ಕಾಂಗ್ರೆಸ್‌ನವರು ಎಂದಿಗೂ ದಲಿತರನ್ನು ಗೌರವಿಸಲಿಲ್ಲ

KannadaprabhaNewsNetwork | Published : Apr 16, 2025 12:37 AM

ಸಾರಾಂಶ

ಡಾ.ಅಂಬೇಡ್ಕರ್ ಅವರ ಶತಮಾನೋತ್ಸವ ವಿಷಯವನ್ನು ಶಶಿಕಲಾ ಜಿಲ್ಲೆ ಅವರು ಸರ್ಕಾರಕ್ಕೆ ಪ್ರಸ್ತಾಪಿಸಿದಾಗ ಸಿದ್ದರಾಮಯ್ಯನವರು ಗಮನ ಹರಿಸಲಿಲ್ಲ. ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಅವರು ಕೂಡ ನಾಮ್‌ ಕೆ ವಾಸ್ತೆ ಕೂಡ ಈ ಕಡೆ ಗಮನಹರಿಸಲಿಲ್ಲ. ಕಾಂಗ್ರೆಸ್‌ನವರು ಎಂದಿಗೂ ದಲಿತರನ್ನು ಗೌರವಿಸಲಿಲ್ಲ ಎಂದು ಮಾಜಿ ಡಿಸಿಎಂ, ಸಂಸದ ಗೋವಿಂದ ಕಾರಜೋಳ ಅವರು ಗಂಭೀರ ಆರೋಪ ಮಾಡಿದರು.

ಅಶ್ವಿನ ಅಮ್ಮಣಗಿ

ಕನ್ನಡಪ್ರಭ ವಾರ್ತೆ ನಿಪ್ಪಾಣಿ

ಡಾ.ಅಂಬೇಡ್ಕರ್ ಅವರ ಶತಮಾನೋತ್ಸವ ವಿಷಯವನ್ನು ಶಶಿಕಲಾ ಜಿಲ್ಲೆ ಅವರು ಸರ್ಕಾರಕ್ಕೆ ಪ್ರಸ್ತಾಪಿಸಿದಾಗ ಸಿದ್ದರಾಮಯ್ಯನವರು ಗಮನ ಹರಿಸಲಿಲ್ಲ. ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಅವರು ಕೂಡ ನಾಮ್‌ ಕೆ ವಾಸ್ತೆ ಕೂಡ ಈ ಕಡೆ ಗಮನಹರಿಸಲಿಲ್ಲ. ಕಾಂಗ್ರೆಸ್‌ನವರು ಎಂದಿಗೂ ದಲಿತರನ್ನು ಗೌರವಿಸಲಿಲ್ಲ ಎಂದು ಮಾಜಿ ಡಿಸಿಎಂ, ಸಂಸದ ಗೋವಿಂದ ಕಾರಜೋಳ ಅವರು ಗಂಭೀರ ಆರೋಪ ಮಾಡಿದರು.

