ಶಿರಾಳಕೊಪ್ಪ : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೂ ಕಾರ್ಯಕರ್ತರಿಗೆ ಹೆಚ್ಚಾಗಿ ಸ್ಪಂದಿಸಲು ಆಗುತ್ತಿಲ್ಲ, ಆ ಕಾರಣದಿಂದ ಪ್ರತಿಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪ್ರತಿ ತಾಲೂಕಿನಲ್ಲಿ ಸಮಾವೇಶ ಕೈಗೊಂಡು ಕಾರ್ಯಕರ್ತರಿಗೆ ಅಹವಾಲನ್ನು ಸ್ವೀಕರಿಸುವಂತೆ ವರಿಷ್ಠರು ಸೂಚಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಶಿರಾಳಕೊಪ್ಪ ಹೊರವಲಯದ ನೇರಲಗಿ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ನಡೆದ ತಾಲೂಕು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶದಂತೆ ಹುಮ್ಮಸ್ಸು ತುಂಬುವ ಕಾರ್ಯ ಮಾಡಲಾಗುತ್ತಿದೆ.
ಸೊರಬದಲ್ಲಿ ಎಷ್ಟು ಕೆಲಸ ಮಾಡುತ್ತೇನೆಯೋ ಅದಕ್ಕಿಂತ ಹೆಚ್ಚು ಕೆಲಸ ಶಿಕಾರಿಪುರದಲ್ಲಿ ಮಾಡತ್ತೇನೆ ಎಂದರು.
ಗ್ಯಾರಂಟಿ ಯೋಜನೆಗಾಗಿ ರಾಜ್ಯ ಸರ್ಕಾರ ೫೬ ಸಾವಿರ ಕೋಟಿ ಹಣ ಖರ್ಚು ಮಾಡುತ್ತಿದೆ. ಈ ಯೋಜನೆ ನೇರವಾಗಿ ಫಲಾನುಭವವಿಗಳಿಗೆ ತಲಪುತ್ತಿವೆಯೇ ವಿನಹ ಯಾರೊಬ್ಬರಿಗೂ ಒಂದು ಪೈಸೆ ಕಮಿಷನ್ ಹೋಗುತ್ತಿಲ್ಲ.
ಈ ಹಿಂದಿನ ಸರ್ಕಾರ ೩೭ಸಾವಿರ ಕೋಟಿ ಸಾಲ ಮಾಡಿತ್ತು. ಅದನ್ನು ತೀರಿಸಿ ಮುಂದೆ ಸಾಗುತ್ತಿದ್ದೇವೆ, ಶಿಕ್ಷಣ ಇಲಾಖೆಯಲ್ಲಿ ೩ ಸಾವಿರ ಕೋಟಿ ಸಾಲ ತೀರಿಸಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದ್ದೇವೆ.
ಜಿಲ್ಲಾ ಅಧ್ಯಕ್ಷ ಪ್ರಸನ್ನಕುಮಾರ್, ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ನಾಗರಾಜ ಗೌಡ, ಬಾಲ್ಕಿಷ್, ಮಹದೇವಪ್ಪ, ಕಲಗೋಡ ರತ್ನಾಕರ, ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್, ಬ್ಲಾಕ್ ಅಧ್ಯಕ್ಷ ವೀರನಗೌಡ, ಶಿವಾನಂದ ಸ್ವಾಮಿ, ಬಿಲಾಲ್, ಪುಷ್ಪ ಶಿವಕುಮಾರ್, ಪುರಸಭೆ ಅಧ್ಯಕ್ಷೆ ಮಮತಾ ನಿಂಗಪ್ಪ, ಉಪಾಧ್ಯಕ್ಷ ಮುದಸೀರ್, ಮಹೇಶ್ ತಾಳಗುಂದ ಇದ್ದರು.