ಕನ್ನಡಪ್ರಭ ವಾರ್ತೆ ವಿಜಯಪುರ
ರಾಜ್ಯದ 9 ವಿಶ್ವವಿದ್ಯಾಲಯಗಳನ್ನು ಸರ್ಕಾರ ಮುಚ್ಚಲು ಹೊರಟಿರುವುದು ದುರಂತ. ಉನ್ನತ ಶಿಕ್ಷಣಕ್ಕೆ ಹೆಸರುವಾಸಿಯಾದ ಕರ್ನಾಟಕದ 9 ವಿವಿ ಬಂದ್ ಮಾಡಲು ಮುಂದಾಗಿರುವ ಸರ್ಕಾರದ ನಿರ್ಧಾರ ಸರಿಯಲ್ಲ ಎಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಹೇಳಿದರು.ನಗರದ ಎಬಿವಿಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿಸಿಎಂ ಡಿ.ಕೆ.ಶಿವಕುಮಾರ ನೇತೃತ್ವದ ಉಪಸಮಿತಿ ವಿವಿಗಳನ್ನು ಮುಚ್ಚಲು ವರದಿ ತಯಾರು ಮಾಡಿದೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಿಗಬೇಕೆಂಬ ನಿಟ್ಟಿನಲ್ಲಿ ಈ ಹಿಂದಿನ ಸರ್ಕಾರ ಸ್ಥಾಪನೆ ಮಾಡಿದ ವಿವಿಗಳನ್ನು ರದ್ದು ಮಾಡಲು ಹೊರಟಿದ್ದಾರೆ. ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳಲ್ಲಿ ಸ್ಥಾಪಿತವಾದ ವಿವಿಗಳನ್ನು ರದ್ದು ಮಾಡುವುದಿಂದ ಆ ಜಿಲ್ಲೆಗಳು ಶೈಕ್ಷಣಿಕವಾಗಿ ಮತ್ತಷ್ಟು ಹಿಂದೆ ಬೀಳುತ್ತವೆ. ಯಾವುದೇ ಸಮಸ್ಯೆಗಳಿಗೆ ಸರ್ಕಾರ ಪರಿಹಾರ ಒದಗಿಸಬೇಕಿದೆ. ಸರ್ಕಾರಕ್ಕೆ ಶಿಕ್ಷಣ ಹೊರೆಯಾಗುತ್ತಿದೆ. ವಿವಿಗಳಿಂದ ಲಾಭಾಂಶ ಮಾಡಲು ಇವರು ವಿವಿ ಮಾಡಿದ್ದಾರಾ?, ಸರ್ಕಾರ ವಿವಿಗಳಿಂದ ಲಾಭ ನಿರೀಕ್ಷೆ ಮಾಡಬಾರದು. ವಿವಿಗಳ ಶಿಕ್ಷಣದ ಮೂಲ ಕಲ್ಪನೆಯನ್ನೇ ಇವರು ಹಾಳು ಮಾಡುತ್ತಿದ್ದಾರೆ ಯಾವಯಾವೋ ಯೋಜನೆಗಳಿಗೆಲ್ಲ ₹ 50 ಸಾವಿರ ಕೋಟಿ ಅನುದಾನ ಇಡುತ್ತೀರಿ. ವಿವಿಗಳಿಗಾಗಿ ಕೇವಲ ₹ 350 ಕೋಟಿ ಅನುದಾನ ಕೊಡಲು ಆಗುವುದಿಲ್ಲವೇ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಬೊಕ್ಕಸ ಖಾಲಿ ಮಾಡಿಕೊಂಡಿರುವ ಸರ್ಕಾರಕ್ಕೆ ಮೊನ್ನೆ ದಿನ ಪ್ರತಿಭಟನೆ ಮಾಡಿ ಎಬಿವಿಪಿ ಕಾರ್ಯಕರ್ತರು ಭಿಕ್ಷೆ ಬೇಡಿ ₹ 3528 ಹಣವನ್ನು ಸಿಎಂ ಅವರ ಖಾತೆಗೆ ಹಾಕಿದ್ದಾರೆ. ಎಬಿವಿಪಿಯಿಂದ ನಗರದಲ್ಲಿ ಭಿಕ್ಷಾಟನೆ ಮಾಡಿ ಹಣ ಕೂಡಿ ಸಿಎಂ ಖಾತೆಗೆ ಹಾಕಿದ್ದೇವೆ ಎಂದು ಸಿಎಂ ಖಾತೆಗೆ ಹಣ ಜಮೆ ಮಾಡಿದ ರಸೀದಿ ಪ್ರದರ್ಶಿಸಿದರು. ಮೊನ್ನೆ ನಡೆದ ಎಬಿವಿಪಿ ದುಂಡುಮೇಜಿನ ಸಭೆಯಲ್ಲಿ ವಿವಿಗಳನ್ನು ಮುಚ್ಚಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ತೀರ್ಮಾನಿಸಲಾಗಿದೆ. ಈ ವಿಚಾರವಾಗಿ ಮುಂದಿನ ಒಂದು ವಾರ ರಾಜ್ಯಾದ್ಯಂತ ವಿವಿಧೆಡೆ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ. ಹೋರಾಟದಲ್ಲಿ ಸ್ವಾಮೀಜಿಗಳು, ಶಿಕ್ಷಣ ತಜ್ಞರು ಸಹ ಭಾಗವಹಿಸಲಿದ್ದಾರೆ. ಈ ಸಾಲಿನ ಬಜೆಟ್ನಲ್ಲಿ ಸರ್ಕಾರ ವಿವಿಗಳಿಗೆ ಅನುದಾನ ಕೊಡಲೇಬೇಕು ಎಂದು ಒತ್ತಾಯಿಸಿದರು.ಸ್ಥಾಪನೆಯಾಗಿರುವ ಹೊಸ ವಿಶ್ವವಿದ್ಯಾಲಯಗಳಲ್ಲಿ ಕೆಲವು ಮೂಲಭೂತ ಸಮಸ್ಯೆಗಳು ಇರುವುದು ನಿಜ. ಆ ಕೊರತೆಯನ್ನು ನೀಗಿಸಬೇಕಾದದ್ದು ಸರ್ಕಾರಗಳ ಆದ್ಯತೆ ಆಗಬೇಕು, ಹೊರತು ವಿವಿಗಳನ್ನು ಮುಚ್ಚುವುದು ಪರಿಹಾರವಲ್ಲ. ಸರ್ಕಾರ ಜನಪರ ವಿದ್ಯಾರ್ಥಿಪರ ಕಾರ್ಯ ಮಾಡುವುದೇ ಆದರೆ ಸವಾಲನ್ನು ಸ್ವೀಕರಿಸಿ ಉತ್ತಮ ಗುಣಮಟ್ಟದ ವಿಶ್ವವಿದ್ಯಾಲಯಗಳನ್ನಾಗಿ ನಿರ್ಮಾಣ ಮಾಡಬೇಕೆಂದು ಎಬಿವಿಪಿ ಆಗ್ರಹಿಸಿದರು. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪತ್ರ ಚಳುವಳಿ, ಸಚಿವರ ಕಚೇರಿಗೆ ಮುತ್ತಿಗೆ, ಸಹಿ ಸಂಗ್ರಹ, ರಸ್ತೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಮೂಲಕ ವಿಭಿನ್ನ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಸ್ನೇಹಾ ಹಿರೇಮಠ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಸಂದೀಪ ಅರಳಗುಂಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.