ಅಂಬೇಡ್ಕರ್ ಅವರು ನಿಪ್ಪಾಣಿ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಭೀಮ ಹೆಜ್ಜೆ-100 ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಶ್ರೇಷ್ಠ ಸಂವಿಧಾನ ಸೃಷ್ಟಿಕರ್ತ ಅಂಬೇಡ್ಕರ್ ಅವರನ್ನು ದೇಶದ ಮೊದಲನೇ ಚುನಾವಣೆಯಲ್ಲಿ ಸೋಲಿಸಿದ ಶ್ರೇಯ ಕಾಂಗ್ರೆಸ್‌ಗೆ ಸಲ್ಲಬೇಕು. ಬಾಬಾಸಾಹೇಬ್ ಅವರು ಯಾವುದೇ ಕಾರಣಕ್ಕೂ ಲೋಕಸಭೆ ಪ್ರವೇಶ ಮಾಡಬಾರದು ಅಂತ ಕಠಿಣ ನಿರ್ಧಾರ ತೆಗೆದುಕೊಂಡಿದ್ದು ಅಂದಿನ ಪ್ರಧಾನ ಮಂತ್ರಿ ಜವಾಹರಲಾಲ್‌ ನೆಹರು ಅವರು. ಕೇವಲ ವೋಟ್ ಬ್ಯಾಂಕ್‌ಗಾಗಿ ಬಾಬಾ ಸಾಹೇಬ್ ಅವರನ್ನು ನೆನಪಿಸಿಕೊಳ್ಳುವ ಕಾಂಗ್ರೆಸ್, ಗೌರವ ಕೊಡುವ ಸಮಯ ಬಂದಾಗ ಮಾತ್ರ ತಿರಸ್ಕಾರ ಮಾಡುತ್ತೆ. ಜೀವಿತ ಕಾಲದಲ್ಲಿ ಬಾಬಾಸಾಹೇಬ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಿಲ್ಲ ಎಂದರು.ನಾಮ್‌ ಕೆ ವಾಸ್ತೆ ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಕಾಂಗ್ರೆಸ್ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ಸಭೆ ಸಮಾರಂಭಗಳಿಗೂ ಖರ್ಗೆಯವರಿಗೆ ಸ್ಥಾನಮಾನ ನೀಡುತ್ತಿಲ್ಲ. ಬಾಬಾಸಾಹೇಬ್ ಅವರನ್ನಲ್ಲ ಬಾಬು ಜಗಜೀವನ್ ರಾಮ್ ಅವರನ್ನು ವಾಜಪೇಯಿ ಅವರು ಪ್ರಧಾನಮಂತ್ರಿ ಮಾಡಬೇಕು ಅಂದುಕೊಂಡಾಗ ಕುತಂತ್ರದಿಂದ ಅವರನ್ನು ಸೋಲಿಸುವಂತಹ ಪ್ರಯತ್ನ ಕಾಂಗ್ರೆಸ್ ಮಾಡಿರುವುದು ಇತಿಹಾಸ. ಮ್ಯಾನೇಜ್ಮೆಂಟ್ ಕೋಟಾದಲ್ಲಿ ಐದು ಬಾರಿ ಲೋಕಸಭಾ ಸದಸ್ಯರಾದ ರಾಹುಲ್ ಗಾಂಧಿಯವರು ಕೂಡ ದಲಿತರಿಗಾಗಲಿ, ಬಾಬಾ ಸಾಹೇಬ್ ಅವರಿಗಾಗಲಿ ಗೌರವ ಕೊಡುವಂತಹ ಕೆಲಸ ಮಾಡಲಿಲ್ಲ ಎಂದು ಹರಿಹಾಯ್ದರು.ವಿಧಾನಸಭೆ ವಿರೋಧ ಪಕ್ಷ ನಾಯಕ ಆರ್.ಅಶೋಕ್ ಮಾತನಾಡಿದರು. ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಬಾಬಾಸಾಹೇಬ್ ಅವರು ನಿಪ್ಪಾಣಿಯಲ್ಲಿ ಪುಣ್ಯ ಸ್ಪರ್ಶ ಮಾಡಿ ಶತಮಾನೋತ್ಸವ ಆಚರಿಸುತ್ತಿದ್ದು ಇದು ಸುವರ್ಣ ಅಕ್ಷರದಲ್ಲಿ ಬರೆದಿಡುವಂತಹ ಕ್ಷಣ. ಇದನ್ನು ಬಿಜೆಪಿ ರಾಜ್ಯದ ಹಾಗೂ ಕೇಂದ್ರದ ನಾಯಕರ ನೇತೃತ್ವದಲ್ಲಿ ಮಾಡುತ್ತಿರುವುದು ನನ್ನ ಭಾಗ್ಯ. ಬಾಬಾ ಸಾಹೇಬ್ ಅವರು ಅಸ್ಪೃಶ್ಯತೆ ತೊಡೆದು ಹಾಕಲು ಹೋರಾಟ ಮಾಡುತ್ತಿದ್ದರು. ಅದರ ಅಂಗವಾಗಿ ಬಹಿಷ್ಕೃತ ಕಾರ್ಯಕಾರಿಣಿ ಸಭೆ ಇಟ್ಟುಕೊಂಡು ನಗರಕ್ಕೆ ಆಗಮಿಸಿದ್ದರು. ಈ ನೂರು ವರ್ಷದ ಇತಿಹಾಸವನ್ನು ಇಲ್ಲಿಗೆ ಮರೆಯದೆ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು ಎಂದು ಆಶಿಸಿದರು.

ಇದಕ್ಕಾಗಿ ₹1.30 ಕೋಟಿ ಬಿಜೆಪಿ ಸರ್ಕಾರ ಇದ್ದಾಗ ಬಂದಿದೆ. ಸದ್ಯ ಶಾಸಕರ ನಿಧಿಯಿಂದ ₹1 ಕೋಟಿ ಹಾಗೂ ಜೊಲ್ಲೆ ಗ್ರೂಪ್‌ ವತಿಯಿಂದ ₹1 ಕೋಟಿ ಹೀಗೆ ₹3.30 ಕೋಟಿ ಹಣ ಈ ಭವ್ಯ ಸ್ಮಾರಕ ಕಾಗಿ ನೀಡುವುದಾಗಿ ತಿಳಿಸಿದರು.ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಪ ಸಚೇತಕ ಎನ್. ರವಿಕುಮಾರ್, ಮಾಜಿ ಸಚಿವ ಎನ್ ಮಹೇಶ್, ಮಾಜಿ ಸಂಸದರಾದ ಉಮೇಶ ಜಾಧವ, ಮುನಿಸ್ವಾಮಿ, ಎಸ್ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಸಿಮೆಂಟ್ ಮಂಜು, ಶಾಸಕ ಅವಿನಾಶ್ ಜಾಧವ, ಶಾಸಕ ದುರ್ಯೋಧನ ಐಹೊಳೆ, ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಮಾಜಿ ಸಂಸದೆ ಮಂಗಲ ಅಂಗಡಿ, ಮಾಜಿ ಶಾಸಕರಾದ ಶ್ರೀಮಂತ ಪಾಟೀಲ್, ಮಹೇಶ್ ಕುಮಠಳ್ಳಿ, ಪಿ.ರಾಜೀವ್, ಹುಕ್ಕೇರಿ ಶಾಸಕ ನಿಖಿಲ್ ಕತ್ತಿ, ಬಸವಪ್ರಸಾದ್ ಜೊಲ್ಲೆ ಉಪಸ್ಥಿತರಿದ್ದರು.ಬೈಕ್‌ ಮೂಲಕ ಅದ್ಧೂರಿ ಸ್ವಾಗತ

