ರಾಮನಗರ: ಜಿಲ್ಲೆಯಲ್ಲಿ ಬೃಹತ್ ರಸಗೊಬ್ಬರ ಗೋದಾಮು ನಿರ್ಮಾಣಕ್ಕೆ ಪಾದರಹಳ್ಳಿ ಬಳಿ ಜಾಗ ಗುರುತಿಸಿದ್ದು, ಇದಕ್ಕಾಗಿ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ 6 ಕೋಟಿ ಅನುದಾನ ಮಂಜೂರು ಮಾಡಿದೆ ಎಂದು ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಯರೇಹಳ್ಳಿ ಮಂಜು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋದಾಮು ನಿರ್ಮಾಣವಾದರೆ ಇಡೀ ಜಿಲ್ಲೆಯ ಸೊಸೈಟಿಗಳಿಗೆ ಇಲ್ಲಿಂದಲೇ ರಸಗೊಬ್ಬರ ಪೂರೈಕೆ ಆಗಲಿದ್ದು, ಯಾವುದೇ ಕಾರಣಕ್ಕೂ ರಸಗೊಬ್ಬರ ಕೊರತೆ ಉಂಟಾಗುವುದಿಲ್ಲ. ಈ ಹಿಂದೆ ಬೇರೆ ಜಿಲ್ಲೆಗಳಲ್ಲಿದ್ದ ಗೋದಾಮುಗಳಿಂದ ರಸಗೊಬ್ಬರ ಪೂರೈಕೆಯಾಗುತ್ತಿದ್ದ ಕಾರಣ ಕೊರತೆ ಉಂಟಾಗುತ್ತಿತ್ತು. ಸಕಾಲಕ್ಕೆ ದಾಸ್ತಾನು ದೊರೆಯುತ್ತಿರಲಿಲ್ಲ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ತಪ್ಪಲಿದೆ ಎಂದರು.ಈ ಹಿಂದೆ ಎಚ್.ಎನ್.ಅಶೋಕ್ ಅವರು ಜಿಪಂ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಗೋದಾಮು ನಿರ್ಮಾಣಕ್ಕೆ ಪಾದರಹಳ್ಳಿ ಬಳಿ 4 ಎಕರೆ ಜಮೀನು ಗುರುತಿಸಿ ಮೀಸಲಿಡಲಾಗಿತ್ತು. ಅನುದಾನ ತರಲು ಸಹಕರಿಸಿದ ಶಾಸಕರಾದ ಎಚ್.ಸಿ.ಬಾಲಕೃಷ್ಣ ಹಾಗೂ ಇಕ್ಬಾಲ್ ಹುಸೇನ್ ಅವರಿಗೆ ಗೋದಾಮು ನಿರ್ಮಾಣದ ಪೂರ್ಣ ಶ್ರೇಯ ಸಲ್ಲಬೇಕು ಎಂದು ಹೇಳಿದರು.
ಡಿ.7ಕ್ಕೆ ಡಿಸಿಸಿ ಬ್ಯಾಂಕ್ ಚುನಾವಣೆ:ಬೆಂಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಈ ಹಿಂದೆ ಜಿಲ್ಲೆಯಲ್ಲಿ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ಹಾಗೂ ಬಮುಲ್ನಿಂದ ಒಂದು ಸ್ಥಾನ ಸೇರಿದಂತೆ ಒಟ್ಟು 5 ಇದ್ದ ನಿರ್ದೇಶಕ ಸ್ಥಾನಗಳನ್ನು ೮ಕ್ಕೆ ಹೆಚ್ಚಿಸಲಾಗಿದೆ. ಮೂರು ಸೊಸೈಟಿಗೆ ಒಬ್ಬರು ನಿರ್ದೇಶಕರು, 7 ಸೊಸೈಟಿಗೆ ಒಬ್ಬ ಪ್ರತಿನಿಧಿ, 28, 30, 32 ಸೊಸೈಟಿಗೆ ಒಬ್ಬರಂತೆ ನಿರ್ದೇಶಕ ಸ್ಥಾನಗಳಿದ್ದವು. ರೈತರ ಹಿತದೃಷ್ಟಿಯಿಂದ ನಮ್ಮ ನಾಯಕರಾದ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಮಾರ್ಗದರ್ಶನದಲ್ಲಿ ಹಾರೋಹಳ್ಳಿ ತಾಲೂಕಿಗೆ ಒಂದು ನಿರ್ದೇಶಕ ಸ್ಥಾನ, ಕನಿಷ್ಠ 14-15 ಸೊಸೈಟಿಗೆ ಒಂದರಂತೆ ಒಬ್ಬ ನಿರ್ದೇಶಕರನ್ನು ಆಯ್ಕೆ ಮಾಡಿಕೊಳ್ಳಲು ಕ್ಷೇತ್ರ ಪುನರ್ ವಿಂಗಡಣೆ ಮಾಡಲಾಗಿದೆ ಎಂದು ತಿಳಿಸಿದರು.
