ವಿಬಿ ಜಿ ರಾಮ್‌ ಜಿ ಬಗ್ಗೆ ಕಾಂಗ್ರೆಸ್‌ ಅಪಪ್ರಚಾರ: ಸಂಸದ ಬಿ.ವೈ. ರಾಘವೇಂದ್ರ

KannadaprabhaNewsNetwork |  
Published : Feb 01, 2026, 01:45 AM IST
ಪೊಟೊ: 31ಎಸ್‌ಎಂಜಿಕೆಪಿ05ಶಿವಮೊಗ್ಗ ನಗರದ ಅಂಬೇಡ್ಕರ್ ಭವನ ಶನಿವಾರ ವಿಬಿಜಿ ರಾಮ್-ಜಿಯೋಜನೆಯ ಬಗ್ಗೆ ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ ಜಾಗೃತಿ ಜಿಲ್ಲಾ ಸಮ್ಮೇಳನದಲ್ಲಿ ಭಾರತಾಂಬೆ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು.  | Kannada Prabha

ಸಾರಾಂಶ

ಎನ್‌ಡಿಎ ಸರ್ಕಾರ ಜಾರಿಗೆ ತಂದಿರುವ ವಿಬಿಜಿ ರಾಮ್-ಜಿ ಯೋಜನೆ ಕುರಿತು ಕಾಂಗ್ರೆಸ್ ಪಕ್ಷದವರು ಅಪಪ್ರಚಾರ ಮಾಡುವ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಎನ್‌ಡಿಎ ಸರ್ಕಾರ ಜಾರಿಗೆ ತಂದಿರುವ ವಿಬಿಜಿ ರಾಮ್-ಜಿ ಯೋಜನೆ ಕುರಿತು ಕಾಂಗ್ರೆಸ್ ಪಕ್ಷದವರು ಅಪಪ್ರಚಾರ ಮಾಡುವ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಕಿಡಿಕಾರಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಬಿಜೆಪಿಯಿಂದ ವಿಬಿಜಿ ರಾಮ್-ಜಿ (ವಿಕಸಿತ ಭಾರತ ಗ್ಯಾರೆಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕ ಮಿಷನ್ ಗ್ರಾಮೀಣ)ಯೋಜನೆಯ ಬಗ್ಗೆ ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ ಜಾಗೃತಿ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಮಹಾತ್ಮಗಾಂಧೀಜಿ ಮತ್ತು ಅಂಬೇಡ್ಕರ್ ಅವರಿಗೆ ಸ್ವಾತಂತ್ರ್ಯದ ನಂತರ ಇದೇ ಕಾಂಗ್ರೆಸ್ ಯಾವ ರೀತಿ ನಡೆಸಿಕೊಂಡಿದೆ ಎಂಬ ಇತಿಹಾಸ ನಮ್ಮೆಲ್ಲರ ಕಣ್ಣಮುಂದೆ ಇದೆ. 60 ವರ್ಷ ದೇಶವನ್ನು ಆಳಿದ ಇವರು ಮಹಾತ್ಮಗಾಂಧಿಯ ಹೆಸರನ್ನು ಕೈಬಿಟ್ಟು ಜವಾಹರಲಾಲ್ ನೆಹರೂ, ರಾಜೀವ್‌ಗಾಂಧಿ ಮತ್ತು ಇಂದಿರಾಗಾಂಧಿಯ ಹೆಸರುಗಳನ್ನು ಸುಮಾರು 450ಕ್ಕೂ ಹೆಚ್ಚು ಕೇಂದ್ರದ ಯೋಜನೆಗಳಿಗೆ ಮರುನಾಮಕರಣ ಮಾಡಿದ್ದಾರೆ. ಈಗ ಗಾಂಧಿ ಹೆಸರಿನಲ್ಲಿ ಒಳ್ಳೆಯ ಯೋಜನೆಯ ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡುತ್ತಿರುವುದು ಮತ್ತು ಪತ್ರಿಕೆಗಳಲ್ಲಿ ಸುಳ್ಳು ಜಾಹೀರಾತು ನೀಡುತ್ತಿರುವುದು ದೊಡ್ಡ ದುರಂತ ಎಂದರು.

ಇದನ್ನು ಮನಗಂಡು ನಮ್ಮ ಕಾರ್ಯಕರ್ತರು ಪ್ರತಿನಿತ್ಯ ದೇವರ ಪೂಜೆ ತಡವಾದರೂ ಕೂಡ ಪರವಾಗಿಲ್ಲ. ಈ ಯೋಜನೆಯ ನಿಜವಾದ ಸೌಲಭ್ಯಗಳ ಬಗ್ಗೆ ಜನರಿಗೆ ಮುಟ್ಟಿಸಿ ಜಾಗೃತಿ ಮೂಡಿಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ಕೇಂದ್ರ ಸರ್ಕಾರ ಭಾನುವಾರ ಬಜೆಟ್ ಮಂಡಿಸಲಿದ್ದು, ಈ ಭಾರಿ ಗ್ರಾಮೀಣ ಬಜೆಟ್ ಎಂದೇ ಪ್ರತ್ಯೇಕವಾಗಿ ಬಜೆಟ್ ಮಂಡನೆಯಾಗಲಿದೆ.