ಅಂಬೇಡ್ಕರ್ ಅವರು ಐತಿಹಾಸಿಕ ನಗರಿ ನಿಪ್ಪಾಣಿಗೆ ಆಗಮಿಸಿ ಶತಮಾನೋತ್ಸವದ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಏ.11 ರಂದು ಬೆಂಗಳೂರಿನಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ್ ಭೀಮಹೆಜ್ಜೆ ರಥ ಯಾತ್ರೆಯು ಮಂಗಳವಾರ ನಿಪ್ಪಾಣಿ ಹೊರವಲಯದ ಆರೋರಾ ಫ್ಯಾಕ್ಟರಿ ಪ್ರವೇಶಿಸುತ್ತಿದಂತೆ ಭೀಮಹೆಜ್ಜೆ ರಥ ಯಾತ್ರೆಯನ್ನು ಶಾಸಕಿ ಶಶಿಕಲಾ ಜೊಲ್ಲೆ, ಬಸವ ಪ್ರಸಾದ ಜೊಲ್ಲೆ ಅವರು ರಥಕ್ಕೆ ಮಾಲಾರ್ಪಣೆ ಮಾಡಿ ಗೌರವದಿಂದ ಬರಮಾಡಿಕೊಂಡರು. ಈ ವೇಳೆ ಅಪಾರ ಪ್ರಮಾಣದಲ್ಲಿ ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು. 500ಕ್ಕಿಂತಲೂ ಅಧಿಕ ಬೈಕ್‌ಗಳ ಮೂಲಕ ಬೈಕ್ ರ್‍ಯಾಲಿ ಮುಖಾಂತರ ನಿಪ್ಪಾಣಿ ನಗರಕ್ಕೆ ಪ್ರವೇಶ ಮಾಡಿತು. ನಗರದ ಮುರುಗುಡ ರೋಡ್ ಬ್ರಿಡ್ಜ್, ಬಸ್ ನಿಲ್ದಾಣ ವೃತ್ತದ ಮೂಲಕ ಸಾಗಿ ನಗರ ಪಾಲಿಕೆ ಹತ್ತಿರ ಆಗಮಿಸಿ, ಅಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.ಬಾಬಾಹೇಬ್ ಅವರು ಇಲ್ಲಿಗೆ ಆಗಮಿಸಿದ್ದಾಗ ಕುದುರೆ ಮೇಲೆ ಗವಾನಿ ಗ್ರಾಮದ ಬೆಟ್ಟದ ಮೇಲೆ ವಾಯುವಿಹಾರಕ್ಕೆ ತೆರಳುತ್ತಿದ್ದರು. ಅವರು ವಿಶ್ರಮಿಸುತ್ತಿದ್ದ ಸ್ಥಳದಲ್ಲಿ ಬಿಜೆಪಿ ಸರ್ಕಾರದ ಮಾಧ್ಯಮದಿಂದ 10 ಎಕರೆ ಸ್ಥಳ ತೆಗೆದುಕೊಳ್ಳಲಾಗಿತ್ತು. ಆ ಸ್ಥಳದಲ್ಲಿ ಬಾಬಾಸಾಹೇಬ್ ಅವರ ಭವ್ಯ ಸ್ಮಾರಕ, ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಹಾಸ್ಟೆಲ್, ಬಾಬಾ ಸಾಹೇಬ್ ಅವರ ಜೀವನ ಚರಿತ್ರೆ ತೋರಿಸುವ ಮ್ಯೂಸಿಯಂ, ಅಶ್ವಾರೂಢ ಬಾಬಾಸಾಹೇಬ್ ಅವರ ಪ್ರತಿಮೆ, ಕ್ರಾಂತಿ ಸ್ತಂಭ, ಬೌದ್ಧ ಸ್ತೂಪ ನಿರ್ಮಾಣ ಮಾಡಿ, ಅಲ್ಲಿ ಅತಿ ಎತ್ತರದ ತ್ರಿವರ್ಣ ಧ್ವಜ ಹಾರಿಸಲಾಗುವುದು.

- ಶಶಿಕಲಾ ಜೊಲ್ಲೆ,

ಶಾಸಕಿ, ಮಾಜಿ ಸಚಿವೆ

Share this article