ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹಾಗೂ ಈ ಬಗ್ಗೆ ವಿಶೇಷ ತನಿಖೆ ಕೈಗೊಳ್ಳುವಂತೆ ಒತ್ತಾಯಿಸಿ ಗುರುವಾರ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಕೋಟ್ಯಾಂತರ ಹಿಂದೂಗಳ ಪವಿತ್ರ ಕ್ಷೇತ್ರವಾಗಿರುವ ಧರ್ಮಸ್ಥಳದ ವಿರುದ್ಧ ಇತ್ತೀಚೆಗೆ ಕೆಲವರು ಇಲ್ಲಸಲ್ಲದ ಅಪಪ್ರಚಾರ ನಡೆಸುತ್ತಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಧರ್ಮಸ್ಥಳದ ಕುರಿತು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಈ ರೀತಿ ಅಪಪ್ರಚಾರ ನಡೆಸುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅನಾಮಿಕ ವ್ಯಕ್ತಿಯ ಹೇಳಿಕೆ ಆಧರಿಸಿ ರಾಜ್ಯ ಸರ್ಕಾರ ವಿಶೇಷ ತನಿಖಾ ದಳ ರಚಿಸಿ ಕಾರ್ಯಾಚರಣೆ ನಡೆಸಿದರೂ ಅದರಿಂದ ಯಾವುದೇ ಸತ್ಯ ಹೊರಬಂದಿಲ್ಲ. ಜೊತೆಗೆ ತನಿಖೆಯ ವರದಿ ಕೂಡ ಬಿಡುಗಡೆಗೊಂಡಿಲ್ಲ. ಹೀಗಿದ್ದರೂ ಕೆಲವು ಯೂಟ್ಯೂಬರ್ ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಗಳು ಧರ್ಮಸ್ಥಳದ ಬಗ್ಗೆ ದುರುದ್ದೇಶಪೂರಿತ ವರದಿಗಳನ್ನು ಪ್ರಸಾರ ಮಾಡುತ್ತಿದ್ದು, ಇದರಿಂದ ಹಿಂದೂ ಸಮಾಜಕ್ಕೆ ಘಾಸಿ ಉಂಟಾಗಿದೆ ಎಂದು ದೂರಿದರುಇದರ ಹಿಂದೆ ವ್ಯವಸ್ಥಿತ ಪಿತೂರಿ ನಡೆದಿರುವಂತೆ ಕಂಡು ಬಂದಿದೆ. ಹಿಂದೂ ಧಾರ್ಮಿಕ ಕ್ಷೇತ್ರಗಳ ವಿರುದ್ಧ ಕೆಲವರು ಅಪಪ್ರಚಾರದಲ್ಲಿ ತೊಡಗಿರುವುದು ಸ್ಪಷ್ಟವಾಗುತ್ತಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಕುರಿತು ಅಪಮಾನ ಮಾಡಿದವರ ವಿರುದ್ಧ ವಿಶೇಷ ತನಿಖೆ ನಡೆಸಬೇಕು. ಸತ್ಯಾಸತ್ಯತೆಯನ್ನು ಹೊರಗೆ ತರಬೇಕು ಎಂದು ಅಗ್ರಹಿಸಿದರು.
ಹಿಂದೂ ಧಾರ್ಮಿಕ ಕೇಂದ್ರಗಳನ್ನು ಎಡಪಂಥೀಯ, ಕಮ್ಯೂನಿಸ್ಟರ ಒತ್ತಡಗಳಿಂದ ಮತ್ತು ಸುಳ್ಳು ಪ್ರಚಾರಗಳಿಂದ ರಕ್ಷಿಸಲು ಶಾಶ್ವತ ವ್ಯವಸ್ಥೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.ಹಿಂದೂ ಸಮಾಜದ ಭಾವನೆಗಳಿಗೆ ಗೌರವ ನೀಡಿ, ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಪ್ರಮುಖರಾದ ದಿನೇಶ್ ಚೌವ್ಹಾಣ್, ರಮೇಶ್ ಬಾಬು ಜಾದವ್, ಹೆಚ್. ಪ್ರಫುಲ್ಲಚಂದ್ರ, ವಿಶ್ವನಾಥ್, ಬಸವರಾಜ್ ಸಾಳಂಕೆ, ಕಾಂಚನಾ, ಜ್ಯೋತಿ, ಮಂಜುಳಾ, ಉಜ್ವಲ, ವಾಗೀಶ್ ಇನ್ನಿತರರು ಹಾಜರಿದ್ದರು.