ಕೋವಿಡ್ ಸಂದರ್ಭದಲ್ಲಿ ಜಗತ್ತೇ ತತ್ತರಿಸುತ್ತಿರುವಾಗ ಪ್ರಸಕ್ತ ಆರ್ಥಿಕ ನೀತಿ ನೀಡಿ ವಿಶ್ವದಲ್ಲೇ ಗಮನಸೆಳೆಯುತ್ತಿರುವಾಗ ನಮ್ಮ ದೇಶದ ಕಾಂಗ್ರೆಸ್ ಬ್ಯಾಲೆಟ್ ಪೇಪರ್‌ಗೆ ಹೋಗಬೇಕೆಂದು ಪಟ್ಟು ಹಿಡಿಯುತ್ತಿದೆ. ಒಂದು ಕಡೆ ಡಿ.ಕೆ.ಶಿವಕುಮಾರ್‌ ಮತ್ತು ಪ್ರಿಯಾಂಕ್‌ ಖರ್ಗೆ ಎ.ಐ. ತಂತ್ರಜ್ಞಾನದ ಬಗ್ಗೆ ಮಾತನಾಡುತ್ತಾರೆ. ಇನ್ನೊಂದು ಕಡೆ ಬ್ಯಾಲೆಟ್ ಪೇಪರ್ ಬೇಕು ಎನ್ನುತ್ತಾರೆ. ಇದು ಕಾಂಗ್ರೆಸ್ ಪ್ರಜಾಪ್ರಭುತ್ವವನ್ನು ಬಡವರಿಂದ ಕಸಿಯುವ ದ್ವಂದ್ವ ನೀತಿಯ ಷಡ್ಯಂತ್ರ ಎಂದು ಹರಿಹಾಯ್ದರು.

ಚಿಕ್ಕಮಗಳೂರು, ಉಡುಪಿ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಕಾಂಗ್ರೆಸ್‌ನವರು ಸತ್ಯವನ್ನು ಮರೆಮಾಚಿ ಜನರಿಗೆ ನಿರಂತರ ಸುಳ್ಳು ಹೇಳುತ್ತಾ ಸುಳ್ಳನ್ನೇ ಸತ್ಯವಾಗಿಸುವ ಪ್ರಯತ್ನ ಮಾಡುತ್ತಿರುವಾಗ ನಮ್ಮ ಕಾರ್ಯಕರ್ತರು ಈ ಯೋಜನೆಯ ಸತ್ಯದರ್ಶನವನ್ನು ಜನರಿಗೆ ಮಾಡಬೇಕಾಗಿದೆ. ಯುಪಿಎ ಸರ್ಕಾರ ಇದ್ದಾಗ, ಕೇವಲ 100 ದಿನ ಕೆಲಸ ಕೊಟ್ಟಿತ್ತು. ಈಗ ವಿಬಿಜಿ ರಾಮ್-ಜೀ ಯೋಜನೆಯಾದ ಮೇಲೆ 120 ದಿನ ಕೆಲಸ ಕೊಟ್ಟಿದೆ. ಮೊದಲು 15 ದಿನಕ್ಕೊಮ್ಮೆ ಹಣ ಕೊಡುತ್ತಿದ್ದರು. ಈಗ ಕೂಲಿ ಮಾಡಿದ ಒಂದು ವಾರದೊಳಗೆ ನೇರವಾಗಿ ಅವರ ಖಾತೆಗೆ ಹಣ ಹೋಗುತ್ತದೆ. ಮೊದಲು 174 ರು. ಕೂಲಿ ಇತ್ತು, ಈಗ 370 ರು. ಕೂಲಿಯನ್ನು ಏರಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಉದ್ಯೋಗಖಾತ್ರಿ ಯೋಜನೆಗೆ 33 ಸಾವಿರ ಕೋಟಿ ರು. ಮೀಸಲಿಟ್ಟಿತ್ತು. ಈಗ ಎನ್‌ಡಿಎ ಸರ್ಕಾರ 2.86 ಲಕ್ಷ ಕೋಟಿ ರು. ಅನುದಾನ ನೀಡಿದೆ ಎಂದರು.

