ರಾಮನಗರ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೌರವಕ್ಕೆ ಧಕ್ಕೆ ತಂದಿದ್ದು ಬಿಜೆಪಿ ಪಕ್ಷ. ಈಗ ಏಕೆ ಅದೇ ಪಕ್ಷಕ್ಕೆ ಹೋದರು ಎಂಬುದು ಗೊತ್ತಿಲ್ಲ. ಅವರ ಬಿಜೆಪಿ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವ ಡ್ಯಾಮೇಜ್ ಆಗುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದರು.
ಲಕ್ಷ್ಮಣ್ ಸವದಿ, ಜನಾರ್ಧನ ರೆಡ್ಡಿ ಸಹ ಬಿಜೆಪಿ ಸೇರ್ಪಡೆಯಾಗುತ್ತಾರಾ ಎಂಬ ಪ್ರಶ್ನೆಗೆ ಜನಾರ್ಧನರೆಡ್ಡಿ ಅವರದ್ದು ಸ್ವತಂತ್ರ ಪಕ್ಷ, ಲಕ್ಷ್ಮಣ್ ಸವದಿ ನಮ್ಮ ಪಕ್ಷದಲ್ಲಿದ್ದಾರೆ.ಯಾರೂ ಸಹ ಬಿಜೆಪಿಗೆ ಹೋಗುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಕೊರತೆಯಿದೆ, ಬಿಜೆಪಿ ಇನ್ನಷ್ಟು ನಾಯಕರು ಬರುತ್ತಾರೆಂಬ ನಾಯಕರ ಹೇಳಿಕೆಗೆ ಚುನಾವಣೆ ಮುಂಚೆ ಅಷ್ಟೊಂದು ಜನ ಪಕ್ಷ ಬಿಟ್ಟಾಗ ಅವರಲ್ಲಿ ನಾಯಕತ್ವ ಇತ್ತಾ. ಐದು ರಾಜ್ಯಗಳಲ್ಲಿ ಚುನಾವಣೆ ಆದಾಗ 4 ಕೋಟಿ 80 ಲಕ್ಷ ಜನ ಬಿಜೆಪಿಗೆ ಮತ ಕೊಟ್ಟರೆ, ಕಾಂಗ್ರೆಸ್ ಗೆ 4 ಕೋಟಿ 90 ಲಕ್ಷ ಮತ ನೀಡಿದ್ದಾರೆ. ಬಿಜೆಪಿಯವರಿಗಿಂತಲೂ ಹೆಚ್ಚು ಮತ ನಮಗೆ ನೀಡಿದ್ದಾರೆ. ದೇಶದಲ್ಲಿ ಜನ ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ ಎಂದರು.ಕಾಂಗ್ರೆಸ್ ಸರ್ಕಾರ ಪತನಗೊಳ್ಳುತ್ತದೆ ಎಂದು ಬಿಜೆಪಿಯವರು ಹಗಲು ಕನಸು ಕಾಣುತ್ತಿದ್ದಾರೆ. 2018 ರಲ್ಲಿ ಮೈತ್ರಿ ಸರ್ಕಾರ ಬಂದಿತ್ತು. ಆಗ ಲೋಕಸಭೆ ಚುನಾವಣೆಯಲ್ಲಿ 1 ಸ್ಥಾನ ಗೆದ್ದಿತ್ತು. ಆಗ ನಮ್ಮ ರಾಜ್ಯ ಸರ್ಕಾರ ಬಿದ್ದು ಹೋಯಿತು. ಅವರೂ ಏನಾದರೂ ಮಾತನಾಡಲಿ, ನಮ್ಮ ಸರ್ಕಾರ ಸುಭದ್ರವಾಗಿರುತ್ತದೆ ಎಂದು ಹೇಳಿದರು.
ರಾಮನಗರ ಜಿಲ್ಲೆಯಲ್ಲಿ ಕಾಡಾನೆ ದಾಳಿ ನಿಯಂತ್ರಿಸುವ ನಿಟ್ಟಿನಲ್ಲಿ ತಂತಿಬೇಲೆ ಅಳವಡಿಸಲು ಈಗಾಗಲೇ 45 ಕೋಟಿ ರುಪಾಯಿ ಕೊಟ್ಟಿದ್ದೇವೆ. ಬೇಲಿ ಕಾಮಗಾರಿ ಪೂರ್ಣ ಆದ್ರೆ ಸಮಸ್ಯೆ ಪರಿಹಾರ ಸಿಗುತ್ತದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.ಬಾಕ್ಸ್...........
