ನರಗುಂದ: ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತ ದೇಶದಲ್ಲಿ ಯಾವುದೇ ಜನಾಂಗದ ಆಚಾರ ವಿಚಾರಗಳಿಗೂ ಧಕ್ಕೆ ಬಾರದಂತೆ ಸಂವಿಧಾನ ರಚಿಸಲಾಗಿದೆ.ದೆಹಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಪ್ರಯತ್ನದಿಂದ ಜಿಲ್ಲೆಯ ಲಕ್ಕುಂಡಿ ವಾಸ್ತುಶಿಲ್ಪದ ಸ್ತಬ್ಧಚಿತ್ರವು ಎದ್ದು ಕಾಣುತ್ತಿರುವುದು ಹೆಮ್ಮೆಯ ವಿಷಯ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಈ ಹಿಂದೆ ಜಗತ್ತಿನಲ್ಲಿ ಆರ್ಥಿಕವಾಗಿ ಅತೀ ಹಿಂದುಳಿದ ಐದು ರಾಷ್ಟ್ರಗಳ ಪೈಕಿ ಭಾರತವು ಒಂದಾಗಿತ್ತು. ಆದರೀಗ ಜಗತ್ತಿನಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ಐದು ರಾಷ್ಟ್ರಗಳ ಪೈಕಿ ಭಾರತವು ಒಂದಾಗಿದೆ. ಪ್ರಧಾನಿ ಮೋದಿ ದೇಶದಲ್ಲಿನ ಜಟೀಲ ಸಮಸ್ಯೆ ಬಗೆಹರಿಸಿದ್ದಾರೆ. ದೇಶದಲ್ಲಿ ಮಹಾಕುಂಭಮೇಳವು ಅತ್ಯಂತ ವೈಭವದಿಂದ ಜರುಗುತ್ತಿದೆ ಎಂದರು.
ತಹಸೀಲ್ದಾರ ಶ್ರೀಶೈಲ ತಳವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಮೂಲ ಸಂವಿಧಾನ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿದೆ. ಸಹೋದರತ್ವ, ಏಕತೆ, ಸಾಮರಸ್ಯ, ಹಲವು ಭಾಷೆಗಳನ್ನೊಂಡ ಭಾರತ ದೇಶ ಏಕತೆಯಿಂದ ಒಗ್ಗಟ್ಟಾಗಿ ಅಭಿವೃದ್ಧಿಯ ಪಥದತ್ತ ಸಾಗಿಸೋಣ ಎಂದರು.ವಿವಿಧ ಶಾಲೆಗಳ ಮಕ್ಕಳಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಯಲಿಗಾರ, ಉಪಾಧ್ಯಕ್ಷೆ ಕಾಶವ್ವ ಮಳಗಿ ಹಾಗೂ ಪುರಸಭೆ ಸದಸ್ಯರು, ತಾಪಂ ಇಓ ಎಸ್.ಕೆ.ಇನಾಮದಾರ, ಬಿಇಓ ಡಾ. ಗುರುನಾಥ ಹೂಗಾರ, ಸಿಪಿಐ ಮಂಜುನಾಥ ನಡುವಿನಮನಿ, ಚಂಬಣ್ಣ ವಾಳದ, ಅಜ್ಜಪ್ಪ ಹುಡೇದ, ವಸಂತ ಜೋಗಣ್ಣವರ, ರಾಚಣ್ಣ ಅಳಗವಾಡಿ, ಶಂಕರ ಪಲ್ಟಣಕರ, ಮುಖ್ಯಾಧಿಕಾರಿ ಪಿ.ಕೆ.ಗುಡದಾರಿ ಸೇರಿದಂತೆ ಮುಂತಾದವರು ಇದ್ದರು.