ಬಯೋಮೆಟ್ರಿಕ್ ಮೂಲಕ ಪಾರದರ್ಶಕವಾಗಿ ಕೂಲಿಕಾರರ ಖಾತೆಗೆ ಹಣ ಹೋಗುವ ಹಾಗೆ ಮಾಡಲಾಗುತ್ತಿದೆ. ಕೆಲವು ಕಡೆ ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಜಾಬ್‌ಕಾರ್ಡ್ ಇಲ್ಲದೇ ಜೆಸಿಬಿ ಮೂಲಕ ಕಾರ್ಯನಿರ್ವಹಿಸಿ, ಸುಮಾರು 22 ಸಾವಿರ ಕೋಟಿ ರು. ಭ್ರಷ್ಟಾಚಾರ ಮಾಡಿತ್ತು.

ಕರ್ನಾಟಕದಲ್ಲಿ ಈ ಯೋಜನೆಯಡಿ ಕೇಂದ್ರ ಸರ್ಕಾರ ನೀಡಿದ 169 ಕೋಟಿ ರು. ಹಣ ಭ್ರಷ್ಟಾಚಾರ ಆಗಿದೆ ಎಂದು ರಾಜ್ಯದ ಆಡಿಟ್ ವರದಿ ಹೇಳಿದೆ ಎಂದರು.

ಕೇಂದ್ರದ ವಿಶ್ವಕರ್ಮ ಯೋಜನೆಯಡಿ ರಾಷ್ಟ್ರೀಕೃತ ಬ್ಯಾಂಕುಗಳಿಗೆ 12,000 ಕೋಟಿ ರು. ಕೇಂದ್ರ ಕೊಟ್ಟಿದ್ದು, ನಮ್ಮ ರಾಜ್ಯ ಸರ್ಕಾರ 31 ಜಿಲ್ಲಾಧಿಕಾರಿಗಳಿಗೆ ಕೇಂದ್ರದ ವಿಶ್ವಕರ್ಮ ಯೋಜನೆಯ ಸಭೆಗಳಲ್ಲಿ ಭಾಗವಹಿಸದಂತೆ ಮೌಖಿಕ ಆದೇಶ ನೀಡಿದೆ. ಸಂಸದರು ಈ ಬಗ್ಗೆ ಗಮನಸೆಳೆದ ಮೇಲೆ ಈಗ ರಾಜ್ಯ ಕಾರ್ಯದರ್ಶಿ ಈ ತಪ್ಪನ್ನು ಸರಿಪಡಿಸಿದ್ದಾರೆ. ಕೇಂದ್ರದ ಆಯುಷ್ಮಾನ್ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಬೆಡ್ ನೀಡುತ್ತಿಲ್ಲ. ಯುಪಿಎ ಸರ್ಕಾರ ಇದ್ದಾಗ ಉದ್ಯೋಗಖಾತ್ರಿ ದಿನಗಳು 16,400 ಕೋಟಿ ಇತ್ತು. ಈಗ 46,250 ಕೋಟಿ ದಿನಗಳಿಗೆ ಈ ಯೋಜನೆಯನ್ನು ವಿಸ್ತರಿಸಲಾಗಿದೆ ಎಂದು ಹೇಳಿದರು.

ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಈ ಯೋಜನೆಯ ಬಗ್ಗೆ ತಪ್ಪುಮಾಹಿತಿ ನೀಡಲು ವಿಶೇಷ ಅಧಿವೇಶನ ಕರೆದ ಮತ್ತು ರಾಜ್ಯಪಾಲರ ಬಾಯಲ್ಲೇ ಸುಳ್ಳು ಹೇಳಿಸುವ ಷಡ್ಯಂತ್ರ ಮಾಡಿ, ರಾಜ್ಯಪಾಲರನ್ನು ಅವಮಾನಿಸಿದ ಕಾಂಗ್ರೆಸ್‌ನ ಸಂವಿಧಾನ ವಿರೋಧಿ ಕ್ರಮಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಎಸ್‌.ಎನ್‌.ಚನ್ನಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಪ್ರಮುಖರಾದ ಸಿದ್ದರಾಮಣ್ಣ, ಕೆ.ಬಿ.ಅಶೋಕ್‌ನಾಯ್ಕ್‌, ಎಸ್. ದತ್ತಾತ್ರಿ, ಜ್ಯೋತಿಪ್ರಕಾಶ್, ಸಂತೋಷ್ ಬಳ್ಳೇಕೆರೆ, ಸಿದ್ಧಲಿಂಗಪ್ಪ, ಟಿ.ಡಿ. ಮೇಘರಾಜ್, ವೀರಭದ್ರಪ್ಪ ಪೂಜಾರಿ, ಕೋಹಳ್ಳಿ ರಾಮು, ಹರೀಶ್‌ನಾಯ್ಕ, ಸರಸ್ವತಿ, ತಮ್ಮಡಿಹಳ್ಳಿ ನಾಗರಾಜ್ ಮತ್ತಿತರರಿದ್ದರು.----

