ತಮಟೆ ಬಾರಿಸಿ ಸಂಭ್ರಮಿಸಿದ ಮಾಜಿ ಸಚಿವ ಎಚ್. ಆಂಜನೇಯ । ಚಿತ್ರದುರ್ಗದಲ್ಲಿ ಸಹಿ ಹಂಚಿದ ಕಾರ್ಯಕರ್ತರುಕನ್ನಡಪ್ರಭ ವಾರ್ತೆ ಚಿತ್ರದುರ್ಗ ತೆಲಂಗಾಣದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಭಾನುವಾರ ಚಿತ್ರದುರ್ಗ ಕಾಂಗ್ರೆಸ್ ಜಿಲ್ಲಾ ಕಚೇರಿ ಮುಂದೆ ಮಾಜಿ ಸಚಿವ ಅಂಜನೇಯ ತಮಟೆಯನ್ನು ಬಾರಿಸಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರೆ, ಮಹಿಳಾ ಕಾರ್ಯಕರ್ತರು ನೃತ್ಯ ಮತ್ತು ಸಾರ್ವಜನಿಕರಿಗೆ ಸಿಹಿಯನ್ನು ಹಂಚುವುದರ ಮೂಲಕ ವಿಜಯೋತ್ಸವ ಆಚರಣೆ ಮಾಡಲಾಯಿತು.
ತೆಲಂಗಾಣದಲ್ಲಿ ನಡೆದ ಚುನಾವಣೆಯಲ್ಲಿ ಮೋದಿಯವರಿಗೆ ಅಲ್ಲಿನ ಮತದಾರರು ಸ್ಪಷ್ಟವಾದ ಸಂದೇಶ ರವಾನೆ ಮಾಡಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಪ್ರವೇಶ ಇಲ್ಲ ಎಂಬ ಸಂದೇಶವನ್ನು ಚುನಾವಣೆಯ ಮೂಲಕ ನೀಡಿದ್ದಾರೆ. ದಕ್ಷಿಣ ಭಾರತದ ಬಾಗಿಲು ಬಂದ್ ಎಂದು ಬಿಜೆಪಿಯವರಿಗೆ ಸಂದೇಶವನ್ನು ರವಾನಿಸಿದ್ದಾರೆ. ಕಾಂಗ್ರೆಸ್ ತೆಲಗಾಣ ರಾಜ್ಯವನ್ನು ನಿರ್ಮಾಣ ಮಾಡಿತ್ತು. ಇದರ ಪರಿಣಾಮವಾಗಿ ಅಲ್ಲಿನ ಮತದಾರರು ಕೈ ಹಿಡಿದಿದ್ದಾರೆ. ಕರ್ನಾಟಕದಲ್ಲಿ ನೀಡಿ ಗ್ಯಾರಂಟಿ ರೀತಿಯಲ್ಲಿ ಅಲ್ಲಿಯೂ ಸಹಾ ಹಲವಾರು ಗ್ಯಾರಂಟಿಗಳನ್ನು ನೀಡುವುದರ ಮೂಲಕ ಅಧಿಕಾರವನ್ನು ಹಿಡಿಯಲಾಗಿದೆ ಎಂದು ಆಂಜನೇಯ ತಿಳಿಸಿದರು.
