಾಂಕ ಗಾಂಧಿ, ಸಿಎಂ ಸಿದ್ದರಾಮಯ್ಯ ಸೇರಿ ಹಲವರು ಬಂದು ಭಾಷಣ ಮಾಡಿ ಹೋಗಿದ್ದರು. ಆದರೆ ಇಲ್ಲಿ ಯಾವುದು ಕೂಡ ವರ್ಕ್ಔಟ್ ಆಗಲೇ ಇಲ್ಲ. ಹಿರಿಯೂರಿನಲ್ಲಂತೂ ಮಾಜಿ ಶಾಸಕಿ ಪೂರ್ಣಿಮಾ ಹಾಗೂ ಪತಿ ಶ್ರೀನಿವಾಸ್, ಸಚಿವ ಡಿ.ಸುಧಾಕರ್ ಇದ್ದರೂ ಸಹಿತ ಬಿಜೆಪಿಗೆ ಲೀಡ್ ಬಂದಿದೆ.
ಮೊಳಕಾಲ್ಮೂರಿನಲ್ಲಿ ಬಿಜೆಪಿ ವೀಕ್ ಇದ್ದ ಕಾರಣ ಕಾಂಗ್ರೆಸ್ ಅಲ್ಲಿ ಲೀಡ್ ಪಡೆಯಿತು. ಆದರೆ ಚಿತ್ರದುರ್ಗದಲ್ಲಿ ಬಿಜೆಪಿ 18 ಸಾವಿರ ಮತಗಳು ಲೀಡ್ ಪಡೆದದ್ದಂತೂ ಕಾಂಗ್ರೆಸ್ ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಕಾಂಗ್ರೆಸ್ ಪರಿಸ್ಥಿತಿಯಾದರೆ ಒಂದೆಡೆಯಾದರೆ ಬಿಜೆಪಿಯದ್ದೂ ಇದಕ್ಕಿಂತ ವಿಭಿನ್ನವಾದುದ್ದು, ಬಿಜಿಪಿಗೆ ಹೊಳಲ್ಕೆರೆ ಬಿಟ್ಟರೆ ಬೇರೆ ಯಾವ ಕ್ಷೇತ್ರಗಳಲ್ಲಿ ಶಾಸಕರಿಲ್ಲ. ಚಿತ್ರದುರ್ಗದಲ್ಲಿ ತಿಪ್ಪಾರೆಡ್ಡಿ, ಬಸವರಾಜನ್ ತುಸು ಕ್ಷೇತ್ರ ಸುತ್ತಿದರು ಎಂಬುದ ಹೊರತು ಪಡಿಸಿ ಬೇರೆ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳಗೆ ಸಾಥ್ ಸಿಗಲೇ ಇಲ್ಲ. ಹೊಸದುರ್ಗ, ಹಿರಿಯೂರು, ಶಿರಾ ಪಾವಗಡ, ಚಳ್ಳಕೆರೆಯಲ್ಲಿ ಬಿಜೆಪಿ ಲೀಡರ್ ಗಳೂ ಚುನಾವಣೆ ನೇತೃತ್ವ ವಹಿಸಲಿಲ್ಲ. ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ, ಶಿರಾ, ಪಾವಗಡದಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಬೆಂಬಲಿಸಿದ ಪರಿಣಾಮ ಗೆಲವು ಸಾಧ್ಯವಾಗಿದೆ. ಅದರಲ್ಲಿ ಒಕ್ಕಲಿಗ ಸಮುದಾಯ ಬಿಜೆಪಿ ಪರವಾಗಿ ಇತ್ತೆಂಬುದು ಚುನಾವಣೆ ಸಾಬೀತು ಪಡಿಸಿದೆ.
ಕಾಂಗ್ರೆಸ್ ನಾಯಕರು ಚುನಾವಣೆಯನ್ನು ಗಂಭಿರವಾಗಿ ತೆಗೆದುಕೊಳ್ಳಲಿಲ್ಲ. ಬಿಜೆಪಿಯಲ್ಲಿರುವ ನಾಯಕರು ಅಸಹಕಾರ ಚಳವಳಿ ಘೋಷಿಸಿದ್ದರು. ಹಾಗಾಗಿ ಮತದಾರ ತನ್ನಷ್ಟಕ್ಕೆ ತಾನು ಕೈಗೊಂಡ ನಿಲುವು ಇದಾಗಿದೆ.