ಮೋದಿ ಸರ್ಕಾರ ನಾವು ಕೇಳಿದ್ದನ್ನೆಲ್ಲಾ ನೀಡಿದೆ

ಶಿವಮೊಗ್ಗದ ವಿಷಯಕ್ಕೆ ಬಂದಾಗ ನಮಗೆ ಬಜೆಟ್ ವಿಶೇಷ ಏನಲ್ಲ. ಮೋದಿ ಸರ್ಕಾರ ನಾವು ಕೇಳಿದ್ದನ್ನೆಲ್ಲವನ್ನು ನೀಡಿದೆ. ಶಿವಮೊಗ್ಗಕ್ಕೆ ವಿಶೇಷ ಕೊಡುಗೆಯನ್ನು ಕೇಂದ್ರ ಸರ್ಕಾರ ನೀಡಿದೆ.

ಶಿವಮೊಗ್ಗಕ್ಕೆ ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆಯಡಿ ಸುಮಾರು 253 ರಸ್ತೆಗಳಿಗೆ 1210 ಕಿ.ಮೀಟರ್‌ಗೆ 450 ಕೋಟಿ ಕೇಂದ್ರ ಸರ್ಕಾರ ನೀಡಿದೆ. ಈ ಭಾರಿಯ ಹೊಸ ಪಟ್ಟಿಯಲ್ಲಿ ರಾಜ್ಯದ 54 ರಸ್ತೆಗಳಲ್ಲಿ 29 ಶಿವಮೊಗ್ಗಕ್ಕೆ ಬಂದಿದೆ. ಶಿವಮೊಗ್ಗ ಜಿಲ್ಲೆಯ 108 ಗ್ರಾಮಗಳಿಗೆ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ತಲಾ 40 ಲಕ್ಷ ನೀಡಿದೆ. ಆದರೆ ರಾಜ್ಯ ಸರ್ಕಾರ ತಮ್ಮ ಪಾಲು ನೀಡಿಲ್ಲ. ಬಿಎಸ್‌ಎನ್‌ಎಲ್ ಟವರ್ ಅನ್ನು ಶಿವಮೊಗ್ಗ ಜಿಲ್ಲೆಗೆ 300 ನೀಡಿದ್ದು, ಆತ್ಮನಿರ್ಬರ್ ಭಾರತ್ ಯೋಜನೆಯಡಿಯಲ್ಲಿ ನಮ್ಮ ತಂತ್ರಜ್ಞರೇ ಅದನ್ನು ರೂಪಿಸಿದ್ದಾರೆ. ಬಿಎಸ್‌ಎನ್‌ಎಲ್‌ಗೆ 5 ಲಕ್ಷ ಕೋಟಿ ರು. ಸಾಲ ಇತ್ತು. ಕೇಂದ್ರ ಸರ್ಕಾರ ಅದನ್ನು ತೀರಿಸಿ ಮತ್ತೆ ಅದರ ಉನ್ನತೀಕರಣಕ್ಕೆ ಹಣ ನೀಡಿದೆ. ಜಲಜೀವನ್ ಮಿಷನ್ ಯೋಜನೆಯಡಿ ಶಿವಮೊಗ್ಗ ಜಿಲ್ಲೆಗೆ 500ಕ್ಕೂ ಹೆಚ್ಚು ಓವರ್ ಹೆಡ್ ಟ್ಯಾಂಕ್‌ಗಳ ನಿರ್ಮಾಣಮಾಡಿ, 1600 ಕೋಟಿ ರು. ವೆಚ್ಚದಲ್ಲಿ ಪೈಪ್‌ಲೈನ್ ನಿರ್ಮಿಸಿ ನೀರು ತುಂಬುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ. ಇದ್ಯಾವುದರ ಬಗ್ಗೆಯೂ ಕಾಂಗ್ರೆಸ್ ಚಕಾರವೆತ್ತುತ್ತಿಲ್ಲ. ಕೇಂದ್ರದ ಎಲ್ಲಾ ಯೋಜನೆಗಳಿಗೂ ಅಡ್ಡಗಾಲು ಹಾಕಿ ತಪ್ಪುದಾರಿಗೆ ಎಳೆಯುತ್ತಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಳಚೆ ನೀರಲ್ಲಿ ತಟ್ಟೆ ತೊಳೆದ ಪ್ರಕರಣ; ಶಿಕ್ಷಕಿ ಅಮಾನತು
ಅಲೆಮಾರಿ ಜನಾಂಗದವರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿ: ಪಲ್ಲವಿ