ಬಿಡಿಸಿಸಿ ಬ್ಯಾಂಕ್ ಬೈಲಾ ಪ್ರಕಾರ ನೂತನ ತಾಲೂಕು ರಚನೆಯಾದಾಗ ರೆಪ್ರೆಸೆಂಟೇಟಿವ್ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಸಮಿತಿ ರಚನೆ ಮಾಡಿಕೊಂಡು ಸಮಗ್ರವಾಗಿ ಚರ್ಚೆ ನಡೆಸಿದ ನಂತರವೇ ನಿಯಮಾನುಸಾರ ಎಲ್ಲರೂ ಒಪ್ಪುವ ಹಾಗೆ ಕ್ಷೇತ್ರ ಪುನರ್ ವಿಂಗಡಣೆ ಮಾಡಿ, ಬಿಡಿಸಿಸಿ ಬ್ಯಾಂಕ್ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಶೇ.95ರಷ್ಟು ಸದಸ್ಯರು ನಿರ್ಣಯವನ್ನು ಅಂಗೀಕಾರ ಮಾಡಿದ್ದಾರೆ.ಇದನ್ನು ಪ್ರಶ್ನಿಸಿ ಇಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದರು. ವಾದ, ವಿವಾದ ಆಲಿಸಿದ ನ್ಯಾಯಾಲಯ ಅಂತಿಮವಾಗಿ ನಮ್ಮ ಪರವಾಗಿಯೇ ತೀರ್ಪು ನೀಡಿದೆ. ಭೌಗೋಳಿಕವಾಗಿ ಹಾಗೂ ರೈತರಿಗೆ ಅನುಕೂಲವಾಗುವಂತಹ ಕಾರ್ಯವನ್ನೇ ಮಾಡಿದ್ದಾರೆ ಎಂದು ಆದೇಶದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ಈ ಹಿನ್ನೆಲೆಯಲ್ಲಿ ಡಿಸಿಸಿ ಬ್ಯಾಂಕ್ಗೆ ಡಿ.7ಕ್ಕೆ ಚುನಾವಣೆ ನಿಗದಿಯಾಗಿದೆ. ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ, ಹಾರೋಹಳ್ಳಿ, ಬೆಂಗಳೂರು ದಕ್ಷಿಣ, ಸೋಲೂರು ಹಾಗೂ ಬಮುಲ್ನಿಂದ ಒಂದು ಸ್ಥಾನ ಸೇರಿದಂತೆ ಒಟ್ಟು 8 ಸ್ಥಾನಗಳಿಗೆ ಹೆಚ್ಚಳವಾಗಿದೆ. ಇದಕ್ಕೆ ಸಹಕರಿಸಿದ ಡಿಕೆಶಿ ಸಹೋದರರು, ಶಾಸಕರಾದ ಎಚ್.ಸಿ.ಬಾಲಕೃಷ್ಣ, ಇಕ್ಬಾಲ್ ಹುಸೇನ್, ಸಿ.ಪಿ.ಯೋಗೇಶ್ವರ್ ಸೇರಿದಂತೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಯರೇಹಳ್ಳಿ ಮಂಜು ತಿಳಿಸಿದರು.ತಾಪಂ ಮಾಜಿ ಅಧ್ಯಕ್ಷ ಜಗದೀಶ್ ಮಾತನಾಡಿ, ಕ್ಯಾಸಾಪುರ ಸೊಸೈಟಿಗೆ ಹಿಂದಿನಿಂದಲೂ ಅವಿರೋಧವಾಗಿಯೇ ನಿರ್ದೇಶಕರು, ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಈ ಬಾರಿ ಮಾತುಕತೆ ಮೂಲಕ ಪದಾಧಿಕಾರಿಗಳ ಆಯ್ಕೆ ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಚುನಾವಣೆ ಅನಿವಾರ್ಯವಾಯಿತು ಎಂದು ಹೇಳಿದರು.
ಎರಡೂ ಪಕ್ಷಗಳು ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿದ ಪರಿಣಾಮ ಜಿದ್ದಾಜಿದ್ದಿ ಚುನಾವಣೆ ನಡೆಯಿತು. ಒಟ್ಟು 12 ಸ್ಥಾನಗಳ ಪೈಕಿ 8 ಸ್ಥಾನಗಳನ್ನು ಗೆಲ್ಲುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದ್ದು, ಸಂಘದ ಸಿಇಒ ಒಂದು ಸ್ಥಾನ ಸೇರಿದಂತೆ ಒಟ್ಟು 9 ಸ್ಥಾನಗಳಿದ್ದು, ಸ್ಪಷ್ಟ ಬಹುಮತ ಹೊಂದಿದೆ. 8 ಸ್ಥಾನ ಗೆಲ್ಲಲು ಕಾರಣೀಭೂತರಾದ ಎಲ್ಲಾ ಮುಖಂಡರು, ಯುವ ನಾಯಕರು, ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.ಇದೇ ವೇಳೆ ನೂತನ ನಿರ್ದೇಶಕರಾದ ಕೆ.ಎನ್.ಶ್ರೀಧರ್, ಡಿ.ಪಿ.ನರಸಿಂಹಮೂರ್ತಿ, ಚಂದ್ರಶೇಕರ್, ಲೋಕೇಶ, ಲಿಂಗೇಗೌಡ, ಪೆದ್ದಣ್ಣ, ಜಯಮ್ಮ, ವಿನೋದ ಕೆ.ಪಟೇಲ್, ನಾಗಮಣಿ.ಎನ್, ಶಕುಂತಲ, ನಾಗರಾಜ, ಎಸ್.ಎಂ.ಕೃಷ್ಣೇಗೌಡ ಅವರನ್ನು ಅಭಿನಂದಿಸಲಾಯಿತು.
27ಕೆಆರ್ ಎಂಎನ್ 3.ಜೆಪಿಜಿರಾಮನಗರ ತಾಲೂಕಿನ ಕ್ಯಾಸಾಪುರ ಸೊಸೈಟಿ ಚುನಾವಣೆಯಲ್ಲಿ ಆಯ್ಕೆಯಾದ ನೂತನ ನಿರ್ದೇಶಕರನ್ನು ಅಭಿನಂದಿಸಲಾಯಿತು.