ತೆಲಂಗಾಣದ ಮತದಾರರ ಅಸೆಗಳನ್ನು ಇಟ್ಟುಕೊಂಡು ಆಧಿಕಾರವನ್ನು ನೀಡಿದ್ದಾರೆ. ಅದನ್ನು ಅಲ್ಲಿನ ನೂತನ ಸರ್ಕಾರ ಈಡೇರಿಸಲಿದೆ. ಮತದಾರರ ವಿಶ್ವಾಸವನ್ನು ಉಳಿಸಿಕೊಳ್ಳಲಾಗುವುದು. ಮಧ್ಯಪ್ರದೇಶದಲ್ಲಿಯೂ ಸಹ ಬಿಜೆಪಿಯವರು ಮತದಾರರಿಗೆ ಗ್ಯಾರಂಟಿಯನ್ನು ನೀಡುವುದರ ಮೂಲಕ ನಮ್ಮದನ್ನು ಕಾಪಿ ಮಾಡಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳನ್ನು ನೀಡಿದಾಗ ರಾಜ್ಯ ದಿವಾಳಿಯಾ ಗುತ್ತದೆ ಎಂದು ಬೊಬ್ಬೆ ಹೊಡೆಯುತ್ತಿದ್ದ ಬಿಜೆಪಿಯವರು ಮಧ್ಯಪ್ರದೇಶದಲ್ಲಿ ಯಾಕೆ ನಮ್ಮದ್ದನ್ನು ಕಾಪಿ ಮಾಡಿ ಗ್ಯಾರಂಟಿಗಳನ್ನು ನೀಡಿದ್ದಾರೆ ಈಗ ಮತಕ್ಕಾಗಿ ಬಿಜೆಪಿಯವರಿಗೆ ಈಗ ಬಡವರ ಬಗ್ಗೆ ಅನುಕಂಪ ಬಂದಿದೆ ಎಂದು ಟೀಕಿಸಿದರು.ಬಿಜೆಪಿಯವರು ಮತಕ್ಕಾಗಿ ದ್ವಂದ ನೀತಿಯನ್ನು ಅನುಸರಿಸುತ್ತಿದ್ದಾರೆ. ಮತದಾರರನ್ನು ಗೊಂದಲಕ್ಕೆ ಈಡು ಮಾಡುತ್ತಿದ್ದಾರೆ. ನಿಮ್ಮ ನೀತಿ ಒಂದೇ ರೀತಿಯಲ್ಲಿ ಇರಬೇಕಿದೆ. ಗ್ಯಾರಂಟಿಗಳನ್ನು ನೀಡಿದ ಮೇಲೆ ಸಹ ರಾಜ್ಯದಲ್ಲಿ ಸರ್ಕಾರ ಸುಭದ್ರವಾಗಿದೆ. ಬಡವರಿಗಾಗಿ ಹಲವಾರು ಯೋಜನೆಯನ್ನು ನೀಡಲಾಗಿದೆ. ಈಗ ಬಂದಿರುವ ಬರಗಾಲವನ್ನು ಸಹ ಎದುರಿಸಲಾಗುವುದು, ಅದಕ್ಕೆ ಬೇಕಾದ ಸಿದ್ಧತೆಯನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ನಡೆಸಿದ್ದಾರೆ. ವಾಮಮಾರ್ಗಗಳನ್ನು ಅನುಸರಿಸುವುದರಲ್ಲಿ ಬಿಜೆಪಿ ನಿಸ್ಸಿಮ. ಅಧಿಕಾರಕ್ಕಾಗಿ ಏನನ್ನು ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ಈ ಹಿಂದೆ ಮಧ್ಯ ಪ್ರದೇಶದಲ್ಲಿ ನಡೆದ ಘಟನೆಗಳು ಸಾಕ್ಷಿಯಾಗಿದೆ. ಕೇಂದ್ರದಲ್ಲಿ ಕುಳಿತು ರಾಜ್ಯಗಳಲ್ಲಿ ಅಧಿಕಾರವನ್ನು ಹಿಡಿಯಲು ಹಲವಾರು ತಂತ್ರಗಳನ್ನು ಹೆಣೆಯುವುದರಲ್ಲಿ ಬಿಜೆಪಿಯವರು ಮುಂದೆ ಇದ್ದಾರೆ ಎಂದು ಬಿಜೆಪಿಯವರ ಕುತಂತ್ರವನ್ನು ಅಂಜನೇಯ ಖಂಡಿಸಿದರು.
ಡಿಸಿಸಿ ಅಧ್ಯಕ್ಷರಾದ ತಾಜ್ಪೀರ್, ಎನ್.ಡಿ.ಕುಮಾರ್, ಅಂಜನಪ್ಪ ಸೇರಿದಂತೆ ಕಾಂಗ್ರೆಸ್ನ ವಿವಿಧ ಘಟಕಗಳ ಅಧ್ಯಕ್ಷರ ಕಾರ್ಯಕರ್ತರು ಈ ವಿಜಯೋತ್ಸವದಲ್ಲಿ ಭಾಗಿಯಾಗಿದ್ದರು. ಇದಕ್ಕೂ ಮುನ್ನ ಕಾಂಗ್ರೆಸ್ ಕಚೇರಿ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಹೆಜ್ಜೆಯನ್ನು ಹಾಕುವುದರ ಮೂಲಕ ತೆಲಂಗಾಣದ ವಿಜಯವನ್ನು ಆಚರಣೆ ಮಾಡಿದರು.ವಿಜಯೋತ್ಸವದಲ್ಲಿ ತಮಟೆ ಬಾರಿಸಿ ಸಂಭ್ರಮಿಸಿದ ಮಾಜಿಸಚಿವ ಎಚ್.ಆಂಜನೇಯ.