ರಾಮನಗರ: ರಾಮನಗರದ ರಾಮದೇವರ ಬೆಟ್ಟದಲ್ಲಿ ರಾಮಮಂದಿರ ಕಟ್ಟುವ ವಿಚಾರದಲ್ಲಿ ಸ್ಥಳೀಯ ಶಾಸಕರು ಬಿಜೆಪಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮನನ್ನು ಅವರು ಪ್ರತಿಷ್ಠಾಪನೆ ಮಾಡಿದರೆ, ರಾಮನಗರದಲ್ಲಿ ರಾಮನನ್ನು ಸ್ಥಳೀಯ ಶಾಸಕರು ಪ್ರತಿಷ್ಠಾಪನೆ ಮಾಡಲು ಕಂಕಣ ಬದ್ಧರಾಗಿದ್ದಾರೆ ಎಂದರು.ಸಾವಿರಾರು ವರ್ಷಗಳಿಂದ ಶ್ರೀರಾಮನನ್ನು ಪೂಜೆ ಮಾಡುತ್ತಿದ್ದೇವೆ. ಬಿಜೆಪಿಯವರು ರಾಮನ ಒಬ್ಬನನ್ನೇ ಏಕೆ ಪ್ರತಿಷ್ಠಾಪನೆ ಮಾಡಿದರೊ ಗೊತ್ತಿಲ್ಲ. ನಾವು ಧರ್ಮ, ದೇವರನ್ನು ರಾಜಕೀಯಕ್ಕೆ ತರುವುದಿಲ್ಲ. ಬಿಜೆಪಿಯವರು ರಾಜಕೀಯಕ್ಕಾಗಿ ಏನು ಬೇಕಾದರು ಮಾಡುತ್ತಾರೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಗಣೇಶ್ ಭಟ್ ಕೆತ್ತಿರುವ ರಾಮನ ವಿಗ್ರಹಕ್ಕಾಗಿ ಟ್ರಸ್ಟ್ ಗೆ ಪತ್ರ: ಶಾಸಕ
ರಾಮನಗರ: ರಾಮದೇವರ ಬೆಟ್ಟದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಭವ್ಯವಾದ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲು ಕನ್ನಡಿಗ ಗಣೇಶ್ ಭಟ್ ಕೆತ್ತಿರುವ ಶ್ರೀರಾಮ ಮೂರ್ತಿಯನ್ನು ನೀಡುವಂತೆ ಶ್ರೀ ರಾಮ ಜನ್ಮಭೂಮಿ ಕ್ಷೇತ್ರ ಟ್ರಸ್ಟ್ ಗೆ ಪತ್ರ ಬರೆಯುವುದಾಗಿ ಶಾಸಕ ಇಕ್ಬಾಲ್ ಹುಸೇನ್ ಪ್ರತಿಕ್ರಿಯಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮದೇವರ ಬೆಟ್ಟದಲ್ಲಿ ಶ್ರೀ ರಾಮನ ವಿಗ್ರಹ ಪ್ರತಿಷ್ಠಾಪನೆ ಮಾಡುವ ಮೂಲಕ ರಾಮನಗರವನ್ನು ದಕ್ಷಿಣ ಅಯೋಧ್ಯೆಯನ್ನಾಗಿ ಅಭಿವೃದ್ಧಿ ಪಡಿಸುತ್ತೇವೆ. ಗಣೇಶ್ ಭಟ್ ರವರು ಕೆತ್ತಿರುವ ರಾಮನ ವಿಗ್ರಹ ಇಲ್ಲಿ ಪ್ರತಿಷ್ಠಾಪನೆ ಮಾಡಲು ಸೂಕ್ತವೆಂದು ತೀರ್ಮಾನ ಮಾಡಿದ್ದೇವೆ. ವಿಗ್ರಹಕ್ಕಾಗಿ ಟ್ರಸ್ಟ್ ಗೆ ಪತ್ರ ಬರೆಯಲಾಗುವುದು ಎಂದರು.
ವಿಶೇಷವಾಗಿ ರಾಮೋತ್ಸವ ಹಾಗೂ ರಾಮ ಮಂದಿರ ಕಟ್ಟೋದಕ್ಕೆ ತೀರ್ಮಾನ ಮಾಡಿದ್ದೇವೆ ಎಂದು ಇಕ್ಬಾಲ್ ಹುಸೇನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
26ಕೆಆರ್ ಎಂಎನ್ 6,7.ಜೆಪಿಜಿ6.ರಾಮಲಿಂಗಾ ರೆಡ್ಡಿ